ಬಿಬಿಎಂಪಿ ಮೈತ್ರಿ : ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟ ಜೆಡಿಎಸ್!
ಬೆಂಗಳೂರು, ಆಗಸ್ಟ್ 26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಮೈತ್ರಿ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತುಕತೆ ನಡೆಯುತ್ತಿದೆ. ಸದ್ಯ, ಮಾಹಿತಿ ಪ್ರಕಾರ ಜೆಡಿಎಸ್ ಈ ಬಾರಿ ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ನಡೆ ಕುತೂಹಲ ಮೂಡಿಸಿದೆ.
ಮೇಯರ್ ಆಗಿರುವ ಬಿ.ಎನ್.ಮಂಜುನಾಥ್ ರೆಡ್ಡಿ (ಕಾಂಗ್ರೆಸ್) ಮತ್ತು ಉಪ ಮೇಯರ್ ಎಸ್.ಪಿ.ಹೇಮಲತಾ (ಜೆಡಿಎಸ್) ಅವರ ಅಧಿಕಾರಾವಧಿ ಸೆಪ್ಟೆಂಬರ್ 14ರಂದು ಕೊನೆಗೊಳ್ಳಲಿದೆ. ಸೆ.19ರಂದು ನೂತನ ಮೇಯರ ಆಯ್ಕೆಗೆ ಚುನಾವಣೆ ನಡೆಯಲಿದೆ.[ಬಿಬಿಎಂಪಿ ಮೇಯರ್ ಚುನಾವಣೆ : ಜೆಡಿಎಸ್ ಬೆಂಬಲ ಯಾರಿಗೆ?]
ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಂದು ವೇಳೆ ಹಿಂದಿನ ವರ್ಷದಂತೆ ಮೈತ್ರಿ ಮುಂದುವರೆದರೆ ಪ್ರಕಾಶ್ನಗರ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಜಿ. ಪದ್ಮಾವತಿ ಅವರು ಮೇಯರ್ ಆಗಲಿದ್ದಾರೆ ಎಂಬುದು ಸದ್ಯದ ಸುದ್ದಿ.[ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!]
ಬಿ.ಎನ್.ಮಂಜುನಾಥ್ ರೆಡ್ಡಿ ಮತ್ತು ಆಡಳಿತ ಪಕ್ಷದ ನಾಯಕ, ದತ್ತಾತ್ರೇಯ ವಾರ್ಡ್ನ ಕಾಂಗ್ರೆಸ್ ಸದಸ್ಯ ಆರ್.ಎಸ್. ಸತ್ಯನಾರಾಯಣ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಗೌಡರು ಎಚ್.ಡಿ.ಕುಮಾರಸ್ವಾಮಿ ಅವರ ಕಡೆ ಕೈ ತೋರಿಸಿದ್ದಾರೆ...[ಶಾಸಕರ ಅಮಾನತು : ಬಿಬಿಎಂಪಿ ಮೈತ್ರಿಗೆ ಧಕ್ಕೆ?]
'ಇನ್ನೂ ಚರ್ಚೆ ನಡೆದಿಲ್ಲ'
ಬಿಬಿಎಂಪಿ ಮೈತ್ರಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಈ ಸಂಬಂಧ ಮಾತುಕತೆ ನಡೆದಿದೆ. ಸ್ಥಾನ ಹಂಚಿಕೆ ವಿಷಯ ಇನ್ನೂ ಚರ್ಚೆ ಆಗಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ಜೊತ ಮಾತುಕತೆ ಅಂದ್ರು ಗೌಡರು
ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವ ಬಗ್ಗೆ ಕಾಂಗ್ರೆಸ್ ಮಾತುಕತೆ ಆರಂಭಿಸಿದೆ. ತಮ್ಮನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿರುವ ದೇವೇಗೌಡರು, ಕುಮಾರಸ್ವಾಮಿ ಅವರ ಜತೆಗೆ ಸಮಾಲೋಚಿಸಿ ನಿರ್ಧಾರ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕುತೂಹಲ ಮೂಡಿಸಿರುವ ಬಿಜೆಪಿ ನಡೆ
ಇತ್ತ ಪಾಲಿಕೆಯಲ್ಲಿ 100 ಸದಸ್ಯ ಬಲ ಹೊಂದಿರುವ ಬಿಜೆಪಿ ಜೆಡಿಎಸ್ ಜೊತೆ ಸೇರಿ ಮೇಯರ್ ಪಟ್ಟಕ್ಕೇರುವ ಲೆಕ್ಕಾಚಾರ ನಡೆಸಿದೆ. ಈ ಕುರಿತು ಮಾತನಾಡಿರುವ ಆರ್.ಅಶೋಕ್ ಅವರು, 'ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಈ ಬಗ್ಗೆ ದೇವೇಗೌಡ ಅವರೊಂದಿಗೆ ಅಂತಿಮ ಸುತ್ತಿನ ಮೈತ್ರಿ ಮಾತುಕತೆ ನಡೆಸುತ್ತೇವೆ. ಕುಮಾರಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ' ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.
ಶಾಸಕರ ಚಿತ್ತ ಎತ್ತ?
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ ಶಾಸಕರಾದ ಜಮೀರ್ ಅಹಮದ್ ಖಾನ್, ಗೋಪಾಲಯ್ಯ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಜೆಡಿಎಸ್ ಅಮಾನತು ಮಾಡಿದೆ. ಬಿಬಿಎಂಪಿಯಲ್ಲಿರುವ ಜೆಡಿಎಸ್ನ 14 ಸದಸ್ಯರ ಪೈಕಿ ಎಂಟು ಸದಸ್ಯರು ಈ ಮೂವರು ಶಾಸಕರ ಬಲದಿಂದ ಗೆದ್ದವರು. ಆದ್ದರಿಂದ, ಈ ಶಾಸಕರ ಚಿತ್ತ ಎತ್ತ ಎಂಬುದು ಖಚಿತವಾಗಿಲ್ಲ.
ಬಿಬಿಎಂಪಿಯಲ್ಲಿನ ಬಲಾಬಲದ ವಿವರಗಳು
ಅಂದಹಾಗೆ 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ ಮೇಯರ್ ಸ್ಥಾನ ಕೈತಪ್ಪಿತು.