ಜಯನಗರ: ಅನಂತ್ ಕುಮಾರ್ ಮತ್ತು ರಾಮಲಿಂಗಾ ರೆಡ್ಡಿಯವರ ಅಪರೂಪದ ಕದನ
ನರೇಂದ್ರ ಮೋದಿಯವರ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಾಗ ಅವರ ಮೇಲೆ ಅತಿಯಾದ ನಿರೀಕ್ಷೆಗಳು ಇದ್ದಿದ್ದರಿಂದ ಅವರ ಸಂಪುಟ ಸಚಿವರು ಯಾರ್ಯರಾಗುತ್ತಾರೆಂಬ ಕುತೂಹಲ ಎಲ್ಲರಿಗಿತ್ತು, ಜೊತೆಗೆ 5ಬಾರಿ ಗೆದ್ದ ಅನಂತ್ ಕುಮಾರ್ ಗೆ ದೊಡ್ಡ ಜವಾಬ್ದಾರಿ ಸಿಗುವ ಸಹಜ ನೀರಿಕ್ಷೆ ಇತ್ತು.
ಅಚ್ಚರಿಯಂತೆ ಸದಾನಂದ ಗೌಡರನ್ನು ರೈಲ್ವೆ ಸಚಿವರನ್ನಾಗಿ ನೇಮಿಸಲಾಗಿತ್ತು, ಅನಂತ್ ಕುಮಾರ್ ಅವರಿಗೆ ಅವರಿಗಿಷ್ಟವಿಲ್ಲದ ರಾಸಾಯನ ಮತ್ತು ರಸಗೊಬ್ಬರ ಇಲಾಖೆಯ ಜವಾಬ್ದಾರಿ ಕೊಡಲಾಗಿತ್ತು. ಕಾರಣ ಅನಂತ್ ಕುಮಾರ್ ಮೊದಲಿನಿಂದ ಅಡ್ವಾಣಿಯವರ ಬಣದಲ್ಲಿ ಗುರುತಿಸಿಕೊಂಡವರು, ಮೋದಿಯವರ ವಿಶ್ವಾಸಗಳಿಸುವದಕ್ಕೆ ಸಾಕಷ್ಟು ಸಮಯವೇ ಹಿಡಿಯಿತು ಅವರಿಗೆ.
ಜಯನಗರ ಚುನಾವಣೆ: ಮುಂಚೂಣಿಯಲ್ಲಿ ಕೇಳಿ ಬರುವ ಬಿಜೆಪಿ ಅಭ್ಯರ್ಥಿ ಹೆಸರು
ಅವರ ಕಾರ್ಯಶೈಲಿ ಮತ್ತು ಸಂಘಟನಾ ಶಕ್ತಿಯನ್ನರಿಯಲು ಬಂದ ಮೊದಲ ಅಗ್ನಿಪರೀಕ್ಷೆ ಅಮಿತ್ ಶಾ ಅವರಿಂದ, ಅದು ಬಿಹಾರದ ಚುನಾವಣಾ ಉಸ್ತುವಾರಿ ಕೆಲಸ. ಅಲ್ಲಿಯವರೆಗೆ ಬಿಜೆಪಿಗೆ ಹೆಚ್ಚುಕಮ್ಮಿ ಅನುಕೂಲಕರ ರಾಜ್ಯಗಳ ಉಸ್ತುವಾರಿ ಹೊರುತ್ತಿದ್ದ ಅನಂತ್ ಕುಮಾರ್ ಗೆ ಬಿಹಾರ ಚುನಾವಣಾ ಕಬ್ಬಿಣ ಕಡಲೆಯಾಗಿತ್ತು.
ಬಿಹಾರದ ಫಲಿತಾಂಶ ಶಾಗೆ ಖುಷಿ ಕೊಡದಿದ್ದರೂ, ಅನಂತ್ ಕುಮಾರ್ ಅವರ ಇಚ್ಚಾಶಕ್ತಿ ಕಾಣಸಿಗುತ್ತಿತ್ತು. ಇದು ಮೋದಿ-ಶಾ ಜೋಡಿಯ circle ನಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಯ್ತು, ಕಳೆದ ವರ್ಷ ಸಂಪುಟದಲ್ಲಿ ಹೆಚ್ಚಿನ ಜವಾಬ್ದಾರಿಯು ಅನಂತ್ ಕುಮಾರ್ ಅವರಿಗೆ ಸಿಕ್ಕಿತು.
ಜಯನಗರದ ಕ್ಷೇತ್ರಕ್ಕೆ ಯುವ ಮುಖಂಡ ತೇಜಸ್ವಿ ಸೂರ್ಯ ಅಭ್ಯರ್ಥಿ?
ಇದೆಲ್ಲ ಈಗ್ಯಾಕೆ? ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆ ಬಂದಿವೆ, ಪ್ರತಿಯೊಂದು ಮತವು ನಿರ್ಣಾಯಕ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬ ಸನ್ನಿವೇಶದಲ್ಲಿರುವ ಬಿಜೆಪಿಗೆ ಇವೆರಡು ಕ್ಷೇತ್ರಗಳು ಮುಂದಿನ ದಿನಗಳಲ್ಲಿ ಅಧಿಕಾರಕ್ಕೇರಲು ಅತ್ಯವಶ್ಯಕ. ಈಗಿನ ರಾಜಕೀಯದ ಪರಸ್ಥಿತಿಯನ್ನು ಅದಲು ಬದಲು ಮಾಡುವ ಶಕ್ತಿ ಇವೆರಡು ಕ್ಷೇತ್ರದ ಮತದಾರರಿಗಿದೆ. ಮುಂದೆ ಓದಿ
ಜೆಡಿಎಸ್ ಶಕ್ತಿ ಪ್ರದರ್ಶಿಸುವದರಲ್ಲಿ ಯಾವುದೇ ಅನುಮಾನವಿಲ್ಲ
ಮೊನ್ನೆ ಬಂದ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತ ಬಂದಿತ್ತು ಎಂದು ಇಟ್ಟುಕೊಳ್ಳಿ, ಇವೆರಡು ಕ್ಷೇತ್ರದ ಮತದಾರ ಕಣ್ಣು ಮುಚ್ಚಿ ಕಮಲಕ್ಕೆ ಜೈ ಅನ್ನುತ್ತಿದ್ದರು, ಆದರೆ ಆಗಿದ್ದು ಅತಂತ್ರ, ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸೆಟ್ಟೇರುತ್ತಿರುವ ಹೊಸ ಸಮ್ಮಿಶ್ರ ಸಿನಿಮಾ ಮತದಾರನನ್ನು ಯೋಚನೆಗೀಡುಮಾಡಿದೆ. ಒಕ್ಕಲಿಗರೇ ನಿರ್ಣಾಯಕರಾಗಿರುವ ಆರ್ ಆರ್ ನಗರದಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಜೊತೆಗೆ ಕಾಂಗ್ರೆಸ್ ನೊಂದಿಗಿನ ಹೊಂದಾಣಿಕೆ ಜೆಡಿಎಸ್ ಅನ್ನು ಗೆಲುವಿನ ದಡಕ್ಕೂ ಸೇರಿಸಬಹುದು.
ಪ್ರತಿಷ್ಠಿತ ಜಯನಗರ ಕ್ಷೇತ್ರದ ಚುನಾವಣೆ
ಇತ್ತ ಬಿಜೆಪಿಯ ಭದ್ರಕೋಟೆಯಾದ ಪ್ರತಿಷ್ಠಿತ ಜಯನಗರದ ಕಥೆಯೂ ಅದೇ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವಿ ಮಾಜಿ ಸಚಿವ ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿಯವರಿಗೆ ಬೆಂಬಲ ಕೊಟ್ಟರೆ, ಲೆಕ್ಕಾಚಾರಗಳು ತಲೆಕೆಳಗಾಗಬಹುದು. ಇಷ್ಟೊಂದು ತೀರ್ವ ಸ್ಪರ್ಧೆಯಿರುವ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗುವವರ ತಲೆಬಿಸಿ ಆಕಾಶದೆತ್ತರಕ್ಕೆ, ಸೋತರೆ ಹೈ ಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕು, ಗೆದ್ದರ ಹಾಲು ಜೇನು. ಅಂತದ್ರಲ್ಲಿ ಅನಂತ್ ಕುಮಾರ್ ಅವರನ್ನು ಜಯನಗರದ ಕೆಲಸಕ್ಕೆ ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಮಲಿಂಗಾರೆಡ್ಡಿ ಮತ್ತು ಅನಂತಕುಮಾರ್ ಮಧ್ಯೆ ಏರ್ಪಟ್ಟ ಹೊಂದಾಣಿಕೆ
ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ರಾಮಲಿಂಗಾರೆಡ್ಡಿ ಮತ್ತು ಅನಂತ್ ಕುಮಾರ್ ಮಧ್ಯೆ ಏರ್ಪಟ್ಟ ಹೊಂದಾಣಿಕೆ ರಾಜಕಾರಣ ಮತ್ತು ಇದನ್ನು ಇವರಿಬ್ಬರು ಅಲ್ಲಗಳೆದು ಸಮಜಾಯಿಷಿ ಕೊಡುವ ಮಟ್ಟಿಗೆ ಹೋಗಿದ್ದು ಹೊಸತೇನಲ್ಲ. ಈ ಆಯಾಮದಲ್ಲಿ ನೋಡುವದಾದರೆ ಸ್ನೇಹಿತರು ಈಗ ಜಿದ್ದಾಜಿದ್ದಿ ಅಖಾಡದಲ್ಲಿ ಇಳಿದಿದ್ದಾರೆ, ಇದಕ್ಕಿಂತ ರೋಚಕ ಸಂಗತಿ ಬೇಕೆ? ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಮತ ಕ್ರೋಡೀಕರಣ ಎಂದು ಸಬೂಬು ಹೇಳಿದರೆ ಅದು ಸಮಂಜಸವಾಗಿರುವುದಿಲ್ಲ.
ಅನಂತಕುಮಾರ್ ಗೆದ್ದು ಯಡಿಯೂರಪ್ಪನವರ ಮುಂದೆ ಬೀಗುತ್ತಾರಾ?
ಅನಂತಕುಮಾರ್ ಗೆದ್ದು ಯಡಿಯೂರಪ್ಪನವರ ಮುಂದೆ ಬೀಗುತ್ತಾರಾ ಅಥವಾ ಸೋತು ಇಷ್ಟು ದಿನ ಇದ್ದ ಹೊಂದಾಣಿಕೆ ರಾಜಕೀಯದ ಸಂಶಯ ಗಟ್ಟಿ ಮಾಡುತ್ತಾರಾ ಕಾದು ನೋಡಬೇಕು. ಅಕಸ್ಮಾತ್, ಬಿಜೆಪಿ ಸೋತಿದ್ದೆ ಆದರೆ ಮುಂದಿನ ದಿನಮಾನಗಳಲ್ಲಿ ತಮ್ಮ ಹಳೆಯ ಕ್ಷೇತ್ರವನ್ನು ಮತ್ತೆ ಹತೋಟಿಗೆ ತಗೆದುಕೊಂಡು ಕಾಂಗ್ರೆಸ್ ಮಯ ಮಾಡುವದರಲ್ಲಿ ರಾಮಲಿಂಗಾರೆಡ್ಡಿಯವರು ಸಂಪೂರ್ಣ ಮಗ್ನರಾಗುವದರಲ್ಲಿ ಯಾವುದೇ ಸಂದೇಹವಿಲ್ಲ.
ಅನಂತಕುಮಾರ್ ಮತ್ತು ರಾಮಲಿಂಗಾರೆಡ್ಡಿಯವರ ಅಪರೂಪದ ಕದನ.
ಇದು ಈಗ ಸೌಮ್ಯ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿಯ ಸೆಣಸಾಟವಲ್ಲ, ಬದಲಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮೇರು ನಾಯಕರಾದ ಅನಂತ್ ಕುಮಾರ್ ಮತ್ತು ರಾಮಲಿಂಗಾರೆಡ್ಡಿಯವರ ಅಪರೂಪದ ಕದನ. ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೇ, ಆಖಾಡ ರಂಗೇರುವುದಕ್ಕೆ ಅನುಮಾನವೇ ಇಲ್ಲ.