ಮತ್ತೆ ಸಚಿವ ಸಂಪುಟಕ್ಕೆ ಮೇಟಿ ಪ್ರವೇಶ ಮಾಡ್ತಾರಾ?
ಬೆಂಗಳೂರು, ಜನವರಿ 17: ರಾಸಲೀಲೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಲು ಬಿಜಾಪುರ ಹಾಗು ಬಾಗಲಕೋಟೆ ಕಾಂಗ್ರೆಸ್ ಮುಖಂಡರು ಒತ್ತಡ ಹೇರುತ್ತಿದ್ದಾರೆ.
ಜಿಜಾಪುರ ಮತ್ತು ಬಾಗಲಕೋಟೆ ಕಾಂಗ್ರೆಸ್ ಮುಖಂಡರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ಎರಡು ಮೂರು ದಿನಗಳಿಂದ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಮೇಟಿ ಅವರನ್ನು ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಆರು ಬಾರಿ ಶಾಸಕರಾಗಿರುವ ಅವರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ ಅವರು ಉತ್ತರ ಕರ್ನಾಟಕದಲ್ಲಿ ನಿಷ್ಠಾವಂತ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಸಂಚು ರೂಪಿಸಿ ಪ್ರಕರಣದಲ್ಲಿ ಅವರನ್ನು ಸಿಕ್ಕಿಸಿದ್ದಾರೆ ಎಂದು ಮುಖಂಡರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.[ಮೇಟಿ ರಾಸಲೀಲೆ ವಿಡಿಯೋ ಹಿಂದಿನ ರಹಸ್ಯವೇನು?]
ಮೇಟಿಯವರ ರಾಸಲೀಲೆ ಪ್ರಕರಣವನ್ನು ಸುದ್ದಿ ಮಾಧ್ಯಮಗಳು ರಾಜ್ಯಾದ್ಯಂತ ಪ್ರಸಾರ ಮಾಡಿತ್ತು. ಮೇಟಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ನನಗೆ ನಾಲ್ಕು ಜನರಿಂದ ಜೀವ ಬೆದರಿಕೆಯಿದೆ ಎಂದು ದೂರು ನೀಡಿದ್ದರು. ಸಿಐಟಿ ಅಧಿಕಾರಿಗಳು ಗನ್ ಮ್ಯಾನ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು.
ಸಿಐಡಿ ತನಿಖೆ ನಡೆಸುತ್ತಿರುವ ಹಿಂದೆಯೇ ಮೇಟಿಯವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಡ ಉತ್ತರ ಕರ್ನಾಟಕ ಮುಖಂಡರಿಂದ ಕೇಳಿಬಂದಿದೆ. ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಸಿಐಡಿಯಿಂದ ದೋಷಮುಕ್ತವಾಗಿ ಮತ್ತೆ ಸಂಪುಟಕ್ಕೆ ಸೇರಿಕೊಂಡರು. ಇದೇ ಮಾದರಿಯಲ್ಲಿ ಮೇಟಿಗೂ ಸಿಐಡಿಯಿಂದ ಕ್ಲೀನ್ ಚೀಟ್ ನೀಡಿ ಮತ್ತೆ ಸಚಿವ ಸಂಪುಟಕ್ಕೆ ಸೇರಿಕೊಳ್ಳುತ್ತಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.