ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಕ್ರಿಕೆಟ್ ಮಂಡಳಿ ರಚಿಸಿ
ಬೆಳಗಾವಿ, ಡಿ. 16: ಉತ್ತರ ಕರ್ನಾಟಕ ಭಾಗವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಓರ್ವ ಶಾಸಕರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರತ್ಯೇಕ ಕ್ರಿಕೆಟ್ ಮಂಡಳಿಗೆ ಬೇಡಿಕೆ ಇಟ್ಟಿದ್ದಾರೆ.
ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತ್ಯೇಕ ಕ್ರಿಕೆಟ್ ಅಸೋಸಿಯೇಶನ್ ರೂಪಿಸಬೇಕೆಂದು ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. [ಬ್ರಿಜೇಶ್ ಬಣ ವಿರುದ್ಧ ಕುಂಬ್ಳೆ ಗರಂ]
ಬೆಳಗಾವಿಯಲ್ಲಿ ಆಯೋಜಿಸಿರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಪ್ರಾಂತೀಯ ಅಸಮತೋಲನ ಕುರಿತು ಮಾತನಾಡಿ, ಈಗಿರುವ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಜೊತೆಗೆ ಉತ್ತರ ಕರ್ನಾಟಕಕ್ಕಾಗಿ ವಿಶೇಷ ಅಸೋಸಿಯೇಶನ್ ರಚಿಸಬೇಕು. ಈ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಈ ಮೂಲಕ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರ ರಾಜ್ಯಗಳ ಉದಾಹರಣೆ: ಸುತ್ತಲಿನ ರಾಜ್ಯಗಳ ಉದಾಹರಣೆ ಕೊಟ್ಟು ತಮ್ಮ ಬೇಡಿಕೆಯನ್ನು ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. [ಕೆಎಸ್ ಸಿಎ ಶುಭಾರಂಭ]
ಮಹಾರಾಷ್ಟ್ರದಲ್ಲಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಎಂಬ ಮೂರು ಕ್ರಿಕೆಟ್ ಮಂಡಳಿಗಳಿವೆ. ಗುಜರಾತ್ನಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಇದೆ.
ಆಂಧ್ರ ಪ್ರದೇಶದಲ್ಲಿ ಕೂಡ ಆಂಧ್ರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಹೈದರಾಬಾದ್ ಕ್ರಿಕೆಟ್ ಅಸೋಸಿಯನ್ ಇವೆ. ಈಗ ತೆಲಂಗಾಣ ರಾಜ್ಯ ರಚನೆಯಾದ ಮೇಲೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಶನ್ ಕೂಡ ಇದೆ ಎಂದರು.
ಈಗಿರುವ ಕೆಎಸ್ಸಿಎ ಬೆಂಗಳೂರು ಹಾಗೂ ಸುತ್ತಲಿನ ಆಟಗಾರರಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದೆ. ಉತ್ತರ ಕರ್ನಾಟಕದ ಕೆಲವೇ ಆಟಗಾರರನ್ನು ಆರಿಸಿದೆ. ಆದ್ದರಿಂದ ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಒಂದಕ್ಕಿಂತ ಹೆಚ್ಚು ಕ್ರಿಕೆಟ್ ಮಂಡಳಿಗಳನ್ನು ರಚಿಸಬೇಕೆಂದು ಆಗ್ರಹಿಸಿದರು.
ಸುನಿಲ್ ಜೋಶಿಯಂತಹ ಕ್ರಿಕೆಟ್ ಆಟಗಾರು ಉತ್ತರ ಕರ್ನಾಟಕ ಭಾಗದಿಂದಲೇ ಬಂದವರು ಎಂದು ಶೆಟ್ಟರ್ ಹೇಳಿಕೊಂಡರು.