ಹೆಬ್ಬಾಳದಲ್ಲಿ ದಿಗ್ಗಜರಿಗೆ ನೀರು ಕುಡಿಸುವರೆ ಚಾಯ್ ವಾಲಾ?
ಎಲ್ಲೆಲ್ಲೂ 'ನಮೋ..ನಮೋ..ನಮೋ.!' ಇಂತಹ ಮೇನಿಯಾ ಶುರುವಾಗುವುದಕ್ಕೆ ಕಾರಣ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ.
ಒಂದ್ಕಾಲದಲ್ಲಿ ಗುಜರಾತ್ ನ ಬೀದಿಬೀದಿಗಳಲ್ಲಿ 'ಚಾಯ್' ಮಾರುತ್ತಿದ್ದ ನರೇಂದ್ರ ದಾಮೋದರ್ ದಾಸ್ ಮೋದಿ ಇಂದು ಪ್ರಧಾನ ಮಂತ್ರಿ ಆಗಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿರುವುದು ಸೋಜಿಗವೇ ಸರಿ.
ಎಲ್ಲೇ ಹೋದರೂ, ತಾವು 'ಚಾಯ್ ವಾಲಾ' ಅಂತ ಕೊಂಚ ಕೂಡ ಅಳುಕಿಲ್ಲದೆ ಹೇಳಿಕೊಳ್ಳುವ ನರೇಂದ್ರ ಮೋದಿ 'ಚಾಯ್ ಪೇ ಚರ್ಚಾ' ಕೂಡ ಶುರುಮಾಡಿದ್ದು ನಿಮಗೆಲ್ಲಾ ಗೊತ್ತಿದೆ.['ಹೆಬ್ಬಾಳ ಉಪ ಚುನಾವಣೆಯಲ್ಲಿ ಗೆಲುವು ನಮ್ಮದು']
ಅಸಲಿಗೆ, ನರೇಂದ್ರ ಮೋದಿಜಿ ಬಗ್ಗೆ ನಾವೀಗ ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಬೆಂಗಳೂರಿನ ಜಾನ್ಸನ್ ಮಾರ್ಕೆಟ್ ನಲ್ಲಿರುವ 'ಚಾಯ್ ಡೇ' ಅಂಗಡಿ ಮಾಲೀಕ ಆಸಿಫ್ ಬುಕಾರಿಯಾ.
ಅರೇ...ಆಸಿಫ್ ಬುಕಾರಿಯಾಗೂ ನರೇಂದ್ರ ಮೋದಿಗೂ ಏನ್ ಸಂಬಂಧ ಅಂತೀರಾ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....ನಿಮಗೆ ಗೊತ್ತಾಗುತ್ತೆ....
ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಬೆಂಗಳೂರಿನ ಚಾಯ್ ವಾಲಾ!
ಚಾಯ್ ವಾಲಾ ಆಗಿದ್ದ ಮೋದಿ, ದೇಶದ ಪ್ರಧಾನಿ ಆದಂತೆ ತಾವೂ ರಾಜಕೀಯದಲ್ಲಿ ಏನಾದರೂ ಸಾಧನೆ ಮಾಡಿ, ಸಮಾಜಮುಖಿ ಕೆಲಸ ಮಾಡ್ಬೇಕು ಅನ್ನೋದು ಬೆಂಗಳೂರಿನ ಜಾನ್ಸನ್ ಮಾರ್ಕೆಟ್ ನಲ್ಲಿರುವ 'ಚಾಯ್ ಡೇ' ಅಂಗಡಿ ಮಾಲೀಕ ಆಸಿಫ್ ಬುಕಾರಿಯಾ ಬಯಕೆ. ಇದೇ ಕಾರಣಕ್ಕೆ ಅವರು ಇದೀಗ ನಡೆಯಲಿರುವ ಉಪ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ.[3 ಕ್ಷೇತ್ರಗಳ ಉಪ ಚುನಾವಣೆ : ಪಕ್ಷಗಳ ಅಭ್ಯರ್ಥಿಗಳ ಪಟ್ಟಿ]
ರಾಜಕೀಯಕ್ಕೆ ಬರಲು ಸ್ಫೂರ್ತಿ?
'ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ' ಎನ್ನುವ ಮಾತಿದೆ. ಹಾಗೇ, ತಮ್ಮ 'ಚಾಯ್ ಡೇ' ಅಂಗಡಿಗೆ ಬಂದ ಜನರು ಮಾತನಾಡಿಕೊಳ್ಳುತ್ತಿದ್ದ ನೋವು-ನಲಿವು, ಕಷ್ಟ-ಸುಖ, ದುಃಖ-ದುಮ್ಮಾನ ಕಂಡು ಜನರಿಗೆ ಸಹಾಯ ಮಾಡಬೇಕೆನ್ನುವ ಕಾರಣಕ್ಕೆ ಆಸಿಫ್ ಬುಕಾರಿಯಾ ರಾಜಕೀಯದತ್ತ ಒಲವು ತೋರಿದ್ದಾರೆ.[ಮೂರು ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆ]
ಆಸಿಫ್ ಬುಕಾರಿಯಾ ಹಿನ್ನಲೆ
ಆಸಿಫ್ ಬುಕಾರಿಯಾ ಬೆಂಗಳೂರಿನ ಅಶೋಕನಗರದ ನಿವಾಸಿ. ಮೂವರು ಮಕ್ಕಳ ತಂದೆ. ವಂಶ ಪಾರಂಪರ್ಯವಾಗಿ ಚಾಯ್ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 11 ರವರೆಗೆ 'ಚಾಯ್ ಡೇ'ನಲ್ಲೇ ಇರುತ್ತಾರೆ. ಒಮ್ಮೆ ಇವರ 'ಚಾಯ್ ಡೇ' ಅಂಗಡಿಗೆ ಭೇಟಿ ಕೊಟ್ಟರೆ, ''ಖುಷಿಯಾಗಿರುವಾಗ ಪ್ರಮಾಣ ಮಾಡಬೇಡಿ. ಕೋಪದಲ್ಲಿರುವಾಗ ಪ್ರತಿಕ್ರಿಯೆ ನೀಡಬೇಡಿ. ವೀ ಆರ್ ನಾಟ್ ಯೂಸ್ ಲೆಸ್, ವೀ ಆರ್ ಯೂಸ್ಡ್ ಲೆಸ್'' ಎನ್ನುವ ಸಂತೃಪ್ತ ಜೀವನಕ್ಕೆ ಬೇಕಾಗಿರುವ ಅನೇಕ ಧ್ಯೇಯ ವಾಕ್ಯಗಳನ್ನ ಕಾಣ್ಬಹುದು.
ಐದು ಬಾರಿ ಕಣಕ್ಕೆ
ನೀವು ನಂಬ್ತೀರೋ, ಬಿಡ್ತೀರೋ...ಈಗಾಗಲೇ ಎಂ.ಪಿ, ಬಿ.ಬಿ.ಎಂ.ಪಿ ಚುನಾವಣೆ ಸೇರಿದಂತೆ ನಾಲ್ಕು ಬಾರಿ ಎಲೆಕ್ಷನ್ ನಲ್ಲಿ ನಿಂತು ಸೋಲು ಅನುಭವಿಸಿರುವ ಆಸಿಫ್ ಬುಕಾರಿಯಾ ಇದೀಗ ಐದನೇ ವಾರಿ ಹೆಬ್ಬಾಳ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಅನ್ನೋ ಭರವಸೆ ಅವರದ್ದು.
ಎಲೆಕ್ಷನ್ ಗೆ ಹಣ ಎಲ್ಲಿದೆ?
'ಚಾಯ್ ಡೇ' ಹೋಟೆಲ್ ನಲ್ಲಿನ ದುಡಿಮೆಯೇ ಅವರ ಠೇವಣಿ ಹಣ. ಇತರೆ ಸ್ಪರ್ಧಿಗಳು ಖರ್ಚು ಮಾಡುವಂತೆ ಇವರ ಬಳಿ ಕೋಟಿ ಕೋಟಿ ದುಡ್ಡಿಲ್ಲ. ದುಡ್ಡು ಖರ್ಚು ಮಾಡದೆ ಪ್ರಾಮಾಣಿಕವಾಗಿ ಎಲೆಕ್ಷನ್ ನಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಚುನಾವಣಾ ಪ್ರಚಾರದಲ್ಲಿ ಇವರದ್ದು ಏಕಾಂಗಿ ಹೋರಾಟ. ಅವರ ಬಳಿ ಇರುವ ಆಕ್ಟಿವಾ ಗಾಡಿಯಲ್ಲಿ ಒಬ್ಬರೇ ಹೆಬ್ಬಾಳ ಕ್ಷೇತ್ರದ ಮನೆ ಮನೆಗೆ ತೆರಳಿ ಮತಕ್ಕಾಗಿ ಮನವಿ ಮಾಡ್ತಾರಂತೆ. 'ನೋ ಕಾಸ್..ನೋ ವೋಟ್' ಅಂತ ಪ್ರಚಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಚಿಹ್ನೆ ಯಾವುದು?
ಅಂದಹಾಗೆ, ಪಕ್ಷೇತರ ಅಭ್ಯರ್ಥಿಯಾಗಿರುವ ಬುಕಾರಿಯಾ ತಮ್ಮ ಚಿಹ್ನೆಯಾಗಿ ಚಾಯ್ ಕಪ್ ಮತ್ತು ಸಾಸರ್ ಆಯ್ಕೆ ಮಾಡಲು ಚುನಾವಣಾ ಆಯೋಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲಿಂದ ಪರ್ಮಿಷನ್ ಸಿಕ್ಕರೆ ಕಪ್ ಮತ್ತು ಸಾಸರ್ ಹಿಡಿದು ಬುಕಾರಿಯಾ ಪ್ರಚಾರ ಆರಂಭಿಸುತ್ತಾರೆ.
ಹೆಬ್ಬಾಳ ಕಣದಲ್ಲಿ ಯಾರ್ಯಾರು?
ಹೆಬ್ಬಾಳ ಕ್ಷೇತ್ರದ ಒಟ್ಟು ಮತದಾರರು - 226,697. ಅದರಲ್ಲಿ 60 ಸಾವಿರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರೇ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್, ಜೆಡಿಎಸ್ ನಿಂದ ಇಸ್ಮಾಯಿಲ್ ಷರೀಫ್ ಮತ್ತು ಬಿಜೆಪಿ ಪಕ್ಷದಿಂದ ನಾರಾಯಣ ಸ್ವಾಮಿ ಕಣದಲ್ಲಿದ್ದಾರೆ. ಮೂವರ ಹಣಬಲ ತೋಳ್ಬಲದ ನಡುವೆ ಸಹೃದಯತೆ ಮೆರೆಯಲು ಆಸಿಫ್ ಬುಕಾರಿಯಾ ಮುಂದಾಗಿದ್ದಾರೆ.
ಆಲೋಚಿಸಿ ವೋಟ್ ಮಾಡಿ....
ಸಮಾಜದ ಉನ್ನತಿ ಉದ್ದೇಶವಿಟ್ಟುಕೊಂಡು ಚುನಾವಣಾ ಕಣಕ್ಕಿಳಿದಿರೋ ಆಸಿಫ್ ಬುಕಾರಿಯಾ ಆಸೆ ಈಡೇರಿಸುವುದು ಬಿಡುವುದು ಹೆಬ್ಬಾಳ ಕ್ಷೇತ್ರ ಜನರ ಕೈಯಲ್ಲಿದೆ. ಹಕ್ಕು ಚಲಾಯಿಸಿ ಜವಾಬ್ದಾರಿ ಉಳಿಸಿ, ಪ್ರಜ್ಞಾವಂತಿಕೆ ಮೆರೆಯಿರಿ.