ಕ್ರಿಕೆಟ್ ಬೆಟ್ಟಿಂಗ್ : ಶ್ರೀರಾಮಪುರದಲ್ಲಿ ಸುರೇಶ್ ಬಂಧನ
ಬೆಂಗಳೂರು, ಮೇ 28 : ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮೇ 27ರಂದು ನಡೆದ, ಐಪಿಎಲ್ 9ರ ಕೊನೆಯ ಪ್ಲೇಆಫ್ ಪಂದ್ಯಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಜೂಜಾಟದಲ್ಲಿ ತೊಡಗಿದ್ದ ಶ್ರೀರಾಮಪುರದ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಲಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮೇ 27ರಂದು ನಡೆಯುತ್ತಿದ್ದ ಪಂದ್ಯದ ಸೋಲು ಗೆಲುವಿನ ಬಗ್ಗೆ ಫೋನ್ ಮುಖಾಂತರ, ಸಾರ್ವಜನಿಕರಿಂದ ಬೆಟ್ಟಿಂಗ್ ಹಣ ಕಟ್ಟಿಸಿಕೊಂಡು ಜೂಜಾಟವಾಡುತ್ತಿದ್ದ.
ಖಚಿತ ಮಾಹಿತಿಯ ಮೇರೆಗೆ ಕೇಂದ್ರ ಅಪರಾಧ ವಿಭಾಗ(ಸಿ.ಸಿ.ಬಿ), ವಿಶೇಷ ವಿಚಾರಣ ದಳದ ಎಸಿಪಿ ಮತ್ತಿತರ ಸಿಬ್ಬಂದಿಗಲು ದಾಳಿ ಮಾಡಿ, ಶ್ರೀರಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಎನ್ ಪುರದಲ್ಲಿ 38 ವರ್ಷದ ಸುರೇಶ್ ಅಲಿಯಾಸ್ ಅರ್ಜುನ ಎಂಬಾತನನ್ನು ಬಂಧಿಸಿದ್ದಾರೆ. [ಹೈದರಾಬಾದ್ ತಂಡವನ್ನು ಫೈನಲ್ಗೆ ತಂದ ವಾರ್ನರ್!]
ಸುರೇಶನಿಂದ 56,400 ರು. ನಗದು, ಬೆಲೆ ಬಾಳುವ 6 ಮೊಬೈಲ್ ಫೋನ್, ಬೆಟ್ಟಿಂಗ್ ವಿವರಗಳಿರುವ ಒಂದು ಹಾಳೆ, ಸ್ಯಾಮ್ಸಂಗ್ ಎಲ್ಇಡಿ ಟಿವಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಐಪಿಎಲ್ 9 ಟೂರ್ನಾಮೆಂಟಿನ ಅಂತಿಮ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 29ರ ಸಂಜೆ ನಡೆಯಲಿದೆ. ಈ ಪಂದ್ಯಕ್ಕೂ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುವ ಸಾಧ್ಯತೆಗಳಿವೆ. [ಫೈನಲ್ ಪ್ರವೇಶಿಸಿದ ಜೋಶ್ ನಲ್ಲಿ ಆರ್ ಸಿಬಿ ಹುಡ್ಗರ ಡಾನ್ಸ್]