ಅಪವಿತ್ರ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ: ಅನಂತ ಕುಮಾರ್
Recommended Video
ಬೆಂಗಳೂರು, ಆಗಸ್ಟ್ 27: ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿ ಶುರುವಾದ ದಿನದಿಂದಲೇ ಅವರಲ್ಲಿ ಶೀತಲ ಸಮರ ನಡೆಯುತ್ತಿದೆ. ಚುನಾವಣೆಯಲ್ಲಿ ಪರಸ್ಪರ ಟೀಕೆ ಮಾಡಿಕೊಂಡು ಸೋಲಿಸಲು ಪ್ರಯತ್ನ ಪಟ್ಟ ಎದುರಾಳಿಗಳು ಹೇಗೆ ಒಟ್ಟಿಗೆ ಸರಕಾರ ನಡೆಸಲು ಸಾಧ್ಯ.
ಆದ್ದರಿಂದ ಮೊದಲ ದಿನವೇ ಹೇಳಿದ ಹಾಗೆ ಎಚ್ ಡಿ ಕುಮಾರಸ್ವಾಮಿ ಸರಕಾರ ಬಾಲಗ್ರಹ ಪೀಡಿತವಾಗಿದ್ದು, ಬಹಳದಿನ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದರು.
ಸಮ್ಮಿಶ್ರ ಸರ್ಕಾರ ಪಥನದ ಬಗ್ಗೆ ಭವಿಷ್ಯ ನುಡಿದಿದ್ದಾರೆ ಸದಾನಂದಗೌಡ
ತಮ್ಮ ನಿವಾಸದಲ್ಲಿಂದು ರಕ್ಷಾಬಂಧನ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರಕಾರ ಉರುಳಿಸಲು ವಿರೋಧ ಪಕ್ಷವಾದ ಬಿಜೆಪಿ ಏನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಅದರ ಅಗತ್ಯವೇ ಇಲ್ಲದೆ ಈ ಅಪವಿತ್ರ ಮೈತ್ರಿ ಸರಕಾರ ತನ್ನ ಆಂತರಿಕ ವಿರೋಧಾಭಾಸದಿಂದ ತಾನಾಗಿಯೇ ಉರುಳಲಿದೆ, ಆ ಪ್ರಕ್ರಿಯೆ ಈಗ ಶುರುವಾಗಿದೆ ಎಂದರು.
'ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್'
ಸರಕಾರ ಉರುಳಿದರೆ ಬಿಜೆಪಿಯ ನಡೆ ಏನು ಇರಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಆಗ ಹೊಸ ರಾಜಕೀಯ ಸಮೀಕರಣ ಆಗುತ್ತದೆ. ರಾಜ್ಯದ ಜನರು ಹೊಸ ಸಮೀಕರಣಕ್ಕಾಗಿ ಕಾಯುತ್ತಿದ್ದಾರೆ.
ಅಲ್ಪಕಾಲದ ಮೈತ್ರಿಕೂಟ ಆಗಿದೆ ಎಂದರು
ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷಕ್ಕೆ ಜನರು ಬಹುದೊಡ್ಡ ಪಕ್ಷದ ಮಾನ್ಯತೆಯನ್ನು ನೀಡಿದ್ದಾರೆ. ಬಹುಮತದಿಂದ ಸ್ವಲ್ಪ ದೂರ ಉಳಿದಿರಬಹುದು. ಆದರೆ, ಜನರ ಒಪ್ಪಿಗೆ ಪಡೆದಿರುವ ಮಾನ್ಯತೆ ಇದಾಗಿದೆ.
ಆದರೆ, ಕಾಂಗ್ರೆಸ್ ನ ಹುನ್ನಾರದಿಂದ ಈ ಹಿಂಬಾಗಿಲಿನ ಮೈತ್ರಿ ಕೂಟ ನಿರ್ಮಾಣವಾಗಿದೆ. ಇಂತಹ ಅಪವಿತ್ರ ಮೈತ್ರಿ ಕೂಟ ಅಲ್ಪಕಾಲದ ಮೈತ್ರಿಕೂಟ ಆಗಿದೆ ಎಂದರು.ಸರಕಾರ ಪತನವಾದರೆ ಏನಾಗಲಿದೇ ಎನ್ನುವ ಭವಿಷ್ಯವನ್ನು ಈಗಲೇ ನುಡಿಯುವುದು ಸಾಧ್ಯವಿಲ್ಲ ಎಂದ ಸಚಿವರು, ಕಾಲ ಮತ್ತು ಸನ್ನಿವೇಶ ಹೇಗೆ ನಿರ್ಮಾಣವಾಗುತ್ತದೆ ಎಂದು ಕಾದು ನೋಡಬೇಕು ಎಂದರು.
ಆದರೆ, ರಾಜಕಾರಣದಲ್ಲಿ ಒಂದು ಸೂತ್ರ ಇದೆ ರಾಜಕಾರಣದಲ್ಲಿ ಯಾವಗಲೂ ನಿರ್ವಾತ ಇರುವುದಿಲ್ಲ. ಬಿಜೆಪಿಗೆ ಬಹುಮತದ ಹತ್ತಿರದ ಜನರ ಮಾನ್ಯತೆ ಇದೆ ಎಂದು ಉತ್ತರಿಸಿದರು.
ತೆಲಂಗಾಣ ರಾಜ್ಯದ ಗಡಿ ಒತ್ತುವರಿ ಬಗ್ಗೆ
ತೆಲಂಗಾಣ ರಾಜ್ಯದಿಂದ ಗಡಿ ಪ್ರದೇಶದದಲ್ಲಿ ಒತ್ತುವರಿಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ರಾಜ್ಯಕ್ಕೆ ಗಡಿ ರೇಖೆ ಇದೆ. ಅದು ನಿಶ್ಚಿತವಾಗಿದೆ. ಅದನ್ನು ಕಾಪಾಡುವ ಜವಾಬ್ದಾರಿ ರಾಜ್ಯ ಸರಕಾರದ್ದು. ಈ ವಿಷಯದ ಬಗ್ಗೆ ರಾಜ್ಯ ಸರಕಾರ ಒಂದೇ ಒಂದು ಕ್ಷಣ ವ್ಯರ್ಥ ಮಾಡದೇ ನಮ್ಮ ಮುಖ್ಯಮಂತ್ರಿಗಳು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಬಿಬಿಎಂಪಿ ಸಾರಿಗೆ ಉಪಕರದ ಬಗ್ಗೆ
ಬಿಬಿಎಂಪಿ ನಗರದ ಜನತೆಯ ಮೇಲೆ ಹೇರಲು ಹೊರಟಿರುವ ಸಾರಿಗೆ ಉಪ ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇದೊಂದು ಆಶ್ಚರ್ಯಕರ ಬೆಳವಣಿಗೆ. ಬಿಬಿಎಂಪಿ ಯಲ್ಲಿ ಸೋರಿಕೆಯನ್ನು ತಡೆಗಟ್ಟಿದರೆ ಸಾಕಷ್ಟು ಹಣವನ್ನು ಉಳಿಸಬಹುದಾಗಿದೆ. ಆದನ್ನ ಬಿಟ್ಟು ಕೇವಲ 40 ಕೋಟಿ ರೂಪಾಯಿ ಸಂಗ್ರಹಣೆಗೆ ಜನರ ಮೇಲೆ ಮತ್ತೆ ತೆರಿಗೆ ಹಾಕುವುದು ಸರಿಯಲ್ಲ ಎಂದರು. ಮೊದಲು ಸೋರಿಕೆಯಾಗುತ್ತಿರುವ ಹಣವನ್ನು ತಡೆಗಟ್ಟುವ ಮೂಲಕ ಅಭಿವೃದ್ದಿ ಚಟುವಟಿಕೆಗಳಿಗೆ ಬಳಿಸಿ ಎಂದರು.
ರಕ್ಷಾಬಂಧನದ ಬಗ್ಗೆ
ರಕ್ಷಾಬಂಧನ ದೇಶದ ಎಲ್ಲಾ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆಯನ್ನು ಕಟ್ಟವಂತಹ ಅತ್ಯಂತ ಮಧುರವಾದ, ಶುಭವಾದ ಮತ್ತು ಪವಿತ್ರವಾದ ಸಂಧರ್ಭವಾಗಿದೆ. ನಮಗೆ ರಕ್ಷಣೆ ನೀಡಿ ಎನ್ನುವ ಸಾಂಕೇತಿಕ ಆಚರಣೆ ಇದಾಗಿದೆ. ಇಂದು ಪರಸ್ಪರರನ್ನು ರಕ್ಷಣೆ ಮಾಡಿಕೊಂಡು ಎಲ್ಲಾ ಸೇರಿ ಭಾರತ ಮಾತೆಯ ರಕ್ಷಣೆ ಮತ್ತು ಪ್ರಕೃತಿ ಮಾತೆಯ ರಕ್ಷಣೆ ಮಾಡುತ್ತೇವೆ ಎನ್ನುವ ಕಂಕಣ ಮಾಡುವ ಶುಭ ಸಂಧರ್ಭ ಇದಾಗಿದೆ ಎಂದರು.