ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ
ಬೆಂಗಳೂರು ಅಕ್ಟೋಬರ್ 4: ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ದಿ ಹಾಗೂ ದೇಶ ವಿದೇಶದ ಪ್ರವಾಸಿ ತಾಣಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 5 ರಿಂದ ಮೂರು ದಿನಗಳ ಕಾಲ ಅಂತರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ ನಡೆಯಲಿದೆ ಎಂದು ಕ್ಲಬ್ 9 ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಲಬ್ 9 ಈವೆಂಟ್ಸ್ ಆಯೋಜಿಸಿರುವ ಈ "ಟೂರಿಸಂ ಸಮಿಟ್ 2018" ಕ್ಕೆ ರಾಜ್ಯದ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಚಾಲನೆ ನೀಡಲಿದ್ದಾರೆ.
ಬಜೆಟ್ : ತೇಲುವ ಉಪಹಾರಗೃಹ ಸೇರಿ ಪ್ರವಾಸಿಗರಿಗೆ ಸಿಕ್ಕಿದ್ದೇನು?
ಈ ಅಂತಾರಾಷ್ಟ್ರೀಯ ಪ್ರವಾಸಿ ಪ್ರದರ್ಶನದಲ್ಲಿ ರಾಜ್ಯದ ಹಾಗೂ ದೇಶದ ಪ್ರವಾಸಿ ತಾಣಗಳ ಅಭಿವೃದ್ದಿ, ಹೂಡಿಕೆಗೆ ಇರುವ ಅವಕಾಶಗಳು, ಹೊಸ ಪ್ರವಾಸಿ ತಾಣಗಳ ಸೃಷ್ಟಿ ಸೇರಿ ಹಲವಾರು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದರು. ಅಲ್ಲದೆ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶಕರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಒಪ್ಪಂದಕ್ಕೆ ಪ್ರದರ್ಶನ ವೇದಿಕೆ ಒದಗಿಸಿಕೊಡಲಿದೆ ಎಂದರು.
ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?
ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ದಿಗೆ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಟೂರಿಸಂ ಸಮಿಟ್ ನಲ್ಲಿ ಚರ್ಚೆ ನಡೆಯಲಿದೆ. ಉಡುಪಿ ಜಿಲ್ಲೆಯನ್ನು ಅಡ್ವೆಂಚರ್ ಟೂರಿಸಂ ಕ್ಷೇತ್ರವಾಗಿ ಅಭಿವೃದ್ದಿಗೊಳಿಸುವ ಕುರಿತ ಚರ್ಚೆ ನಡೆಯಲಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಸ್ಕೂಬಾ ಡೈವಿಂಗ್ ತಾಣವೂ ಉಡುಪಿಯಲ್ಲಿ ಬರಲಿದೆ.
ಶೃಂಗ ಸಭೆಯಲ್ಲಿಯೇ ಇದಕ್ಕೆ ಚಾಲನೆ ದೊರೆಯಲಿದೆ. ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ಕರ್ನಾಟಕದಲ್ಲಿ ಬೀಚ್ಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಅವಕಾಶಗಳಿವೆ. ಇದರ ಕುರಿತಾಗಿಯೂ ಸಭೆಯಲ್ಲಿ ತಜ್ಞರು ಅಭಿಪ್ರಾಯ ಮಂಡಿಸಲಿದ್ದಾರೆ.
ಮಡಿಕೇರಿಯಲ್ಲಿ ಪ್ರವಾಸಿ ತಾಣಗಳ ಮರು ಅಭಿವೃದ್ದಿ
ಕಾರ್ಯಕ್ರಮದ ರೂವಾರಿಗಳಾದ ಡಾ ಬಿ ಎಂ ಉಮೇಶ್ ಕುಮಾರ್ ಮಾತನಾಡಿ, ಭಾರಿ ಮಳೆಯಿಂದಾಗಿ ಭೂಕುಸಿತ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ವಯನಾಡ್ ಹಾಗೂ ಮಡಿಕೇರಿಯಲ್ಲಿ ಪ್ರವಾಸಿ ತಾಣಗಳ ಮರು ಅಭಿವೃದ್ದಿಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ದಸರಾ ಹಿನ್ನಲೆಯಲ್ಲಿ ಮೈಸೂರು, ಮಡಿಕೇರಿ ಜಿಲ್ಲೆಗೆ ದೇಶ-ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸಲಿದ್ದು, ಮಡಿಕೇರಿಯಲ್ಲಿನ ರೆಸಾರ್ಟ್ ಹಾಗೂ ಹೋಟೇಲ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳಾ ನವೋದ್ಯಮಿಗಳೂ, ಗ್ರಾಮೀಣ ಭಾಗದ ಪ್ರವಾಸಿ ತಾಣಗಳ ಅಭಿವೃದ್ದಿ, ಆರೋಗ್ಯ ಪ್ರವಾಸೋದ್ಯಮ, ವೈನ್ ಟೂರಿಸಂ, ಅಡ್ವೇಂಚರ್ಸ್ ಟೂರಿಸಂ ಮೂಲಕ ಕರ್ನಾಟಕ ರಾಜ್ಯಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದು ಸಮಿಟ್ ಉದ್ದೇಶವಾಗಿದೆ ಎಂದರು.
ಇಂಡಿಯನ್ ಟ್ರೆಡಿಷನಲ್ ಫ್ಯಾಷನ್ ಶೋ
ಇಂಡಿಯನ್ ಟ್ರೆಡಿಷನಲ್ ಫ್ಯಾಷನ್ ಶೋ: ಶೃಂಗ ಸಭೆಯ ಎರಡನೇ ದಿನ ಮೈಸೂರು ಸಿಲ್ಕ್ ಸೀರೆಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಇಂಡಿಯನ್ ಟ್ರೆಡಿಷನಲ್ ಶೋನ್ನು ಆಯೋಜಿಸಲಾಗಿದೆ. ಅಲ್ಲದೆ, ಪ್ರದರ್ಶನದಲ್ಲಿ ದೇಸಿ ತಿನಿಸುಗಳ ಮಳಿಗೆಗಳೂ ಇರಲಿವೆ.
ಪ್ರವಾಸಿ ತಾಣಗಳ ಸಮಗ್ರ ಮಾಹಿತಿ
ಕರ್ನಾಟಕ, ಕೇರಳ, ಗೋವಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಸೇರಿ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳೂ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಹೀಗಾಗಿ ದೇಶದ ಪ್ರಮುಖ ಪ್ರವಾಸಿ ತಾಣಗಳ ಸಮಗ್ರ ಪರಿಚಯ ಇಲ್ಲಿ ಲಭ್ಯವಾಗಲಿವೆ. ದುಬೈ, ಮಲೇಷ್ಯಾ, ಮುಂಬೈ, ಪುಣೆ, ಗುಜರಾತ್, ದೆಹಲಿ ಟ್ರಾವೆಲ್ ಏಜೆಂಟ್ ಗಳೂ ಪಾಲ್ಗೊಳ್ಳಲಿದ್ದಾರೆ.
ರೆಸಾರ್ಟ್ಗಳಲ್ಲಿ ಸಿಗುವ ರಿಯಾಯತಿ
ಈ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ರಜಾ ದಿನಗಳು ಮತ್ತು ಕ್ರಿಸ್ಮಸ್ ರಜಾದಿನಗಳಿಗೆ ಪ್ರವಾಸ ಮಾಡುವವರಿಗೆ ಉತ್ತಮ ಡೀಲ್ಗಳು ದೊರೆಯಲಿವೆ. ಯಾವ ಪ್ರದೇಶಗಳಿಗೆ, ಯಾವ ಸಮಯದಲ್ಲಿ ಹೋಗಬೇಕು, ಅಲ್ಲಿನ ವೈಶಿಷ್ಟ್ಯತೆಗಳೇನು, ಎಷ್ಟು ದಿನ, ಪ್ರಯಾಣ ಹೇಗಿರಬೇಕು, ವಾಯಮಾರ್ಗ, ಜಲಮಾರ್ಗ, ರಸ್ತೆ ಮಾರ್ಗಗಳ ಬಗ್ಗೆ ಮಾಹಿತಿ. ಹೋಟೇಲ್, ರೆಸಾರ್ಟ್ಗಳಲ್ಲಿ ಸಿಗುವ ರಿಯಾಯತಿಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.
ಒಂದು ಕಥೆ ಹೇಳುವೆ: ಐತಿಹಾಸಿಕ ಸ್ಥಳಗಳು, ವಿಶೇಷವಾದ ಪ್ರದೇಶಗಳ ಬಗ್ಗೆ ಕಥೆ ಹೇಳುವುದು ಇದರ ವಿಶೇಷ. ಈ ಕಾರ್ಯಕ್ರಮವನ್ನು ಅನುಭವಿ ಗೈಡ್ ಗಳು ಮತ್ತು ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ.