ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?
ಬೆಂಗಳೂರು, ಡಿಸೆಂಬರ್ 2: ಜನರು ಬ್ಯಾಂಕಿನಲ್ಲಿ ಹಣ ಪಡೆಯಲು ಪರದಾಡುತ್ತಿದ್ದಾರೆ ಆದರೆ ಬೆಂಗಳೂರಿನಲ್ಲಿ ಐಟಿದಾಳಿಯಿಂದ ರು. 4.70 ಕೋಟಿ ಹೊಸ ನೋಟು ಸೇರಿದಂತೆ ಒಟ್ಟು ರು 6 ಕೋಟಿ, 7 ಕೆಜಿ ಚಿನ್ನ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಕಾವೇರಿ ನಿಗಮದ ಎಂಡಿ ಚಿಕ್ಕರಾಯಪ್ಪ, ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿ ಜಯಚಂದ್ರ ಸಿಕ್ಕಿ ಬಿದ್ದಿದ್ದಾರೆ.
ಇಬ್ಬರು ಅಧಿಕಾರಿಗಳು ಮುಖ್ಯಮಂತ್ರಿಗಳ ಆಪ್ತರಾಗಿದ್ದು, ಐಟಿ ಅಧಿಕಾರಿಗಳು ಬೆಳಗ್ಗಿನ ಜಾವ 3.30ರವರೆಗೆ ವಿಚಾರಣೆ ನಡೆಸಿದ್ದಾರೆ. ಇವರು ಯಾವ ಬ್ಯಾಂಕಿನಿಂದ ಹಣವನ್ನು ಪಡೆದಿದ್ದರು ಎಂಬುದರ ಬಗ್ಗೆ ಪೂರ್ಣ ಮಾಹಿತಿ ನೀಡಿಲ್ಲ.[ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]
ಸದ್ಯಕ್ಕೆ ಸಿಕ್ಕಿರುವ ಮೂಲಗಳ ಮಾಹಿತಿಯಂತೆ ಮೈಸೂರು ಮತ್ತು ತಮಿಳುನಾಡಿನ ಈರೋಡಿನಲ್ಲಿರೋ ಬ್ಯಾಂಕ್ಗಳಿಂದಲೇ ಹಣ ಡ್ರಾ ಆಗಿದೆಯಂತೆ. ಜೊತೆಗೆ ಬೆಂಗಳೂರಿನಲ್ಲಿರುವ ಬ್ಯಾಂಕೊಂದರಿಂದಲೂ ಹಣ ಡ್ರಾ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಭಾರಿ ಮೊತ್ತದ ಹಣವನ್ನು ಬ್ಯಾಂಕಿನಿಂದಲಾದರೂ ಹೇಗೆ ನೀಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದ್ದು, ಐಟಿ ದಾಳಿಯೊಂದಿಗೆ ಎಸಿಬಿಯೂ ತನಿಖೆ ನಸೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಸ್ತುತ ಚಿಕ್ಕರಾಯಪ್ಪ ಅವರನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡು ಬೆಳಗಾವಿ ಸದನದಲ್ಲಿ ಚರ್ಚೆ ಮಾಡುತ್ತಿದ್ದು, ಸಿಬಿಐ ತನಿಖೆಗೆ ಒತ್ತಾಯಿಸುವ ಸಾಧ್ಯತೆಯಿದೆ.
ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯ 'ನನಗೂ ಆ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ್ದಾರೆ.
ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ, ರಾಷ್ಟ್ರೀಯ ಹೆದ್ದಾರಿ ನಿಗಮದ ಮುಖ್ಯ ಅಧಿಕಾರಿ ಜಯಚಂದ್ರ ಇವರ ಅಪ್ತರಾದ ಚಂದ್ರಕಾಂತ್ ಮತ್ತು ಅಬ್ರಾಮ್ ಮನೆಯಲ್ಲಿಯೂ ಹಣವಿದೆಯೇ ಎಂಬ ರಹಸ್ಯವನ್ನು ಐಟಿ ಅಧಿಕಾರಿಗಳು ಶುಕ್ರವಾರ ಭೇದಿಸಲಿದ್ದಾರೆ.
ಇದನ್ನೆಲ್ಲಾ ನೋಡುತ್ತಿರುವ ಜಾರಿ ನಿರ್ದೇಶನಾಲಯ (ಇಡಿ)ಶುಕ್ರವಾರ ಈ ಪ್ರಕರಣದಲ್ಲಿ ಹೊಸದಾಗಿ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ ತನಿಖೆಯನ್ನು ಮಾಡಿ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.