ಜಯಾಗೆ ಸೇರಿದ ಕೆಜಿಗಟ್ಟಲೆ ಚಿನ್ನ, ಸೀರೆಗೆ 4 ಪೊಲೀಸರ ಕಾವಲು
ಬೆಂಗಳೂರು, ಡಿಸೆಂಬರ್ 8: ಜಯಲಲಿತಾಗೆ ಸೇರಿದ 750 ಜೊತೆ ಚಪ್ಪಲಿ ಸೇರಿದಂತೆ ಇತರ ವಸ್ತುಗಳನ್ನು ಬೆಂಗಳೂರಿನಲ್ಲಿ ನಾಲ್ವರು ಪೊಲೀಸರು ದಿನದ ಇಪ್ಪತ್ನಾಲ್ಕು ಗಂಟೆಯೂ ಕಾವಲು ಕಾಯುತ್ತಿದ್ದಾರೆ. 750 ಜೊತೆ ಚಪ್ಪಲಿಯನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.
ಇದನ್ನು ವಾಪಸ್ ಮಾಡಲಾಗುತ್ತದೆಯೋ ಅಥವಾ ಸರಕಾರದ ಆಸ್ತಿಯಾಗಿ ಬಿಡುತ್ತದೋ ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಿಂತಿದೆ. ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಜಯಲಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ಈ ಪ್ರಕರಣದಲ್ಲಿ ಆರೋಪಿಗಳು.[ಜಯಾ ಅಕ್ರಮ ಆಸ್ತಿ ಕೇಸ್, ಸುಪ್ರೀಂಗೆ ಮೇಲ್ಮನವಿ]
ಅಕ್ರಮ ಆಸ್ರಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅದೇಶದಂತೆ ಕರ್ನಾಟಕ ಹೈಕೋರ್ಟ್ ಗೆ ವರ್ಗಾಯಿಸಲಾಯಿತು. ಆಸ್ತಿ, ಸ್ವತ್ತುಗಳು ಯಾವುದನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಳ್ಳಲಾಗಿತ್ತೋ ಅವೆಲ್ಲವನ್ನೂ ಹಸ್ತಾಂತರಿಸಲಾಯಿತು. ಸಿಟಿ ಸಿವಿಲ್ ಕೋರ್ಟ್ ಕಟ್ಟಡದ ಮೊದಲ ಅಂತಸ್ತಿನ ಕೋಣೆಯಲ್ಲಿ ಎಲ್ಲವನ್ನೂ ಇಡಲಾಗಿದೆ.
ನಗರ ಸಶಸ್ತ್ರ ಮೀಸಲು ಪಡೆಯವರನ್ನು ಇವುಗಳ ಕಾವಲಿಗಾಗಿಯೇ ಹಾಕಲಾಗಿದೆ. ಯಾವಾಗಲೂ ನಾಲ್ಕು ಮಂದಿ ಇಲ್ಲಿ ಪಹರೆಗೆ ಇರುತ್ತಾರೆ. ಈ ಹಿಂದೊಮ್ಮೆ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ, 'ನಮಗೆ ಏನೇನಿವೆ ಅಂತ ಗೊತ್ತಿಲ್ಲ. ಇಲ್ಲಿರುವ ಸ್ವತ್ತು ಜಯಲಲಿತಾ ಅವರಿಗೆ ಸೇರಿದ್ದು ಅಂತ ಮಾತ್ರ ಗೊತ್ತು. ಇಪ್ಪತ್ನಾಲ್ಕು ಗಂಟೆ, ಪಾಳಿ ಮೇಲೆ ಪಹರೆ ಕಾಯ್ತಿದ್ದೀವಿ' ಎಂದಿದ್ದರು.['ಚಿನ್ನ'ದ ಗೊಂಬೆ ಜಯಲಲಿತಾ ಬಳಿಯಿದ್ದ ಬಂಗಾರವೆಷ್ಟು?]
ಈ ಕೋಣೆಯಲ್ಲಿ 750 ಜೊತೆ ಚಪ್ಪಲಿ, 10,500 ಸೀರೆ ಆ ಪೈಕಿ 750 ಸೀರೆ ಚಿನ್ನದ ಎಳೆಯಲ್ಲಿ ಮಾಡಿರುವಂಥದ್ದು. 3.5 ಕೋಟಿ ಮೌಲ್ಯದ ಚಿನ್ನವನ್ನು ಇಡಲಾಗಿದೆ ಎಂಬುದು ಜಯಲಲಿತಾ ಸಲ್ಲಿಸಿದ್ದ ಅಫಿಡವಿಟ್ ನಲ್ಲಿದ್ದ ಮಾಹಿತಿ. 1997ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ವಿಚಕ್ಷಣಾ ದಳ ಜಯಲಲಿತಾ ಮನೆಯಲ್ಲಿ ಅಪಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದವು.
ಅವುಗಳಲ್ಲಿ 500 ವೈನ್ ಗ್ಲಾಸ್, ಹಲವು ಕಾಲಿನ ಚೈನ್, ಚಿನ್ನದ ಡಾಬು, ಒಂದು ಕೋಟಿವರೆಗೆ ಬೆಲೆ ಬಾಳುವ ವಜ್ರ, ಬೆಳ್ಳಿ ಕತ್ತಿಯೂ ಸೇರಿದ್ದವು.