ಜೀವನದಲ್ಲಿ ಗುರಿಗಿಂತಲೂ ಉದ್ದೇಶ ಮುಖ್ಯ: ಅರ್ಜುನ್ ದೇವಯ್ಯ
ಬೆಂಗಳೂರು, ಏಪ್ರಿಲ್ 17: ಜೀವನದಲ್ಲಿ ಗುರಿಯನ್ನು ತಲುಪುವುದಕ್ಕಿಂತಾ ಆ ಗುರಿಯ ಹಿಂದಿರುವ ಉದ್ದೇಶವನ್ನು ತಲುಪುವುದು ಮುಖ್ಯ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಹೇಳಿದರು.
ನಗರದ ಬಾಲ ಭವನ ಸೊಸೈಟಿ, ಕಬ್ಬನ್ ಪಾರ್ಕ್ ಬೆಂಗಳೂರು ವತಿಯಿಂದ ಕೇಂದ್ರ ಬಾಲಭವನದಲ್ಲಿ ಆಯೋಜಿಸಲಾಗಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಮಕ್ಕಳಲ್ಲಿ ಹುದುಗಿರುವ ಕ್ರೀಯಾಶೀಲತೆಯನ್ನು ಗುರುತಿಸಬೇಕು ಹಾಗೂ ಅದಕ್ಕೆ ಬೇಕಾದ ಪೋಷಣೆ ನೀಡಬೇಕು. ಮಕ್ಕಳನ್ನು ತಮ್ಮ ಮೊಬೈಲ್ಗಳಲ್ಲಿ ಮುಳಗಲು ಬಿಡದೇ ಅವರ ಜೊತೆ ಕಾಲವನ್ನು ಕಳೆಯುವುದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅಭಿವೃದ್ದಿಗೆ ಪೂರಕ ಎಂದರು.
ಚಿಣ್ಣರಿಗಾಗಿ ಬಾಲಭವನದಲ್ಲಿ ಬೇಸಿಗೆ ಶಿಬಿರ
ಆಧುನಿಕ ವಿಧ್ಯಾಭ್ಯಾಸ ವ್ಯವಸ್ಥೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 100 ರಷ್ಟು ಓದಿಗೇ ಸಮಯವನ್ನು ವ್ಯಯಿಸುತ್ತಾರೆ. ಬೇಸಿಗೆ ರಜೆಯಲ್ಲಿ ಇದು ಕ್ರೀಡಾ ಚಟುವಟಿಕೆಗಳತ್ತ ತಿರುಗುತ್ತದೆ. ಆದರೆ, ಹೀಗಾಗದೇ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 80 ರಷ್ಟು ವಿಧ್ಯಾಭ್ಯಾಸಕ್ಕಾಗಿ ಹಾಗೂ 20 ರಷ್ಟು ಕ್ರೀಡೆಗಳಿಗೆ ಸಮಯವನ್ನು ಮೀಸಲಿಡುವುದು ಅಗತ್ಯ. ಇದು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಾಯಕ ಎಂದರು.
ಬಾಲ ಭವನದ ಕಾರ್ಯದರ್ಶಿ ಶ್ರೀಮತಿ ದಿವ್ಯಾ ನಾರಾಯಣಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳ ಬೇಸಿಗೆಯನ್ನು ಕ್ರಿಯಾತ್ಮಕವಾಗಿ ಕಳೆಯಲು ಬಾಲ ಭವನದಲ್ಲಿ ಅವಕಾಶ ಮಾಡಿಕೊಡುವ ಶಿಬಿರ ಇದಾಗಿರಲಿದೆ. ಕ್ರಿಯಾತ್ಮಕವಾಗಿ ಚಟುವಟಿಕೆಗಳನ್ನು ಶಿಬಿರದಲ್ಲಿ ಅಳವಡಿಸಿಕೊಂಡಿದ್ದು ಮಕ್ಕಳ ವರ್ಷದ ವಿಧ್ಯಾಭ್ಯಾಸದ ಒತ್ತಡವನ್ನು ಕಡಿಮೆಗೊಳಿಸಲು ಈ ಶಿಬಿರ ಸಹಾಯಕವಾಗಲಿದೆ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಚಿತ್ರ ಬಿಡಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಇದೇ ಸಂಧರ್ಭದಲ್ಲಿ ಕಾಶ್ಮೀರದಲ್ಲಿ ಕೊಲೆಯಾಗಿರುವ ಆಸಿಫಾ ಆತ್ಮಕ್ಕೆ ಶಾಂತಿಯನ್ನು ಕೋರಿ ಮೇಣದ ಬತ್ತಿಗಳನ್ನು ಉರಿಸುವ ಮೂಲಕ ಮಕ್ಕಳು ಸಂತಾಪ ಸೂಚಿಸಿದರು.