ವಿಧಾನಸಭೆಯಲ್ಲಿ ಯಡಿಯೂರಪ್ಪ ಪರ ವಹಿಸಿದ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿಯರು ವಿಧಾನಸಭೆಯಲ್ಲಿ ಇದ್ದಕ್ಕಿದ್ದಂತೆ ಬಿಎಸ್ ವೈ ಪರ ವಹಿಸಿ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಕುತೂಹಲವನ್ನು ಮೂಡಿಸಿದೆ.
ಬೆಂಗಳೂರು, ಫೆಬ್ರವರಿ 11: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ ಪ್ರಕರಣ ಕುರಿತು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಎಸ್ ವೈ ಪರ ವಹಿಸಿಕೊಂಡು ವಿಧಾನಸಭೆಯಲ್ಲಿ ಮಾತನಾಡಿದ್ದಾರೆ.
'ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾದ ಪ್ರಕರಣದಲ್ಲಿ ವಾದ-ಪ್ರತಿವಾದಕ್ಕೆ ನ್ಯಾಯಾಲಯ ಅವಕಾಶ ನೀಡದೇ ಏಕಾಏಕಿ ಅವರನ್ನು ಜೈಲಿಗೆ ಹಾಕಿದ್ದು ಸರಿಯಲ್ಲ' ಎಂದು ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದರು. ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರು ಬಿಎಸ್ ವೈ ಅವರು ಜೈಲಿನಿಂದ ಬಿಡುಗಡೆಯಾದಾಗ 'ವಿಕ್ಟರಿ' ಚಿಹ್ನೆ ತೋರಿಸಿದ್ದನ್ನು ವ್ಯಂಗ್ಯ ಮಾಡಿದ್ದರು. ಯಾರನ್ನೂ ಈ ರೀತಿ ಟೀಕೆಗೆ ಗುರಿಪಡಿಸಬಾರದು ಎಂದು ಎಚ್ ಡಿಕೆ ಆಕ್ಷೇಪಿಸಿದರು.[ಬದ್ಧತೆಯಿಲ್ಲದ ರಾಜ್ಯಪಾಲರ ಭಾಷಣ; ಕುಮಾರಸ್ವಾಮಿ ವ್ಯಂಗ್ಯ]
ಯಡಿಯೂರಪ್ಪನವರು 23 ದಿನ ಜೈಲಿನಲ್ಲಿದ್ದಾಗ ನಾನು ಖುಷಿ ಪಡಲಿಲ್ಲ, ವಿಚಾರಣೆ ಪೂರ್ಣವಾಗುವ ಮುನ್ನವೇ ತಪ್ಪಿತಸ್ಥ ಎಂದು ಸಾಬೀತಾಗುವ ಮುನ್ನವೇ ಜೈಲಿಗೆ ಕಳುಹಿಸಲಾಯಿತು. ನನ್ನ ಮೇಲೂ 3-4 ಪ್ರಕರಣಗಳಿವೆ. ಕ್ರಿಮಿನಲ್ ಪ್ರಕರಣಗಳನ್ನು ದುರುದ್ದೇಶ ಪೂರ್ವಕವಾಗಿ ದಾಖಲು ಮಾಡಲಾಗುತ್ತದೆ ಎಂದು ಅವರು ಹೇಳಿದರು. ಹಿಂದೆ ಅವರಿಗೆ ಆಗಿರುವುದು ಮುಂದೇ ಇಲ್ಲಿರುವ ಯಾರಿಗೂ ಆಗಬಾರದು ಎಂದು ತಿಳಿಸಿದರು.
ಎಚ್ ಡಿ ಕುಮಾರಸ್ವಾಮಿಯರು ಇದ್ದಕ್ಕಿದ್ದಂತೆ ಬಿಎಸ್ ವೈ ಪರ ವಹಿಸಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಕುತೂಹಲವನ್ನು ಮೂಡಿಸಿದೆ.