ಡಿ.ಕೆ.ರವಿ ಸಾವು ಆತ್ಮಹತ್ಯೆ: ಅಂತಿಮ ಶರಾ ಬರೆದ ಸಿಬಿಐ
ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಎಲ್ಲ ಅನುಮಾನಗಳಿಗೆ ಸಿಬಿಐ ತೆರೆ ಎಳೆದಿದ್ದು, ಡಿ.ಕೆ.ರವಿ ಅವರ ಸಾವು ಆತ್ಮಹತ್ಯೆ ಎಂದು ಅಂತಿಮ ಶರಾ ಬರೆದಿದೆ.
ಬೆಂಗಳೂರು, ನವೆಂಬರ್, 24: ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಉಹಾಪೋಹಗಳಿಗೆ ಸಿಬಿಐ ತೆರೆ ಎಳೆದಿದ್ದು, ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಅಂತಿಮ ವರದಿಯನ್ನು ಸಿದ್ಧಪಡಿಸಿದೆ.
ವೈಯಕ್ತಿಕ ಕಾರಣಗಳಿಂದಾಗಿಯೇ ಡಿ.ಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಸಷ್ಪಪಡಿಸಿದೆ. ಬರೋಬ್ಬರಿ 20 ತಿಂಗಳ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಕ್ರವರ್ತಿ ನೇತೃತ್ವದಲ್ಲಿ ಸಿಬಿಐ ತನ್ನ ವರದಿಯನ್ನು ದಕ್ಷಿಣ ಅಸಿಸ್ಟೆಂಟ್ ಕಮಿಷನರ್ ಗೆ ವರದಿ ಸಲ್ಲಿಸಲಿದೆ. [ಡಿಕೆ ರವಿಯದ್ದು ಆತ್ಮಹತ್ಯೆ : ಒಪ್ಪಲು ತಯಾರಿಲ್ಲ ತಾಯಿ ಗೌರಮ್ಮ]
ಡಿಕೆ ರವಿ ಸಾವಿನ ಕುರಿತು 90 ಪುಟಗಳ ವರದಿಯನ್ನು ಸಿಬಿಐ ಸಿದ್ಧಪಡಿಸಿದ್ದು, ಕಮಿಷನರ್ ಗೆ ಸಲ್ಲಿಸುವ ಮುನ್ನವೇ ಮಾಧ್ಯಮಗಳು ಬಹಿರಂಗ ಪಡಿಸಿವೆ.
2015 ಮಾರ್ಚ್ 16ರಂದು ಬೆಂಗಳೂರಿನ ಮಡಿವಾಳದಲ್ಲಿರುವ ಅವರ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಡಿ.ಕೆ. ರವಿ ಅವರ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಭಾರತೀಯ ಜನತಾ ಪಕ್ಷ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಮತ್ತು ಹಲವು ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು.
ಪ್ರತಿಭಟನೆಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಕೊನೆಗೂ ಸಿಒಡಿ ತನಿಖೆಗೆ ಒಪ್ಪಿಸಿತ್ತು. ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ವಹಿಸಲೇಬೆಕೆಂದು ಪಟ್ಟು ಹಿಡಿದ ನಂತರ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು.