Breaking news : ಜಯನಗರದಲ್ಲಿ ಸೌಮ್ಯಾ ರೆಡ್ಡಿ ಬೆಂಬಲಿಸಿದ ಜೆಡಿಎಸ್!
ಬೆಂಗಳೂರು, ಜೂನ್ 05 : ಜಯನಗರ ಕ್ಷೇತ್ರದ ಚುನಾವಣೆಗೆ 5 ದಿನಗಳು ಬಾಕಿ ಇವೆ. ಜೆಡಿಎಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿ ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದೆ. ಈ ಮೂಲಕ ಬಿಜೆಪಿ-ಕಾಂಗ್ರೆಸ್ ನೇರ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಮಂಗಳವಾರ ಜೆಡಿಎಸ್ ಪಕ್ಷ ಈ ಕುರಿತು ಅಧಿಕೃವಾದ ಘೋಷಣೆ ಮಾಡಿದೆ. ಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ ಬೆಂಬಲ ಘೋಷಣೆ ಮಾಡಿದ್ದು, ಕಣದಿಂದ ಹಿಂದೆ ಸರಿಯಲಿದ್ದಾರೆ.
ಜಯನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?, ಜೆಡಿಎಸ್ ಪ್ರಚಾರ ಸ್ಥಗಿತ
ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರ 'ಮಾದರಿ' ಪ್ರಣಾಳಿಕೆ
ಜಯಗನರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಕಣದಲ್ಲಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅವರು ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಿದ್ದರು. ಜನರಿಂದಲೇ ಹಣ ಸಂಗ್ರಹಣೆ ಮಾಡಿ ಅವರು ಚುನಾವಣೆ ಎದುರಿಸುತ್ತಿದ್ದಾರೆ.
ಪ್ರಚಾರ ಕಾರ್ಯವನ್ನು ನಿಲ್ಲಿಸಿದ್ದರು
ಜಯನಗರ ಕ್ಷೇತ್ರಕ್ಕೆ ಜೆಡಿಎಸ್ ಕಾಳೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಆದರೆ, ಎರಡು ದಿನದಿಂದ ಅವರು ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದರು. ಮಂಗಳವಾರ ಪಕ್ಷ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ ಬೆಂಬಲ ಘೋಷಣೆ ಮಾಡಿದೆ.
ಬಿಜೆಪಿಯಿಂದ ಬಿ.ಎನ್.ಪ್ರಹ್ಲಾದ್, ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅಧಿಕೃತವಾಗಿ ಕಣದಲ್ಲಿದ್ದಾರೆ. ಜೂನ್ 11ರಂದು ಚುನಾವಣೆ ನಡೆಯಲಿದೆ.
ವರಿಷ್ಠ ಎಚ್.ಡಿ.ದೇವೇಗೌಡ ಸೂಚನೆ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸೂಚನೆ ಹಿನ್ನಲೆಯಲ್ಲಿ ಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ.
ರಾಮಲಿಂಗಾ ರೆಡ್ಡಿ ಭೇಟಿ
ಮಂಗಳವಾರ ಮಧ್ಯಾಹ್ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಎಚ್.ಡಿ.ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಮಾತುಕತೆಯ ಬಳಿಕ ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದೆ.
ಚುನಾವಣೆ ಮುಂದೂಡಲಾಗಿತ್ತು
ಮೇ 14ರದು ನಡೆಯಬೇಕಿದ್ದ ಜಯನಗರ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದಿಂದಾಗಿ ಮುಂದೂಡಲಾಗಿತ್ತು. ಜೂನ್ 11ರಂದು ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ.
ಕಾರ್ಯಕರ್ತರು, ನಾಯಕರು ಬೆಂಬಲಿಸಿ
ಸೌಮ್ಯಾ ರೆಡ್ಡಿ ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವ ಕುರಿತು ಜೆಡಿಎಸ್ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕಾರ್ಯಕರ್ತರು, ಮುಖಂಡರು ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಬೇಕು ಎಂದು ಹೇಳಿದೆ.