ಆರ್.ಆರ್.ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮುನಿರತ್ನ ಎಂಎಲ್ಸಿ?
ಬೆಂಗಳೂರು, ಮೇ 21 : ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ?.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಯನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯುವ ಸಾಧ್ಯತೆ ಇದೆ.
ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು
ಮೇ 6ರಂದು ಆರ್.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷ ರೂ. ಹಣ ಟ್ರಕ್ನಲ್ಲಿ ಪತ್ತೆಯಾಗಿತ್ತು. ಜಾಲಹಳ್ಳಿ ಸಮೀಪದ ಎಸ್ಎಲ್ವಿ ಅಪಾರ್ಟ್ಮೆಂಟ್ನಲ್ಲಿ 9,746 ವೋಟರ್ ಐಡಿಗಳು ಪತ್ತೆಯಾಗಿದ್ದವು. ಆದ್ದರಿಂದ, ಚುನಾವಣೆಯನ್ನು ಮುಂದೂಡಲಾಗಿದೆ.
ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಆರ್ ಆರ್ ನಗರದಲ್ಲಿ ಜೆಡಿಎಸ್ ಗೆ ಜಯ
ಮೇ 28ರಂದು ರಾಜರಾಜೇಶ್ವರಿ ನಗರದ ಚುನಾವಣೆ ನಡೆಯಲಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ. ಸೋಮವಾರ ಮೈತ್ರಿ ಮಾತುಕತೆ ಸುದ್ದಿ ಹಬ್ಬಿದ್ದು, ಮುನಿರತ್ನ ಅವರು ಸಹ ಇದಕ್ಕೆ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ
ಆರ್.ಆರ್.ನಗರದಲ್ಲಿ ಮೈತ್ರಿ?
ಸೋಮವಾರ ಹಬ್ಬಿರುವ ಸುದ್ದಿಗಳ ಪ್ರಕಾರ ಆರ್.ಆರ್.ನಗರ ಕ್ಷೇತ್ರದ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಮೇ 28ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ.
ಕಾಂಗ್ರೆಸ್ನಿಂದ ಮುನಿರತ್ನ, ಜೆಡಿಎಸ್ನಿಂದ ಜಿ.ಎಚ್.ರಾಮಚಂದ್ರ, ಬಿಜೆಪಿಯಿಂದ ಮುನಿರಾಜು ಗೌಡ ಅವರು ಕ್ಷೇತ್ರದ ಅಭ್ಯರ್ಥಿಗಳು. ಕಾಂಗ್ರೆಸ್ ಜೆಡಿಎಸ್ನ ಜಿ.ಎಚ್.ರಾಮಚಂದ್ರ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.
ನಿಖಿಲ್ ಕುಮಾರಸ್ವಾಮಿ ಸಂಧಾನ?
ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜೊತೆ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಬೆಂಬಲಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುನಿರತ್ನ ಅವರು ಜೆಡಿಎಸ್ ಬೆಂಬಲಿಸಲು ಒಪ್ಪಿಗೆ ನೀಡಿದ್ದಾರೆ. ಆದರೆ, ತಮಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡುವರೇ? ಕಾದು ನೋಡಬೇಕು.
ಜೆಡಿಎಸ್ ಗ್ರೂಪ್ನಲ್ಲಿ ಸುದ್ದಿ
ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜೊತೆ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ ಎಂದು ಜೆಡಿಎಸ್ನ ವಾಟ್ಸಪ್, ಫೇಸ್ಬುಕ್ ಗ್ರೂಪ್ಗಳಲ್ಲಿ ಚರ್ಚೆ ನಡೆಯುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ಮುನಿರತ್ನ ನಿರ್ಮಾಣ ಮಾಡಿರುವ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯುವಿನ ಪಾತ್ರ ಮಾಡಿದ್ದಾರೆ. ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದು, ಮಾತುಕತೆ ನಡೆಸಿರುವ ಸಾಧ್ಯತೆ ಇದೆ.
ಜಿ.ಎಚ್.ರಾಮಚಂದ್ರ, ಮುನಿರಾಜು ಗೌಡ ಪೈಪೋಟಿ
ಆರ್.ಆರ್.ನಗರದಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಜೆಡಿಎಸ್ನಿಂದ ಜಿ.ಎಚ್.ರಾಮಚಂದ್ರ ಅವರಿಗೆ ಬೆಂಬಲ ನೀಡಿದರೆ ಚುನಾವಣೆ ಕುತೂಹಲದ ಕಾರಣವಾಗಲಿದೆ. ಬಿಜೆಪಿಯಿಂದ ಮುನಿರಾಜು ಗೌಡ ಅವರು ಕಣದಲ್ಲಿದ್ದಾರೆ.
ಜಿ.ಎಚ್.ರಾಮಚಂದ್ರ ಅವರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಅವರು ಮುನಿರಾಜು ಗೌಡ ನಡುವೆ ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಹುಚ್ಚ ವೆಂಕಟ್ ಕಣದಲ್ಲಿ
ಆರ್.ಆರ್.ನಗರ ಕ್ಷೇತ್ರದ ಚುನಾವಣೆ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ಮೂರು ಪ್ರಮುಖ ಪಕ್ಷಗಳ ಹೊರತಾಗಿ ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಕುಕ್ಕರ್ ಹಂಚಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹುಚ್ಚ ವೆಂಕಟ್ ಆರೋಪಿಸಿದ್ದಾರೆ. ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿಯಾಗಿದ್ದು ಚಪ್ಪಲಿ ಚಿನ್ಹೆಯನ್ನು ಪಡೆದಿದ್ದಾರೆ. ಅವರಿಗೆ ಎಷ್ಟು ಮತ ಬರಲಿದೆ? ಎಂದು ಕಾದು ನೋಡಬೇಕು.