ಬಿನ್ನಿಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು: ಅಮ್ಮನ ಕ್ಷೇತ್ರದಲ್ಲಿ ಗೆದ್ದ ಮಗಳು
ಬೆಂಗಳೂರು, ಜೂನ್ 20: ಬೆಂಗಳೂರು ಮಹಾನಗರ ಪಾಲಿಕೆಯ ಬಿನ್ನಿಪೇಟೆ ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಇದರಿಂದ ಕಾಂಗ್ರೆಸ್ನ ನೆಲೆಯಾಗಿದ್ದ ಬಿನ್ನಿಪೇಟೆ, ಈಗ ಜೆಡಿಎಸ್ನತ್ತ ವಾಲಿದೆ.
ಇದರಿಂದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ತೀವ್ರ ಮುಖಭಂಗವಾಗಿದೆ. ದಿನೇಶ್ ಗುಂಡೂರಾವ್ ಅವರ ಶಿಷ್ಯರಾಗಿದ್ದ ಮಾಜಿ ಕಾರ್ಪೊರೇಟರ್ ಬಿಟಿಎಸ್ ನಾಗರಾಜ್, ಅವರಿಗೆ ಸವಾಲೆಸೆದು ಜೆಡಿಎಸ್ನಿಂದ ಮಗಳನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿನ್ನಿಪೇಟೆ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್ ನಿಧನ
ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ನಾಗರಾಜ್ ಅವರು 7,188 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರನ್ನು 1939 ಮತಗಳಿಂದ ಸೋಲಿಸಿದರು. ವಿದ್ಯಾ 5249 ಮತಗಳನ್ನು ಪಡೆದರೆ, ಅವರು ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಅವರು 2455 ಮತಗಳನ್ನು ಗಳಿಸಿದರು.
ಜೂನ್ 18ರಂದು ನಡೆದ ಉಪ ಚುನಾವಣೆಯಲ್ಲಿ ಒಟ್ಟು 15,051 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 159 ಮತಗಳು ನೋಟಾ ಪಾಲಾಗಿವೆ.
ಬೆಂಗಳೂರು: ಜೂನ್ 18ಕ್ಕೆ ಬಿನ್ನಿಪೇಟೆ ವಾರ್ಡ್ ಉಪಚುನಾವಣೆ
ಕಾಂಗ್ರೆಸ್ನ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್ ಅವರ ನಿಧನದಿಂದ ಬಿನ್ನಿಪೇಟೆ ವಾರ್ಡ್ ಸಂಖ್ಯೆ 121ರ ಸದಸ್ಯತ್ವ ತೆರವಾಗಿತ್ತು. ಈ ಸ್ಥಾನಕ್ಕೆ ಅವರ ಮಗಳು ಐಶ್ವರ್ಯಾ ಕಾಂಗ್ರೆಸ್ನಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಕಾಂಗ್ರೆಸ್ನಲ್ಲಿದ್ದ ಬಿಟಿಎಸ್ ನಾಗರಾಜ್ ಅವರು ಇದ್ದಕ್ಕಿದ್ದಂತೆ ಜೆಡಿಎಸ್ ಸೇರ್ಪಡೆಗೊಂಡಿದ್ದರು.
ಇದರಿಂದ ನಾಗರಾಜ್ ಅವರ ಮಗಳು ಐಶ್ವರ್ಯಾ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮತದಾನದ ದಿನವೇ ಕೆ.ಪಿ. ಅಗ್ರಹಾರದ ಶಾಲೆಯೊಂದ ಬಳಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿತ್ತು. ಈ ವೇಳೆ ಸ್ಥಳಕ್ಕೆ ದಿನೇಶ್ ಗುಂಡೂರಾವ್ ಮತ್ತು ಬಿಟಿಎಸ್ ನಾರಾಜ್ ನಡುವೆ ಜಟಾಪಟಿ ನಡೆದಿತ್ತು. ದಿನೇಶ್ ಗುಂಡೂರಾವ್ ಅವರು ನಾಗರಾಜ್ ಒಬ್ಬ ಗೂಂಡಾ ಎಂದು ಕರೆದಿದ್ದರು.
ಇದಕ್ಕೆ ಪ್ರತಿ ಹೇಳಿಕೆ ನೀಡಿದ್ದ ನಾಗರಾಜ್, ದಿನೇಶ್ ಗುಂಡೂರಾವ್ ಅವರು ಮಾಡಿದ ವಿಶ್ವಾಸ ದ್ರೋಹಕ್ಕೆ ಪಕ್ಷದಿಂದ ಹೊರಕ್ಕೆ ಬಂದಿದ್ದೇನೆ. ಜನಾಶೀರ್ವಾದದ ಮೂಲಕ ನನ್ನ ತಾಕತ್ತನ್ನು ಸಾಬೀತುಮಾಡುತ್ತೇನೆ ಎಂದು ಸವಾಲು ಹಾಕಿದ್ದರು.