ಯಲಹಂಕದ ನಾಡಕಚೇರಿಗೆ ನುಗ್ಗಿ 2 ಲಕ್ಷ ರೂ.ಹೊತ್ತೊಯ್ದ ಕಳ್ಳರು
ಬೆಂಗಳೂರು, ಜುಲೈ.06: ಯಲಹಂಕದ ನಾಡ ಕಚೇರಿ ಸೇರಿದಂತೆ ಹಲವು ಕಚೇರಿಗಳ ಬೀಗ ಮುರಿದು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಪ್ರಕರಣ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ಹಾಟ್ ಸ್ಪಾಟ್ ನಲ್ಲಿರುವ ಮಿನಿವಿಧಾನಸೌದ ಮುಂಭಾಗದ ನಾಡಕಚೇರಿಯಲ್ಲಿ ನಿನ್ನೆ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ನಾಡ ಕಚೇರಿ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಆಫೀಸ್ ಗಳ ಬೀಗ ಮುರಿದಿರುವ ಕಳ್ಳರು, ಉಪ ತಹಶಿಲ್ದಾರರ ಕಚೇರಿಯನ್ನು ಸಂಪೂರ್ಣವಾಗಿ ದ್ವಂಸ ಮಾಡಿದ್ದಾರೆ.
ರಾತ್ರೋ ರಾತ್ರಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು
ಇಷ್ಟೇ ಅಲ್ಲ, ಕಚೇರಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಗದು ಸೇರಿದಂತೆ ಕೆಲ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಳ್ಳರು ತಮಗೆ ಬೇಕಾದ ಕೆಲವು ದಾಖಲೆಗಳಿಗಾಗಿ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಮತ್ತೊಂದು ಅಚ್ಚರಿಯ ವಿಷಯವೆಂದರೆ ಮಿನಿವಿಧಾನಸೌಧ, ಕೇಂದ್ರ ಬಸ್ ನಿಲ್ದಾಣ ಮತ್ತು ಪೊಲೀಸ್ ಠಾಣೆ ಸೇರಿದಂತೆ ರೈಲ್ವೇ ನಿಲ್ದಾಣದ ಮಧ್ಯಭಾಗದಲ್ಲಿ ಇರುವ ಕಚೇರಿಯಲ್ಲಿಯೇ ಖತರ್ನಾಕ್ ಕಳ್ಳರು ಕಳ್ಳತನ ಮಾಡಿರುವುದು ಸಾರ್ವಜನಿಕರಲ್ಲಿ ಅಸುರಕ್ಷತೆಯ ಭಯ ಹುಟ್ಟಿಸಿದೆ.
ಪ್ರಕರಣವನ್ನು ಯಲಹಂಕ ಓಲ್ಡ್ ಟೌನ್ ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.