'ಪ್ರಜಾಪ್ರಭುತ್ವ ಬಲಗೊಳಿಸಲು ನ್ಯಾಯಾಂಗ ಶಕ್ತಿಯುತ ಸಾಧನ'
ಬೆಂಗಳೂರು, ಆಗಸ್ಟ್ 28 : 'ನ್ಯಾಯಾಂಗ ವ್ಯವಸ್ಥೆ ಅದರಲ್ಲೂ ಯುವ ವಕೀಲರು ಹಕ್ಕುಗಳ ಮತ್ತು ಜನರ ಕಲ್ಯಾಣಕ್ಕಾಗಿ ಹೋರಾಟ ನಡೆಸಬೇಕು. ರಾಷ್ಟ್ರೀಯ ಕಾನೂನು ಶಾಲೆಗಳಂತಹ ಸಂಸ್ಥೆಗಳು ನಾಗರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಬೇಕು' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದರು.
ಭಾನುವಾರ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಿತು. 571 ವಿದ್ಯಾರ್ಥಿಗಳಿಗೆ ಪದವಿ ವಿತರಣೆ ಮಾಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
'ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯದಾನ ಮುಂತಾದವುಗಳನ್ನು ಅರ್ಥ ಮಾಡಿಕೊಂಡು ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ. ಅನ್ಯಾಯ, ಅಸಮಾನತೆ ವಿರುದ್ಧ ಹೋರಾಡುವುದು ವಕೀಲರ ಕರ್ತವ್ಯ' ಎಂದು ರಾಷ್ಟ್ರಪತಿಗಳು ಹೇಳಿದರು.
'ನಮ್ಮ ದೇಶದಲ್ಲಿ ವಕೀಲರಿಗೆ ಒಂದು ವಿಶೇಷ ಸ್ಥಾನಮಾನ ನೀಡಲಾಗಿದೆ. ಪ್ರಜಾಪ್ರಭುತ್ವವನ್ನು ಬಲಗೊಳಿಸಲು ನ್ಯಾಯಾಂಗ ಶಕ್ತಿಯುತವಾದ ಸಾಧನ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂಬ ಶಕ್ತಿಯುತ ಸಾಧನದ ಮೂಲಕ ಸಾಮಾನ್ಯರು ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಅವಕಾಶವೂ ಇದೆ' ಎಂದು ಪ್ರಣಬ್ ಮುಖರ್ಜಿ ಹೇಳಿದರು...
571 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
183 ವಿದ್ಯಾರ್ಥಿಗಳಿಗೆ ವ್ಯವಹಾರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, 69 ಮಂದಿಗೆ ಬಿಎ ಆನರ್ಸ್ ಪದವಿ, 55 ಮಂದಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, 48 ಮಂದಿಗೆ ಎಲ್ಎಲ್ಎಂ, 45 ಮಂದಿಗೆ ಸೈಬರ್ ಕಾನೂನು ಮತ್ತು ಫೊರೆನ್ಸಿಕ್ ಸ್ನಾತಕೋತ್ತರ ಡಿಪ್ಲೊಮಾ, 26 ಮಂದಿಗೆ ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಸೇರಿದಂತೆ 571 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು
'ಸಂವಿಧಾನದಡಿಯಲ್ಲಿ ರಚನೆಯಾಗಿರುವ ರಾಜಕೀಯ ವ್ಯವಸ್ಥೆ, ಆಡಳಿತ ಪ್ರಕ್ರಿಯೆ ಇವುಗಳನ್ನೂ ವಿಶ್ಲೇಷಣೆ ಮಾಡಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ದೇಶವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ' ಎಂದು ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರಪತಿಗಳು ಕರೆ ನೀಡಿದರು.
ದೇಶವನ್ನು ಮುನ್ನೆಡೆಸುತ್ತಾರೆ
'ಘಟಿಕೋತ್ಸವ ಸಮಾರಂಭದಲ್ಲಿ ಯುವತಿಯರು ಹೆಚ್ಚಿನ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದಿನ ಕಾಲಮಾನದಲ್ಲಿ ಯುವತಿಯರು ಎಲ್ಲ ರಂಗಗಳಲ್ಲಿಯೂ ಮುಂದೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯುವತಿಯರು ದೇಶವನ್ನು ಮುನ್ನಡೆಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ' ಎಂಬ ಆಶಯವನ್ನು ರಾಷ್ಟ್ರಪತಿಗಳು ವ್ಯಕ್ತಪಡಿಸಿದರು.
11 ಪದಕ ಪಡೆದ ಎಲ್.ಗೋಪಿಕಾಮೂರ್ತಿ
ಘಟಿಕೋತ್ಸವದಲ್ಲಿ 69 ಮಂದಿಗೆ ಎಲ್ಎಲ್ಬಿ ಪದವಿ ಪ್ರದಾನ ಮಾಡಿದ್ದು, ಒಟ್ಟು 46 ಮಂದಿಗೆ ಸ್ನಾತಕೋತ್ತರ ಹಾಗೂ ಕಾನೂನಿನಲ್ಲಿ ಪದವಿ ಪ್ರದಾನ ಮಾಡಲಾಯಿತು. ಕೇರಳದ ಮೂಲದ ಎಲ್.ಗೋಪಿಕಾಮೂರ್ತಿ ಅವರು ಬಿಎ ಆನರ್ಸ್ ಕಾನೂನು ಪದವಿಯಲ್ಲಿ 11 ಚಿನ್ನದ ಪದಕಗಳನ್ನು ಪಡೆದರು.
ಚಿನ್ನ ಭೇಟೆಯಾಡಿದರು
ದೀಕ್ಷಿತಾ, ಸೋನಾಕ್ಷಿ ಸಕ್ಸೇನಾ ಅವರು ತಲಾ 3 ಚಿನ್ನದ ಪದಕ, ಅಶ್ವಿನಿ ವಡಿಯಾಲಿಂಗಂ 5 ಚಿನ್ನದ ಪದಕ, ರಕ್ತಿಕಾಸಿನ್ಹಾ, ರಘುವೀರ್ ಸಿಂಗ್ ಮೀನಾ, ಕೌಸ್ತವ್ ಶಾ ಅವರು ತಲಾ 2 ಚಿನ್ನದ ಪದಕಗಳನ್ನು ಪಡೆದರು.
3 ಚಿನ್ನದ ಪದಕ
ಒಂದು ವರ್ಷದ ಎಲ್ಎಲ್ಎಂ ಪದವಿಯಲ್ಲಿ ಅಕೃತಿ ಗೌತಮ್ 3 ಚಿನ್ನದ ಪದಕ ಪಡೆದರು. ಸಾಕ್ಷಾತ್ಬತ್ಸಾಲ್ ತಲಾ 2 ಚಿನ್ನದ ಪದಕ ಗಳಿಸಿದರು. ದೇವಾಸಿಯಾಯಾದವ್, ಆರತಿಶರ್ಮ, ಅಶಾನ್ಸಿಂಗ್ ಅವರು ತಲಾ 1 ಚಿನ್ನದ ಪದಕ ಪಡೆದರು.