ಬೆಂಗಳೂರಿನ ಮಾಲ್, ಆಭರಣ ಮಳಿಗೆಗಳ ಮೇಲೆ ಐಟಿ ದಾಳಿ
ಬೆಂಗಳೂರು, ಡಿಸೆಂಬರ್ 24: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಆಭರಣ ಮಳಿಗೆಗಳು ಮತ್ತು ಮಾಲ್ ಗಳ ಶುಕ್ರವಾರ ದಾಳಿ ನಡೆಸಿ, ₹47.74 ಕೋಟಿ ಮೊತ್ತದ ಅಕ್ರಮ ವಹಿವಾಟು ಪತ್ತೆ ಮಾಡಿದ್ದಾರೆ.
ಮಾಲ್ ಗಳ ಕಾರ್ಪೂರೇಟ್ ಕಚೇರಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆದಿದೆ. ಎಂಟು ಅಧಿಕಾರಿಗಳಿದ್ದ ತಂಡವು ರಿಚ್ ಮಂಡ್ ರಸ್ತೆಯಲ್ಲಿರುವ ಮಾಲ್ ಕಾರ್ಪೋರೇಟ್ ಕಚೇರಿಯಲ್ಲಿ 7 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿತು.
ನೋಟು ನಿಷೇಧದ ನಿರ್ಧಾರ ಘೋಷಿಸಿದ ನಂತರ ಚಿನ್ನದ ಮಾರಾಟದಲ್ಲಿ ವಿಪರೀತ ಹೆಚ್ಚಳವಾಗಿತ್ತು. ಈ ಬಗ್ಗೆ ಗುಮಾನಿಯಿಂದ ಆಭರಣ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಆಭರಣ ಮಾರಾಟದ ದಾಖಲೆ ಮತ್ತು ನವೆಂಬರ್ 8ರ ನಂತರ ಚಿನ್ನದ ಬೆಲೆಯನ್ನು ಪರಿಶೀಲಿಸಲಾಯಿತು.[ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಕಡೆ ತೆರಿಗೆ ಅಧಿಕಾರಿಗಳ ದಾಳಿ]
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನದ ಗಟ್ಟಿಗಳು ಈ ಮಳಿಗೆಗಳಲ್ಲಿ ಮಾರಾಟ ಆಗಿವೆ. ಆರ್ಟಿಜಿಎಸ್ ಮೂಲಕ ವರ್ಗಾವಣೆಯಾದ ಹಣಕ್ಕಿಂತ ಹೆಚ್ಚಿನ ಮೊತ್ತದ ಹಣ ಈ ಆಭರಣ ವರ್ತಕರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ.[ನ.9ರಿಂದ ಡಿ.19ರವರೆಗೆ ಸಿಕ್ಕಿದ್ದು 3,300 ಕೋಟಿ ಕಪ್ಪು ಹಣ]
ಅಲ್ಲದೆ, ಈ ಎಲ್ಲ ನಗದು ವಹಿವಾಟುಗಳು ₹ 2 ಲಕ್ಷಕ್ಕಿಂತ ಕಡಿಮೆ ಮೊತ್ತದ್ದು. ಈ ರೀತಿ ವಹಿವಾಟು ನಡೆಸಿ ಚಿನ್ನ ಖರೀದಿಸಿದ ಗ್ರಾಹಕರ ಮಾಹಿತಿ ಆಭರಣ ಮಳಿಗೆಗಳಲ್ಲಿ ಇಲ್ಲ ಎಂಬ ಸಂಗತಿಯೂ ದಾಳಿ ವೇಳೆ ಗೊತ್ತಾಗಿದೆ.