ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿ
ಬೆಂಗಳೂರು, ಜೂನ್ 20: ನನಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಹೊಸ ನೋಟಿಸ್ ಬಂದಿಲ್ಲ. ನಾನು ನ್ಯಾಯಬದ್ಧವಾಗಿದ್ದೇನೆ. ಯಾವುದೇ ಒತ್ತಡಕ್ಕೆ ನಾನು ಮಣಿಯುವುದಿಲ್ಲ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹವಾಲಾ ಕೇಸಿನಲ್ಲಿ ಡಿಕೆ ಶಿವಕುಮಾರ್ ತಗುಲಿಕೊಂಡಿದೆ. ಅವರ ಆಪ್ತರೊಬ್ಬರ ಬಳಿ ಇರುವ ಡೈರಿಯಲ್ಲಿ ಹೈಕಮಾಂಡ್ ಗೆ ಕಪ್ಪಕಾಣಿಕೆ ನೀಡಿರುವುದರ ಬಗ್ಗೆ ಮಾಹಿತಿ ಎಂಬ ಸುದ್ದಿ ಹರಡಿದೆ.
'ಮಾಧ್ಯಮಗಳಲ್ಲಿ ಯಾವುದೋ ಡೈರಿಗಳ ಬಗ್ಗೆ ಉಲ್ಲೇಖಿಸುತ್ತಿದ್ದಾರೆ. ನಾವು ಸಹ ಬಹಳಷ್ಟು ಡೈರಿಗಳನ್ನು ನೋಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ. ನನ್ನ ಬಳಿಯೂ ಇದೇ ರೀತಿ ಸಾಕಷ್ಟು ಡೈರಿಗಳಿವೆ. ನಾನು ಸೂಕ್ತ ಕಾಲ ಸಂದರ್ಭ ಬಂದಾಗ ಡೈರಿಯನ್ನು ಓಪನ್ ಮಾಡುವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ನನ್ನ ತಾಯಿ, ಕುಟುಂಬದವರಿಗೂ ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ನೋಟಿಸ್ ಬಂದಿದೆ. ಒಟ್ಟು ಮೂರು ಪ್ರಕರಣಗಳನ್ನು ನನ್ನ ಮೇಲೆ ಹಾಕಲಾಗಿದೆ. ನ್ಯಾಯಾಲಯದ ಆದೇಶಕ್ಕೆ ಗೌರವಿಸುತ್ತೇವೆ, ವಿಚಾರಣೆಗೆ ಹಾಜರಾಗುತ್ತೇವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.
ನನ್ನನ್ನೇ ಏಕೆ ಟಾರ್ಗೆಟ್ ಮಾಡ್ತಿದ್ದಾರೆ? ಬೇರೆಯವರ ಮನೇಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿದ್ದರೂ ಅಂತವರ ಮೇಲೆ ಏಕೆ ದಾಳಿ ಇಲ್ಲ? ಈಗ ಹಾಜರಾಗಿ ಅಂತಾ ನೋಟಿಸ್ ಬಂದಿದೆ. ಸಮನ್ಸ್ ಬಂದಿಲ್ಲ ನೋಡಬೇಕು ಎಂದರು.