ಜಯನಗರ ಚುನಾವಣೆ: ಮುಂಚೂಣಿಯಲ್ಲಿ ಕೇಳಿ ಬರುವ ಬಿಜೆಪಿ ಅಭ್ಯರ್ಥಿ ಹೆಸರು
ಬಿಜೆಪಿ ಶಾಸಕರಾಗಿದ್ದ ಬಿ ಎನ್ ವಿಜಯಕುಮಾರ್ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟ ಬೆಂಗಳೂರು, ಜಯನಗರ ಕ್ಷೇತ್ರದ ಚುನಾವಣೆಗೆ ಜೂನ್ ಹನ್ನೊಂದರ ದಿನ ನಿಗದಿಯಾಗಿದೆ. ಕ್ಷೇತ್ರದ ಬಿಜೆಪಿ ಟಿಕೆಟಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಸದ್ಯ, ಎಸ್ ಕೆ ನಟರಾಜ್, ತೇಜಸ್ವಿ ಸೂರ್ಯ ಮತ್ತು ಸಿ ಕೆ ರಾಮಮೂರ್ತಿ ಹೆಸರು ಚಾಲ್ತಿಯಲ್ಲಿದ್ದು, ಅದರಲ್ಲಿ ರಾಮಮೂರ್ತಿ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಬ್ರಾಹ್ಮಣ ಸಮುದಾಯದ ಮತ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದರಿಂದ, ರಾಮಮೂರ್ತಿ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜೂನ್ 11ಕ್ಕೆ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆ
ವಿಜಯ್ ಕುಮಾರ್ ಅವರ ನಿಕಟವರ್ತಿ ಮತ್ತು ಕಳೆದ ಎರಡು ಚುನಾವಣೆಯಲ್ಲಿ ಬಿಎನ್ವಿ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಜೊತೆಗೆ, ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ರಾಮಮೂರ್ತಿ ಅವರೇ ಅಭ್ಯರ್ಥಿಯಾಗಬೇಕು ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
1999ರಿಂದ ಇದುವರೆಗೆ ಬ್ರಾಹ್ಮಣ ಸಮುದಾಯದ ಬಿ ಎನ್ ವಿಜಯ್ ಕುಮಾರ್ ಅವರಿಗೇ ಬಿಜೆಪಿ ಟಿಕೆಟ್ ನೀಡಿತ್ತು ಮತ್ತು ಅವರು ಸತತವಾಗಿ ಎರಡು ಬಾರಿ ಉತ್ತಮ ಅಂತರದಿಂದ ಗೆದ್ದು ಬಂದಿದ್ದರು. ಈಗ ಅದೇ ಸಮುದಾಯದ ರಾಮಮೂರ್ತಿಯವರಿಗೆ ಟಿಕೆಟ್ ನೀಡಬೇಕು ಎನ್ನುವುದು ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಸಂಚರಿಸಿದಾಗ ಮೂಡಿ ಬರುತ್ತಿರುವ ಜನಾಭಿಪ್ರಾಯ.
ವಿಜಯ್ ಕುಮಾರ್ ಸ್ಥಾನ ತುಂಬಬಲ್ಲ ಬಿಜೆಪಿ ಅಭ್ಯರ್ಥಿ ಯಾರು?
ಕೆಲವು ತಿಂಗಳ ಹಿಂದೆಯಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣ ರೆಡ್ಡಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತೀವ್ರ ಲಾಬಿಯ ನಂತರ ಕಾಂಗ್ರೆಸ್ ಟಿಕೆಟ್ ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿಗೆ ಒಲಿದಿತ್ತು. ಜೊತೆಗೆ, ಜೆಡಿಎಸ್ ನಿಂದ ಕಾಳೇಗೌಡ ಕಣದಲ್ಲಿದ್ದರೂ, ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಲಿದ್ದಾರೆ. ಕ್ಷೇತ್ರದ ಜಾತಿ ಲೆಕ್ಕಾಚಾರ ಹೇಗೆ? ಮುಂದೆ ಓದಿ..
ಬ್ರಾಹ್ಮಣ ಸಮುದಾಯದ ಮತ ಈ ಕ್ಷೇತ್ರದಲ್ಲಿ ನಿರ್ಣಾಯಕ
ಜಯನಗರ ಕ್ಷೇತ್ರದಲ್ಲಿ ಸುಮಾರು 53ಸಾವಿರ ಮುಸ್ಲಿಮರು, 45 ಸಾವಿರ ಬ್ರಾಹ್ಮಣರು, 43 ಸಾವಿರ ಒಕ್ಕಲಿಗರು , 20 ಸಾವಿರ ಎಸ್ಸಿ/ಎಸ್ಟಿ ಮತ್ತು ಇತರರು ಸುಮಾರು 20ಸಾವಿರ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಭೈರಸಂದ್ರ, ಜಯನಗರ ಪೂರ್ವ, ಪಟ್ಟಾಭಿರಾಮ ನಗರ, ಗುರಪ್ಪನ ಪಾಳ್ಯ, ಜೆ ಪಿ ನಗರ, ಶಾಖಾಂಬರಿ ನಗರ ಮತ್ತು ಸಾರಕ್ಕಿ ವಾರ್ಡುಗಳಿವೆ. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದಿಂದ ಮೇ ಹನ್ನೆರಡರಂದು ನಡೆಯಬೇಕಾಗಿದ್ದ ಚುನಾವಣೆ, ಜೂನ್ ಹನ್ನೊಂದರಂದು ನಡೆಯಲಿದೆ.
ಸದ್ಯ ರಾಮಮೂರ್ತಿ ಫೇವರೇಟ್ ಆಗಿದ್ದಾರೆ
ಕ್ಷೇತ್ರದ ಏಳು ಬಿಬಿಎಂಪಿ ವಾರ್ಡುಗಳಲ್ಲಿ ಗುರಪ್ಪನಪಾಳ್ಯ ಹೊರತು ಪಡಿಸಿ, ಮಿಕ್ಕೆಲ್ಲಾ ವಾರ್ಡುಗಳಲ್ಲಿ ಬಿಜೆಪಿ ಕಾರ್ಪೋರೇಟರುಗಳಿದ್ದಾರೆ. ಪಕ್ಷಕ್ಕೆ ಜಯನಗರ ಕ್ಷೇತ್ರ ಉಳಿಸಿಕೊಳ್ಳಲು ಕಾರ್ಪೋರೇಟರುಗಳ ಬಲ ಒಂದೆಡೆಯಾದರೆ, ವಿಜಯ್ ಕುಮಾರ್ ನಿಧನದ ಅನುಕಂಪ ಕೂಡಾ ಸಿಗಬಹುದು. ಹಾಗಾಗಿ, ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಸದ್ಯ ರಾಮಮೂರ್ತಿ ಫೇವರೇಟ್ ಆಗಿದ್ದಾರೆ. ಇವರು ಮಾಜಿ ಕಾರ್ಪೋರೇಟರ್ ಮತ್ತು ಇವರ ಪತ್ನಿ ಪಟ್ಟಾಭಿರಾಮ ನಗರದ ಹಾಲೀ ಕಾರ್ಪೋರೇಟರ್.
ರಾಮಲಿಂಗ ರೆಡ್ಡಿಯವರ ರಾಜಕೀಯ ಅನುಭವ
ತಮ್ಮ ಮಗಳು ಕಣದಲ್ಲಿರುವುದರಿಂದ, ಕ್ಷೇತ್ರದಲ್ಲಿ ಜಯಗಳಿಸಲು ರಾಮಲಿಂಗ ರೆಡ್ಡಿಯವರು ತಮ್ಮ ರಾಜಕೀಯ ಅನುಭವವನ್ನೆಲ್ಲಾ ಬಳಸಿಕೊಳ್ಳಬಹುದು. ಅವರಿಗೆ ವಿಜಯ್ ಕುಮಾರ್ ನಂತರ ಕ್ಷೇತ್ರದಲ್ಲಿ ಪ್ರಭಲವಾಗಿ ಪ್ರತಿಸ್ಪರ್ಧೆ ನೀಡಬಲ್ಲವರೆಂದರೆ ಅದು ರಾಮಮೂರ್ತಿ ಎನ್ನುವುದು ಇಲ್ಲಿನ ಕಾರ್ಯಕರ್ತರ ಮಾತು. ಜೊತೆಗೆ, ಇವರು ಜಯನಗರ ಕ್ಷೇತ್ರದವರು ಎನ್ನುವ ಪ್ಲಸ್ ಪಾಯಿಂಟ್ ಬೇರೆ ಇದೆ.
ರಕ್ಷಾ ಫೌಂಡೇಶನ್ ಮೂಲಕ ವಿದ್ಯಾರ್ಥಿ ವೇತನ
ಸರ್ವಜ್ಞ ಮಿತ್ರಮಂಡಳಿ ಮೂಲಕ ಸಾರ್ವಜನಿಕ ಗಣೇಶೋತ್ಸವ, ರಕ್ಷಾ ಫೌಂಡೇಶನ್ ಮೂಲಕ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಮುಂತಾದ ಜನಪರ ಕೆಲಸದ ಮೂಲಕ ಚಿರಪರಿಚಿತರಾಗಿರುವ ರಾಮಮೂರ್ತಿ 1990ರಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಸಂಘ ಪರಿವಾರದ ಸಕ್ರಿಯ ಸದಸ್ಯರಾಗಿರುವ ರಾಮಮೂರ್ತಿ ಪರ ಸಂಘಟನೆಯ ಮುಖಂಡರೂ ಒಲವನ್ನು ತೋರಿದ್ದಾರೆ ಎನ್ನಲಾಗುತ್ತಿದೆ.
ಟಿಕೆಟ್ ಸಿಗುವ ಖಚಿತ ಭರವಸೆಯಲ್ಲಿ ರಾಮಮೂರ್ತಿ
ಜಯನಗರದ ಟಿಕೆಟ್ ಪಡೆಯಲು, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಪದ್ಮನಾಭನಗರದ ಶಾಸಕ ಆರ್ ಅಶೋಕ್ ಅವರ ರೆಕಮೆಂಡೇಶನ್ ಬಹುಮುಖ್ಯವಾದದ್ದು. ಅವರಿಬ್ಬರ ಬೆಂಬಲವೂ ನನಗಿದೆ ಎನ್ನುವ ರಾಮಮೂರ್ತಿ ಟಿಕೆಟ್ ಸಿಗುವ ಖಚಿತ ಭರವಸೆಯಲ್ಲಿದ್ದಾರೆ.