ಅಭಿವೃದ್ಧಿ ಆಲೋಚನೆ ಹಂಚಿಕೊಳ್ಳಲು ಜನಪರ ಶಕ್ತಿ: ಶಾಸಕ ಅಶ್ವಥ್ ನಾರಾಯಣ್
ಬೆಂಗಳೂರು, ಜ 27, 2018: ನವ ಭಾರತ ನಿರ್ಮಾಣ ನಿಟ್ಟಿನಲ್ಲಿ ಬಿಜೆಪಿ ಆರಂಭಿಸಿರುವ ವಿನೂತನ ಅಭಿಯಾನ ನವ ಕರ್ನಾಟಕ ಜನಪರಶಕ್ತಿ ಅಭಿವೃದ್ಧಿಯ ಚಿಂತನೆಗಳನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗಿದೆ ಎಂದು ಜನಪರಶಕ್ತಿಯ ಸಂಚಾಲಕರಾದ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲು ನಾನಾ ವಲಯಗಳ ಗಣ್ಯರು ಹಾಗೂ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಇದರಲ್ಲಿ ಪಡೆಯಲಾಗುತ್ತಿದೆ ಎಂದರು.
ಆನ್ ಲೈನ್ ಯುಗದಲ್ಲೂ ಎಲ್ಲಿದೆ ಚುನಾವಣೆ ಆಯೋಗ: ಶಾಸಕರ ಸಕಾಲಿಕ ಪತ್ರ
ಎರಡು ಪರ್ಯಾಯ ಮಾರ್ಗಗಳ ಮೂಲಕ ಸಲಹೆ- ಸೂಚನೆಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳನ್ನೆಲ್ಲಾ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಯಾವ್ಯಾವ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಬೇಕು ಎಂಬ ಪ್ರಗತಿಯ ಮುನ್ನೋಟ ರೂಪಿಸಲಾಗುವುದು ಎಂದು ವಿವರಿಸಿದರು.
ಸುಧಾರಣೆಗಾಗಿ ಅಭಿಪ್ರಾಯ ತಿಳಿಸುತ್ತಿದ್ದಾರೆ
ಕರ್ನಾಟಕ ಬಿಜೆಪಿಯ ವಿನೂತನ ಅಭಿಯಾನ ನವಕರ್ನಾಟಕ ಜನಪರಶಕ್ತಿ ದಿನೇದಿನೇ ಜನಪ್ರಿಯಗೊಳ್ಳುತ್ತಿದ್ದು, ಅದರ ಮೂಲಕ ಸಹಸ್ರಾರು ಜನರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಕೆಲಸ- ಕಾರ್ಯಗಳು ಮತ್ತು ಸುಧಾರಣೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕೆಲವು ತಿಂಗಳಿನಿಂದ ಪಕ್ಷದ ಸದಸ್ಯರು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಹಲವು ವಲಯಗಳ ಆಯ್ದ ಪ್ರಭಾವಿ ವ್ಯಕ್ತಿಗಳನ್ನು ಹಾಗೂ ಜನಸಾಮಾನ್ಯರನ್ನು ಗುರುತಿಸಿ ಅವರ ಜತೆ ರಾಜ್ಯದ ನಾನಾ ಮೂಲೆ ಮೂಲೆಗಳಲ್ಲಿ ಸಂವಾದಗಳನ್ನು ನಡೆಸಲಾಗುತ್ತಿದೆ ಎಂದರು.
ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ತನ್ನದೇ ಆದ ಅಭಿವೃದ್ಧಿಯ ನೀಲನಕ್ಷೆ-ರೂಪುರೇಷೆ ರೂಪಿಸುವುದು. ಅದರಲ್ಲಿ ನಾನಾ ವಲಯಗಳ 500 ರಿಂದ ಒಂದು ಸಾವಿರ ಪ್ರಭಾವಿ ವ್ಯಕ್ತಿಗಳ ಅಭಿಪ್ರಾಯಗಳನ್ನು ದಾಖಲಿಸುವುದು, ನವಕರ್ನಾಟಕ ನಿರ್ಮಾಣ ನಿಟ್ಟಿನಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಮತ್ತು ಪ್ರತಿಯೊಂದು ವಲಯದಲ್ಲೂ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ-ಸೂಚನೆಗಳನ್ನು ಪಡೆಯುವುದಾಗಿದೆ ಎಂದರು.
224 ವಿಧಾನಸಭಾ ಕ್ಷೇತ್ರಗಳು, 23 ವಲಯಗಳ ಸೇರ್ಪಡೆ
ಸಣ್ಣ ಪ್ರಮಾಣದಲ್ಲಿ ಸಲಹೆಗಳನ್ನು ಸಂಗ್ರಹಿಸುವ ಚಟುವಟಿಕೆಯಾಗಿ ಆರಂಭವಾದ ನವಕರ್ನಾಟಕ ಜನಪರಶಕ್ತಿ ಇದೀಗ ಬೃಹತ್ ಅಭಿಯಾನವಾಗಿ ಬೆಳೆದಿದ್ದು, ಅದರಲ್ಲಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳು ಹಾಗೂ 23 ವಲಯಗಳನ್ನು ಸೇರಿಸಲಾಗಿದೆ ಎಂದು ಹೇಳಿದರು.
ಪಕ್ಷಭೇದ ಮರೆತು, ನಾನಾ ವಲಯದ ಗಣ್ಯರನ್ನು ಈ ಸಲಹೆ-ಸಂಗ್ರಹ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದ್ದು, ಅವರೆಲ್ಲ ತಮ್ಮ ಅನಿಸಿಕೆಗಳನ್ನು ವಿಡಿಯೋ, ಇ-ಮೇಲ್, ವೆಬ್ ಸೈಟ್, ಫೇಸ್ ಬುಕ್, ಲಿಖಿತ ಅರ್ಜಿ ನಮೂನೆ ತುಂಬುವುದು ಸೇರಿದಂತೆ ಬಹುವಿಧದಲ್ಲಿ ತಮ್ಮ ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ ಎಂದರು.
40ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಯಶಸ್ವಿ
ಆ ರೀತಿ ಸಂಗ್ರಹಿಸಲಾದ ಸಲಹೆ-ಸೂಚನೆಗಳನ್ನು ಭವಿಷ್ಯದ ಮುನ್ನೋಟದಲ್ಲಿ ದಾಖಲಿಸಲಾಗುವುದು. ಈವರೆಗೆ ಈ ಅಭಿಯಾನ ಎಸ್ಎಂಎಸ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ 40 ಲಕ್ಷಕ್ಕೂ ಅಧಿಕ ಮಂದಿಯನ್ನು ತಲುಪಿದೆ. ಅಲ್ಲದೆ ತುಮಕೂರು, ಪುತ್ತೂರು, ಅರಭಾವಿ, ಕುಷ್ಟಗಿ ಸೇರಿದಂತೆ ಸುಮಾರು 40ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜನಪರ ಶಕ್ತಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದು ಹೇಳಿದರು.
ಆರೋಗ್ಯ ವಲಯ, ಶೈಕ್ಷಣಿಕ ವಲಯ, ಯುವಜನ ಸಬಲೀಕರಣ, ಮಹಿಳಾ ಸಬಲೀಕರಣ ಸೇರಿ ಐದಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದಂತೆ ಸಂವಾದ ಸಭೆಗಳನ್ನು ನಡೆಸಿ, ಆಯಾ ಕ್ಷೇತ್ರಗಳ ದಿಗ್ಗಜರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವುಗಳನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.