ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ
ನವದೆಹಲಿ, ಜ.21: ಬೆಂಗಳೂರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ಸಿಗೆ ಸೇರಿದ್ದಾಗಿದೆ. ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂಬ ಸಿಟಿ ಸಿವಿಲ್ ಕೋರ್ಟ್ ಆದೇಶ ಹಾಗೂ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
'ಜೆಡಿಎಸ್ ಕಚೇರಿ ಕಾಂಗ್ರೆಸ್ ಗೆ ಸೇರಿದೆ' ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ರಾಧಾ ಕೃಷ್ಣನ್ ಅವರು ಮಂಗಳವಾರ (ಜ.21) ಮಹತ್ವದ ತೀರ್ಪು ನೀಡಿದ್ದಾರೆ. 2015 ಜ.1ರೊಳಗೆ ಜೆಡಿಎಸ್ ತನ್ನ ಕಚೇರಿ ಖಾಲಿ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ. ಮಾ.31, 2014ಕ್ಕೆ ಜೆಡಿಎಸ್ ತನ್ನ ಕಚೇರಿ ಮೇಲೆ ಹಿಡಿತ ಕಳೆದುಕೊಂಡಿದೆ. ಕಚೇರಿ ಖಾಲಿ ಮಾಡಲು ಮೂರು ತಿಂಗಳ ಹೆಚ್ಚುವರಿ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಆದೇಶಿಸಲಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಲ್ಲಿ(ಅಕ್ಟೋಬರ್ 11,2013) ಜಾತ್ಯಾತೀತ ಜನತಾ ದಳ ತನ್ನ ಕೇಂದ್ರ ಕಚೇರಿ ಮೂರು ತಿಂಗಳೊಳಗೆ ಎತ್ತಂಗಡಿ ಮಾಡಬೇಕಾಗಿದೆ. ಹಾಲಿ ಕಚೇರಿಯನ್ನು ಈಗ ಇರುವ ಸ್ಥಿತಿಯಲ್ಲೇ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ನೀಡತಕ್ಕದ್ದು. ಜತೆಗೆ ಕೋರ್ಟ್ ಶುಲ್ಕ ಕೂಡಾ ಪಾವತಿಸಲು ಸೂಚನೆ ನೀಡಲಾಗಿತ್ತು.
ಇದಕ್ಕೂ ಮುನ್ನ ಜೆಡಿಎಸ್ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಸಿಟಿ ಸಿವಿಲ್ ಕೋರ್ಟ್ 2005ರಲ್ಲೇ ಆದೇಶ ನೀಡಿತ್ತು. ಮೂರು ವರ್ಷಗಳ ಹಿಂದೆ ಕೂಡ ಹೈಕೋರ್ಟ್ ಈ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಆದೇಶ ಕೊಟ್ಟಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಜೆಡಿಎಸ್ ನಾಯಕರು ವಿಭಾಗೀಯ ಪೀಠಕ್ಕೆ ಮನವಿ ಮಾಡಿದ್ದರು. ಮೂರು ವರ್ಷಗಳ ನಂತರ ತೀರ್ಪು ನೀಡಿರುವ ವಿಭಾಗೀಯ ಪೀಠ ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದಿತ್ತು.
ವಿವಾದದ ಹಿನ್ನೆಲೆ: 1969ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಕಾಂಗ್ರೆಸ್ ಎಂದು ಎರಡು ಹೋಳಾಯಿತು. ಆಗ ಸಂಸ್ಥಾ ಕಾಂಗ್ರೆಸ್ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಈ ಕಚೇರಿ ಕಾಂಗ್ರೆಸ್ ಕಚೇರಿಯಾಗಿಯೇ ಇತ್ತು.
ಇಂದಿರಾಗಾಂಧಿ ಕಾಂಗ್ರೆಸ್ ಬಣದಲ್ಲಿ ಗುರುತಿಸಿಕೊಂಡಿದ್ದ ಯುವ ಕಾಂಗ್ರೆಸ್ ಮುಖಂಡರಾಗಿದ್ದ ರಘುಪತಿ ಈ ಕಚೇರಿಯನ್ನು ತಮ್ಮ ವಶಕ್ಕೆ ಪಡೆಯಲು ಅನೇಕ ಬೆಂಬಲಿಗರೊಂದಿಗೆ ಕಚೇರಿಗೆ ನುಗ್ಗಿ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದರು. ಆದರೆ, ಫಲ ಸಿಕ್ಕಿರಲಿಲ್ಲ.
ನಂತರ ಸಂಸ್ಥಾ ಕಾಂಗ್ರೆಸ್ ನ ಮುಖಂಡರೆಲ್ಲರೂ ಜನತಾ ಪರಿವಾರಕ್ಕೆ ಬಂದಿದ್ದರಿಂದ ಈ ಕಚೇರಿ ಜನತಾ ಪರಿವಾರ, ಆ ನಂತರ ಜನತಾದಳದ ವಶಕ್ಕೆ ಬಂದಿತ್ತು. ಸುಮಾರು 30 ವರ್ಷಗಳಿಂದಲೂ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಾನೂನು ಹೋರಾಟ ನಡೆಯುತ್ತಲೇ ಬಂದಿದ್ದು, ಈಗ ವಿಭಾಗೀಯ ಪೀಠ ಈ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಆದೇಶ ನೀಡಿತ್ತು. ಈಗ ಸುಪ್ರೀಂಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿದೆ.