ಮಹದಾಯಿಗಾಗಿ ಫೆ.1 ರಿಂದ ಅಹೋರಾತ್ರಿ ಪ್ರತಿಭಟನಾ ಧರಣಿ
ಬೆಂಗಳೂರು ಜನವರಿ 31: ರಾಜ್ಯದಲ್ಲಿ ಕಳಸಾ ಬಂಡೂರಿ ನಾಲೆಗಳು ಹಾಗೂ ಮಹದಾಯಿ ಯೋಜನೆ ಎರಡೂ ಒಂದೇ ಎನ್ನುವ ಗೊಂದಲ ಹುಟ್ಟಿಸಲಾಗುತ್ತಿದೆ.
ಈ ಮೂಲಕ ಜನ ಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ ರಾಜಕೀಯ ಪಕ್ಷಗಳು ಹಾಗೂ ಇದುವರೆಗೂ ಈ ವಿಷಯದ ಬಗ್ಗೆ ತುಟ್ಟಿಬಿಚ್ಚದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಫೆಬ್ರವರಿ 1 ರಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲು ಜನ ಸಾಮಾನ್ಯರ ಪಕ್ಷ ಸಜ್ಜಾಗಿದೆ ಎಂದು ಪಕ್ಷದ ಅಧ್ಯಕ್ಷ ಡಾ. ಡಿ ಅಯ್ಯಪ್ಪ ಹೇಳಿದರು.
ರಾಜಕೀಯದಲ್ಲಿ ಸಂಕ್ರಮಣ, ಜನ ಸಾಮಾನ್ಯರ ಪಕ್ಷ ಉದಯ
ನಗರದಲ್ಲಿಂದು ಜನ ಸಾಮಾನ್ಯರ ಪಕ್ಷದ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲಾ ಯೋಜನೆ ಹಾಗೂ ಮಹದಾಯಿ ತಿರುವು ಯೋಜನೆಗಳೂ ಎರಡು ವಿಭಿನ್ನ. ಒಂದೇ ಪ್ರದೇಶದಲ್ಲಿವೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ಯೋಜನೆಗೆ ಬಹಳಷ್ಟು ವ್ಯತ್ಯಾಸವಿದೆ.
ವ್ಯಕ್ತಿ ಚಿತ್ರ: ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ
ಮಹದಾಯಿ ಯೋಜನೆ ನದಿಗೆ ಸಂಬಂಧಿಸಿದ್ದು ಹಾಗೂ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಮಧ್ಯೆ ನೀರು ಹಂಚಿಕೆಯ ಬಗ್ಗೆ ಇನ್ನುವರೆಗೂ ಯಾವುದೇ ತಿರ್ಮಾನಗಳು ಆಗಿಲ್ಲ. ಈ ಹಿನ್ನಲೆಯಲ್ಲಿ ಈ ವಿವಾದ ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ.
ಕೇಂದ್ರ ಸರಕಾರದ ನಿರಪೇಕ್ಷಣ ಪತ್ರ
ಕಳಸಾ ಬಂಡೂರಿ ನಾಲೆಗಳ ಕಾಮಗಾರಿಯನ್ನು ಪ್ರಾರಂಭಿಸಲು ರಾಜ್ಯಕ್ಕೆ ಬೇಕಾಗಿರುವುದು ಕೇವಲ ಪ್ರಧಾನ ಮಂತ್ರಿಗಳ ಅಥವಾ ಕೇಂದ್ರ ಸರಕಾರದ ನಿರಪೇಕ್ಷಣ ಪತ್ರ ಮಾತ್ರ. ಈ ಹಿನ್ನಲೆಯಲ್ಲಿ ಜನವರಿ 22, 2018 ರಂದು ಪ್ರಧಾನಮಂತ್ರಿಯವರ ಕಚೇರಿಗೆ ನಿರಪೇಕ್ಷಣಾ ಪತ್ರವನ್ನು ನೀಡುವಂತೆ ಮನವಿಯನ್ನು ಜನ ಸಾಮಾನ್ಯರ ಪಕ್ಷ ನೀಡಿದೆ. ಅಲ್ಲದೆ, ಪ್ರಧಾನಿಗಳಿಗೆ ಎಲ್ಲಾ ರೀತಿಯಲ್ಲೂ ತಲುಪುವ ಪ್ರಯತ್ನ ಮಾಡಲಾಗಿದೆ. ಆದರೆ, ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಧಾನಿಗಳು ಒಂದು ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ತುಟಿ ಬಿಚ್ಚದೇ ಇರುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ.
ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ
ಕರ್ನಾಟಕದ ಜ್ವಲಂತ ಸಮಸ್ಯೆಗೆ ಸ್ಪಂದಿಸದ ಪ್ರಧಾನಿಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಪಕ್ಷ ಫೆಬ್ರವರಿ 1 ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದರು.
ಕಳಸಾ ಬಂಡೂರಿಯ ವಿಷಯವಾಗಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ನ್ಯಾಯಾಧಿಕರಣದ ಪರಿಧಿಯಿಂದ ಹೊರಗೆ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ. ಅಲ್ಲದೆ, ಈ ಪ್ರತಿಭಟನೆ ನಿರಪೇಕ್ಷಣಾ ಪತ್ರ ದೊರೆಯುವವರೆಗೂ ಮುಂದುವರೆಯಲಿದೆ ಎಂದರು.
ಪ್ರಧಾನಿಗಳೇ ರಾಜಕೀಯ ಬಿಡಿ ನೀರು ಕೊಡಿ
ಪ್ರಧಾನಿಗಳೇ ರಾಜಕೀಯ ಬಿಡಿ ನೀರು ಕೊಡಿ ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರುವುದು ಅವಶ್ಯಕತೆ ಇಲ್ಲ ಎಂದು ಡಾ ಅಯ್ಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಮಾನ್ಯರ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಾಹಿತಿ ಚಂಪಾ ಮಾತನಾಡಿ, ಫೆಬ್ರವರಿ 4 ರಂದು ಕರೆದಿರುವ ಬಂದ್ಗೆ ನಮ್ಮ ಬೆಂಬಲವಿಲ್ಲ. ಮೌನವಾಗಿದ್ದೇ ಪ್ರತಿಭಟನೆ ಮಾಡಲು ಸಾಧ್ಯವಿದೆ.
ಸಾಹಿತಿ ಚಂಪಾ ಬೆಂಬಲ
ಆಲ್ಲದೆ ಅನೇಕ ರೀತಿಯ ಪ್ರತಿಭಟನೆ ಮಾಡಲು ಅವಕಾಶವಿದೆ, ಅದನ್ನು ಬಿಟ್ಟು ಕಂಡದ್ದಕ್ಕೆಲ್ಲಾ ಬಂದ್ ಮಾಡುವುದು ತಪ್ಪು ಎಂದರು. ನಾಳೆಯಿಂದ ನಡೆಯಲಿರುವ ಫ್ರೀಡಂ ಪಾರ್ಕ್ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಾನೂ ಸಾಥ್ ನೀಡುತ್ತಿದ್ದು, ನಾಳೆಯಿಂದ ನಾನು ಕೂಡಾ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಟಿ ವಿ ಸತೀಶ್, ಸಾಹಿತಿಗಳಾದ ಚಂಪಾ ಸೇರಿದಂತೆ ಹಲವರು ಭಾಗವಹಿಸಿದ್ದರು.