ಜನಾ ರೆಡ್ಡಿ ಮಗಳ ಮದುವೆ ಸಿದ್ಧತೆಗೆ 6 ತಿಂಗಳ ಹಿಂದೆಯೇ ಪೇಮೆಂಟ್!
ಬೆಂಗಳೂರು, ನವೆಂಬರ್ 15: ಇಲ್ಲಿನ ಅರಮನೆ ಮೈದಾನದಲ್ಲಿ ಹಂಪಿ ಪುರಂದರ ದೇಗುಲವನ್ನೇ ಹೋಲುವ ದೇಗುಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಮದುವೆ ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ನಡೆಯುತ್ತದೆ. ಅದರ ತತಯಾರಿ ಭಾಗವಾಗಿ ಅರಮನೆ ಮೈದಾನ ಬಳ್ಳಾರಿ ಜಿಲ್ಲೆಯಾಗಿ ಬದಲಾಗಿಹೋಗಿದೆ.
ಇಡೀ ದೇಶದಲ್ಲಿ 500, 1000 ನೋಟಿನ ರದ್ದು ಬಿಸಿ ತಟ್ಟಿದರೆ, ಈ ರೆಡ್ಡಿ ಮಗಳ ಮದುವೆ ವೈಭೋಗ ನೋಡಿರಿ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಜನಾರ್ದನ ರೆಡ್ಡಿ ಅಪ್ತರೊಬ್ಬರು ಉತ್ತರ ಎಂಬಂಥ ಮಾಹಿತಿಯೊಂದನ್ನು ನೀಡಿದ್ದಾರೆ. 'ಈ ಮದುವೆಗೆ ಸಂಬಂಧಪಟ್ಟ ಸಿದ್ಧತೆಗೆ ಅರು ತಿಂಗಳ ಹಿಂದೆಯೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯೊಂದಕ್ಕೆ ವಹಿಸಿಕೊಡಲಾಗಿತ್ತು'.[ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷ ಜನಾರ್ದನ ರೆಡ್ಡಿಗೆ ಸೇರಿದ್ದಾ?]
ಅಂದಹಾಗೆ, ಅರಮನೆ ಮೈದಾನದಲ್ಲಿ ಬಳ್ಳಾರಿಯಲ್ಲಿರುವ ವಧು ಬ್ರಹ್ಮಿಣಿ ಮನೆ ಹಾಗೂ ಹೈದರಬಾದ್ ನಲ್ಲಿರುವ ವರ ರಾಜೀವ್ ರೆಡ್ಡಿ ಮನೆಯ ಪ್ರತಿಕೃತಿ ಸಹ ನಿರ್ಮಿಸಲಾಗಿದೆ. 'ಎಲ್ಲಿ ಬಳ್ಳಾರಿಗೆ ಹೋಗಲು ಅನುಮತಿ ಸಿಗುವುದಿಲ್ಲವೋ ಅಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೋ ಎಂಬ ಆತಂಕ ಜನಾರ್ದನ ರೆಡ್ಡಿಗಿತ್ತು. ಆದ್ದರಿಂದಲೇ ಇಂಥ ವ್ಯವಸ್ಥೆ ಮಾಡಲಾಗಿತ್ತು' ಎಂದು ಕುಟುಂಬ ಮೂಲದವರೊಬ್ಬರು ಕಾರಣ ಬಿಚ್ಚಿಟ್ಟಿದ್ದಾರೆ.
ಈ ಮನೆಗಳನ್ನು ಸಾಂಪ್ರದಾಯಿಕ ಆಟಗಳಾದ ಕುಂಟೆ ಬಿಲ್ಲೆಯಂಥದ್ದನ್ನು ಅಡಲು ಬಳಸಿಕೊಂಡರೆ, ಇನ್ನು 'ಹಂಪಿ ಪುರಂದರ ದೇವಸ್ಥಾನ'ದಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಇನ್ನು ಹಳ್ಳಿ ಸೊಗಡನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನಲವತ್ತು ಜೋಡಿ ಎತ್ತಿನಗಾಡಿಯನ್ನು ಗೇಟಿನಿಂದ ಮದುವೆ ಮಂಟಪದವರೆಗೆ ಕುಟುಂಬ ಸದಸ್ಯರನ್ನು ಕರೆತರಲು ಬಳಸಲಾಗುತ್ತದೆ.[ಚಿಲ್ಲರೆ ಹಣಕ್ಕೆ ಜನರ ಪರದಾಟ! ಆದರೆ ಬಳ್ಳಾರಿಯಲ್ಲಿ ಗಣಿಹಣದ ಚೆಲ್ಲಾಟ]
ಮೂರು ಸಾವಿರ ಮಂದಿಯನ್ನು ಭದ್ರತೆಗಾಗಿಯೇ ನೇಮಿಸಿದ್ದು, ಅದರಲ್ಲಿ ಬೌನ್ಸರ್ ಗಳು ಕೂಡ ಸೇರಿದ್ದಾರೆ. ಐವತ್ತು ಸಾವಿರ ಮಂದಿ ಮದುವೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಕುಟುಂಬ ಮೂಲದ ಪ್ರಕಾರ ರಾಜ್ಯಗಳು ಹಾಗೂ ಕೇಂದ್ರದ ಸಚಿವರು ಭಾಗವಹಿಸುವ ಸಾಧ್ಯತೆಗಳಿವೆ. ಇನ್ನು ಗಾಯಕ ಸೋನು ನಿಗಮ್ ಭಾಗವಹಿಸ್ತಾರೆ ಎಂಬುದು ಸದ್ಯದ ಸುದ್ದಿ.