ಬಿಜೆಪಿ ಪಾಲಿಗೆ ಮುಳುಗು ನೀರಾಗಲಿದೆಯೇ ಜಯನಗರದ ಸೋಲು?
ಯಾವುದೇ ರಾಜ್ಯ ಅಥವಾ ದೇಶದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪಕ್ಷಗಳು ಒಟ್ಟಾಗಿ ಅಧಿಕಾರ ಹಿಡಿದ ನಂತರ ಬರುವ ಚುನಾವಣೆಯ ಫಲಿತಾಂಶವು ಬಹುತೇಕ ಆಡಳಿತಾರೂಢ ಪಕ್ಷದ ಪರವಾಗಿಯೇ ಇರುತ್ತದೆ. ಈಗ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವುದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ. ಇಂದಿನ ಜಯನಗರ ವಿಧಾನಸಭಾ ಫಲಿತಾಂಶ ಹಾಗೇ ವ್ಯಾಖ್ಯಾನಿಸಬಹುದು.
ಆದರೆ, ಜಯನಗರ ವಿಧಾನಸಭಾ ಕ್ಷೇತ್ರದ ಕಥೆಯೇ ಬೇರೆ. ಏಕೆಂದರೆ ಈ ಕ್ಷೇತ್ರದಲ್ಲಿ ಕೊನೆಯದಾಗಿ ಕಾಂಗ್ರೆಸ್ ಜಯಿಸಿದ್ದು 2004ರಲ್ಲಿ. ಅಂದರೆ ಹದಿನಾಲ್ಕು ವರ್ಷಗಳ ಹಿಂದೆ. ಆ ಕಾರಣದಿಂದ ಬುಧವಾರದಂದು ಬಂದಿರುವ ಈ ಕ್ಷೇತ್ರದ ಚುನಾವಣೆ ಫಲಿತಾಂಶ ಖಂಡಿತವಾಗಿಯೂ ಬಿಜೆಪಿ ಪಾಲಿಗೆ ಚಿಂತೆಗೆ ಕಾರಣವಾಗುತ್ತದೆ.
ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದಾಗಿ ಸೋಲು : ಬಿಎಸ್ವೈ
ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯದ ಸಮನ್ವಯಕಾರರಾಗಿರುವ ಜೆಡಿಎಸ್ ಮುಖಂಡ ದಾನಿಶ್ ಅಲಿ ಮಾಧ್ಯಮವೊಂದರ ಜತೆ ಜಯನಗರ ವಿಧಾನಸಭಾ ಕ್ಷೇತ್ರದ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 'ಈ' ಗೆಲುವು ಒಂದು ಉದಾಹರಣೆ ಅಥವಾ ಮಾದರಿ ಆಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳೂ ಒಗ್ಗೂಡಿ ಸ್ಪರ್ಧೆ ಮಾಡಿದರೆ ಕರ್ನಾಟಕದಲ್ಲಿ ನಮ್ಮ ಮೈತ್ರಿಯೂ ಇಪ್ಪತ್ತೈದರಿಂದ ಇಪ್ಪತ್ತೆಂಟು ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿದ್ದಾರೆ.
ಬಿಜೆಪಿ ಭದ್ರಕೋಟೆ ಎಂಬ ಶ್ರೇಯಸ್ಸು
ಲೋಕಸಭೆ ಚುನಾವಣೆಗೆ ಈಗಾಗಲೇ ಎರಡೂ ಪಕ್ಷಗಳು ರಣತಂತ್ರ ಹೆಣೆಯಲು ಆರಂಭಿಸಿವೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಸ್ಪರ್ಧಿಸದಂತೆ ನೋಡಿಕೊಂಡಿತು. ಜಯನಗರ ವಿಧಾನಸಭಾ ಕ್ಷೇತ್ರವು ಕೇಂದ್ರ ಸಚಿವರಾದ ಅನಂತಕುಮಾರ್ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಇದನ್ನು ಬಿಜೆಪಿ ಭದ್ರಕೋಟೆ ಅಂತಲೇ ಪರಿಗಣಿಸಲಾಗುತ್ತಿತ್ತು. ಕಳೆದ ಇಪ್ಪತ್ತೆರಡು ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅನಂತ್ ಕುಮಾರ್ ಗೆಲ್ಲುತ್ತಲೇ ಇದ್ದಾರೆ. ಇನ್ನು ಬಿಜೆಪಿಯ ಬಿ.ಎನ್.ವಿಜಯ್ ಕುಮಾರ್ ಅವರು ಈ ಹಿಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಜಯನಗರ ಕ್ಷೇತ್ರದಿಂದ ಒಳ್ಳೆ ಅಂತರದಿಂದಲೇ ತಮ್ಮ ಗೆಲುವನ್ನು ಸಾಧಿಸಿದ್ದರು. ಆದರೆ ಮೇ ನಾಲ್ಕರಂದು ಅವರು ನಿಧನರಾಗಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು.
ಮಂಡ್ಯದಲ್ಲಿ ಜೆಡಿಎಸ್ ಗೆ ಬೆಂಬಲದ ನಿರೀಕ್ಷೆ
ಇನ್ನು ಮೇ ಇಪ್ಪತ್ತೆಂಟರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬಂದಾಗ ಕಾಂಗ್ರೆಸ್ ನ ಮುನಿರತ್ನ ಜಯ ಗಳಿಸಿದ್ದರು. ಆದರೆ ಅಲ್ಲಿ ಜೆಡಿಎಸ್ ನಿಂದಲೂ ಅಭ್ಯರ್ಥಿ ಕಣದಲ್ಲಿದ್ದರು. ಜಯನಗರದಲ್ಲಿ ಎರಡೂ ಪಕ್ಷಗಳ ಮಧ್ಯೆ ಒಪ್ಪಂದ ಆಯಿತು. ಇನ್ನು ವಿಧಾನಸಭೆಗೆ ಆಯ್ಕೆಯಾಗಿರುವ ಮೂವರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮಂಡ್ಯದಿಂದ ಜೆಡಿಎಸ್ ನ ಪುಟ್ಟರಾಜು, ಶಿಕಾರಿಪುರ ಹಾಗೂ ಬಳ್ಳಾರಿಯಿಂದ ಬಿಜೆಪಿಯ ಯಡಿಯೂರಪ್ಪ ಮತ್ತು ಶ್ರೀರಾಮುಲು ಆಯ್ಕೆಯಾಗಿದ್ದಾರೆ. ಈ ಪೈಕಿ ಮಂಡ್ಯದಲ್ಲಿ ಜೆಡಿಎಸ್ ಅನ್ನು ಕಾಂಗ್ರೆಸ್ ಬೆಂಬಲಿಸಲಿ ಎಂಬ ನಿರೀಕ್ಷೆ ಸಹಜ.
ಮೈತ್ರಿ ಅಲುಗಾಡಿಸಲು ಯಾರಿಂದಲೂ ಆಗುವುದಿಲ್ಲ
ಇನ್ನೊಂದು ಆಸಕ್ತಿಕರ ಅಂಶ ಏನೆಂದರೆ, ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯುವ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ದೈಹಿಕ ದಾರ್ಢ್ಯತೆ ಸವಾಲು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, "ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಲುಗಾಡಿಸಲು ಯಾರಿಂದಲೂ ಆಗುವುದಿಲ್ಲ" ಎಂದು ದಾನಿಶ್ ಅಲಿ ಹೇಳಿರುವ ಮಾತು ನಾನಾ ಅರ್ಥಗಳನ್ನು ಧ್ವನಿಸುತ್ತಿದೆ.
ಬೆಂಗಳೂರಿನಲ್ಲಿ 28ಕ್ಕೆ 15 ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿನ ಗೆಲುವು ಕಾಂಗ್ರೆಸ್ ಪಕ್ಷದೊಳಗೆ ಆತ್ಮವಿಶ್ವಾಸ ಮೂಡಿಸಿದೆ. ನಗರ ಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆಯೇ, ಅದರಲ್ಲೂ ಬೆಂಗಳೂರಿನಲ್ಲಿ ಆತಂಕಕ್ಕೆ ಗುರಿ ಆಗಿದೆಯಾ ಎಂದು ಅನುಮಾನ ಮೂಡಿಸುತ್ತಿದೆ. ಈಗ ಬೆಂಗಳೂರು ವ್ಯಾಪ್ತಿಯ ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹದಿನೈದು ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಸಿಕ್ಕಂತಾಗಿದೆ. "ಜಯನಗರದ ಗೆಲುವು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಗೆಲುವಿಗೆ ಯಶಸ್ಸಿನ ಬಾಗಿಲು ತೆರೆದಂತೆ" ಎಂದು ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಶ್ರೀವತ್ಸ ಅಭಿಪ್ರಾಯ ಪಟ್ಟಿದ್ದಾರೆ.
ಮೈತ್ರಿ ಸರಕಾರ ದೋಸ್ತಿ ಗಟ್ಟಿಯಾಗಲು ಸಮಯ ಬೇಕು
ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ವಿಧಾನಸಭಾ ಚುನಾವಣೆ ವೇಳೆ ನಡೆದ ಕಚ್ಚಾಟದಿಂದ ಬಿಜೆಪಿಗೆ ಹಲವು ಕಡೆ ಲಾಭವಾಯಿತು. ಆದರೆ ಈಗ ಹಾಗೆ ಆಗಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡರೊಬ್ಬರು ಅಭಿಪ್ರಾಯ ಪಡುತ್ತಾರೆ. ಸದ್ಯಕ್ಕಂತೂ ಬಿಜೆಪಿಯು ಕಾಂಗ್ರೆಸ್ ಒಳಗಿನ ಭಿನ್ನಮತ ಭುಗಿಲೇಳುವುದನ್ನೇ ಕಾಯುತ್ತಿದೆ. ಈಗಿರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಬಹಳ ಕಾಲ ಅಸ್ತಿತ್ವದಲ್ಲಿ ಇರಲಾರದು ಎಂಬ ನಂಬಿಕೆ ಬಿಜೆಪಿಯದು. "ಜಮ್ಮು- ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಎಲ್ಲವೂ ಸರಿ ಮಾಡಿಕೊಳ್ಳಲು ಎಷ್ಟು ಸಮಯ ಬೇಕಾಯಿತು? ಇನ್ನು ಉತ್ತರಪ್ರದೇಶದಲ್ಲಿ ಅಂಥ ಪ್ರಚಂಡ ಬಹುಮತದಿಂದ ಗೆದ್ದರೂ ಮುಖ್ಯಮಂತ್ರಿ ಹಾಗೂ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳಲು ಸಮಯ ಹಿಡಿಯಿತು. ನಾವು ಅಲ್ಲೆಲ್ಲಿಗಿಂತ ಬೇಗ ಸರಿ ಮಾಡಿಕೊಳ್ಳುತ್ತೇವೆ" ಎಂದು ಮುಖಂಡರೊಬ್ಬರು ಹೇಳುತ್ತಾರೆ.