ಐಟಿ ಕಂಪನಿಗಳ 'ಪಿಂಕ್ ಸ್ಲಿಪ್' ಅಸ್ತ್ರಕ್ಕೆ ಪ್ರಿಯಾಂಕ್ ಖರ್ಗೆಯಿಂದ ಪ್ರತ್ಯಸ್ತ್ರ
ಬೆಂಗಳೂರು, ಜೂನ್ 13: ಐಟಿ ಕಂಪನಿಗಳಲ್ಲಿ ಸಿಬ್ಬಂದಿಗಳನ್ನು ಏಕಾಏಕಿ ಕೈ ಬಿಡುವ ಕ್ರಮಕ್ಕೆ ನಿಯಂತ್ರಣ ಹೇರಲು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಅವರು ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಐಟಿ ಕಂಪನಿಗಳಲ್ಲಿನ ಸಮಸ್ಯೆಗಳ ಬಗ್ಗೆ ಕಾನೂನು ತರಲು ಹೊರಟಿದ್ದು ಬಹುಮುಖ್ಯವಾಗಿ ಬಲವಂತದ ರಾಜೀನಾಮೆಗೆ ಈ ಪಾಲಿಸಿ ಮೂಲಕ ಪರಿಹಾರ ಹುಡುಕಲು ಮುಂದಾಗಿದ್ದಾರೆ. ಐಟಿ ಕಂಪನಿಗಳ ನಾಯಕರು ಮತ್ತು ಸಿಬ್ಬಂದಿಗಳ ಜತೆ ಸಮಾಲೋಚನೆ ಮಾಡಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಐಟಿ ಉದ್ಯೋಗಿಗಳು ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ಯಾಕೆ?
ಈಗಾಗಲೇ ಹಲವು ಉದ್ಯೋಗಿಗಳು ತಮ್ಮ ಅಪ್ರೈಸಲ್ ಪಾರದರ್ಶಕವಾಗಿಲ್ಲ. ಉತ್ತಮ ಕೆಲಸ ಮಾಡುವವರನ್ನೇ ಕಂಪನಿಯಿಂದ ಕಿತ್ತು ಹಾಕಿದ್ದಾರೆ. ಕಂಪನಿಯೊಳಗೆ ಉದ್ಯೋಗಿಗಳನ್ನು ಸುಖಾ ಸುಮ್ಮನೆ ಮರು ವಿನ್ಯಾಸ ಮಾಡುತ್ತಿದ್ದಾರೆ. ಜತೆಗೆ ಪರಿಹಾರ ಹಣ ಉಳಿಸಲು ಎಷ್ಟೋ ಉದ್ಯೋಗಿಗಳ ಬಳಿ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆ ಎಂಬ ದೂರುಗಳು ಬಂದಿವೆ.
ಮಂಗಳೂರು, ಮೈಸೂರು, ಧಾರವಾಡದಲ್ಲಿ ಐಟಿ ಪಾರ್ಕ್ : ಪ್ರಿಯಾಂಕ್ ಖರ್ಗೆ
ಇತ್ತೀಚೆಗೆ ಐಟಿ ಕಂಪನಿಗಳ ಉದ್ಯೋಗಿಗಳ ಜತೆ ಮಾತುಕತೆ ಮಾಡಿದ ಸಚಿವ ಖರ್ಗೆ, 'ಇದಕ್ಕೆ ಸರಕಾರ ಕಾನೂನು ನೆರವು ನೀಡಲಿದೆ. ಜತೆಗೆ ಐಟಿ ಉದ್ಯೋಗಿಗಳಿಗಾಗಿ ವೇದಿಕೆಯನ್ನು ರಚಿಸುವ ತೀರ್ಮಾನ ತೆಗೆದುಕೊಳ್ಳಲಿದೆ," ಎಂದಿದ್ದರು. ಇದೇ ವೇಳೆ ಕಾರ್ಮಿಕ ಕಾನೂನುಗಳಿಂದ ಐಟಿ ಕಂಪನಿಗಳನ್ನು ಹೊರಗಿಟ್ಟ ತೀರ್ಮಾನವನ್ನು ಹಿತೆಗೆದುಕೊಳ್ಳುವಂತೆ ಉದ್ಯೋಗಿಗಳು ಬೇಡಿಕೆ ಇಟ್ಟಿದ್ದರು.
ಇನ್ನು ಕಾನೂನು ವಿರೋಧಿಯಾಗಿ ಉದ್ಯೋಗಿಗಳನ್ನು ಕೈ ಬಿಡುತ್ತಿರುವ ಕಂಪೆನಿಗಳ ವಿರುದ್ಧ ಕ್ರಮಕ್ಕೂ ಉದ್ಯೋಗಿಗಳು ಆಗ್ರಹಿಸಿದ್ದಾರೆ.