ಶರತ್ ಕೊಲೆ ಕೇಸ್ ಗೆ ಟ್ವಿಸ್ಟ್: ಸ್ನೇಹಿತನಿಂದಲೇ ಅಪಹರಣ, ಹತ್ಯೆ
ಬೆಂಗಳೂರು, ಸೆಪ್ಟೆಂಬರ್ 22: ಆದಾಯ ತೆರಿಗೆ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್ ಸ್ನೇಹಿತ ವಿಶಾಲ್ ಹಾಗೂ ಆತನ ಪ್ರಿಯತಮೆಯ ಭಾವ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ
ಸೆ. 12ರಂದು ಅಪಹರಣಕ್ಕೊಳಗಾಗಿದ್ದ ಶರತ್, ಅಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮನೆಯವರಿಗೆ ಸೆಲ್ಫಿ ವಿಡಿಯೋವೊಂದನ್ನು ರವಾನಿಸಿ ತನ್ನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾಗಿ ತಿಳಿಸಿದ್ದ. ಅಲ್ಲದೆ, ಪೊಲೀಸರಿಗೆ ದೂರು ನೀಡಬಾರದು. ಅಪಹರಣಕಾರರಿಗೆ 50 ಲಕ್ಷ ರು. ಹಣ ನೀಡಿ ತನ್ನನ್ನು ಬಿಡಿಸಿಕೊಂಡು ಹೋಗುವಂತೆ ಕೋರಿದ್ದ.
ಆದರೆ, ಸೆ. 14ರಂದು ನಿರಂಜನ್ ಅವರು ಜ್ಞಾನಭಾರತೀ ಪೊಲೀಸ್ ಠಾಣೆಯಲ್ಲಿ ತಮ್ಮ ಮಗನ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಇದನ್ನು ಅರಿತ ಆರೋಪಿಗಳು ಹೆದರಿ, ಶರತ್ ನನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ
ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ವಿಶಾಲ್ , ವಿನಯ್, ವಿಕ್ಕಿ, ಕಿರಣ್, ಕರ್ಣ, ಶಾಂತ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ, ವಿಶಾಲ್ ನ ಪ್ರಿಯತಮೆಯ ಭಾವ ಯಾರದ್ದೋ ಬಳಿ 4 ಲಕ್ಷ ರು. ಸಾಲ ಮಾಡಿ ಆ ಸಾಲವನ್ನು ತೀರಿಸಲಾಗದೇ ಪರಿತಪಿಸುತ್ತಿದ್ದರು. ಹಾಗಾಗಿ, ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಶರತ್ ನನ್ನು ಅಪಹರಿಸುವ ಯೋಜನೆಯನ್ನು ರೂಪಸಲಾಗಿತ್ತು.
ಶರತ್ ಅಕ್ಕನಿಗೆ ಫೋನ್ ಮಾಡಿದ್ದ ವಿಶಾಲ್, ಪೊಲೀಸರಿಗೆ ದೂರು ಕೊಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡಿದ್ದ. ಆನಂತರವೇ ಶರತ್ ಕೊಲೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಅಪಹರಣದ ನಂತರ, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಈ ಆರೋಪಿಗಳು ಯತ್ನಿಸಿದ್ದರೆಂದು ಆರೋಪಿಸಲಾಗಿದೆ.