ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಗುರಿ: ಶ್ರೀನಿವಾಸ ಪ್ರಸಾದ್
ಬೆಂಗಳೂರು, ಅಕ್ಟೋಬರ್, 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಮುಂದಿನ ಪರಮ ಗುರಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಶಪಥ ಮಾಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಮರೆಯಲಾಗದ ನೋವು ನೀಡಿದ್ದಾರೆ. ಈ ನೋವಿಗೆ ಪ್ರತೀಕಾರವಾಗಿ ಮುಂಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸದೇ ಬಿಡುವುದಿಲ್ಲ" ಎಂದು ಶಪಥ ಮಾಡಿದರು.
'ನಾನು ಸಿದ್ದರಾಮಯ್ಯ ಅವರಿಗಿಂತ ಅನುಭವಿ ರಾಜಕಾರಣಿ, 45 ವರ್ಷ ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೇಂದ್ರದಲ್ಲೂ ಸಚಿವನಾಗಿ ಕೆಲಸ ಮಾಡಿದ್ದೇನೆ' ಎಂದು ಹೇಳಿದರು.[ಶಾಸಕ ಸ್ಥಾನಕ್ಕೆ ವಿ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ]
ಚುನಾವಣೆಯ ಪ್ರತಿತಂತ್ರಗಳು ನನಗೂ ಗೊತ್ತಿದೆ. ತಮ್ಮ ಮುಂದಾಳ್ವತ್ವದಲ್ಲೇ ಪಕ್ಷ ಚುನಾವಣೆ ಎದುರಿಸುವುದಾಗಿ ಸಿದ್ದರಾಮ್ಯಯ ಅವರು ತಿಳಿಸಿದ್ದಾರೆ. ಅವರ ಪಕ್ಷ ಹೇಗೆ ಅಧಿಕಾರಕ್ಕೆ ಬರುತ್ತದೆ ಎಂದು ನಾನು ಸಹ ನೋಡುತ್ತೇನೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನ ಎಲ್ಲಾ ತಂತ್ರಗಳು ನನಗೆ ಗೊತ್ತು. ನನ್ನನ್ನು ಘಾಸಿಗೊಳಿಸಿದವರಿಗೆ ಪೆಟ್ಟು ನೀಡದೇ ಸುಮ್ಮನೆ ಬಿಡಲು ಸಾಧ್ಯವಿಲ್ಲ, ಖಂಡಿತ ಮುಯ್ಯಿ ತೀರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಕಪಿ ಮುಷ್ಠಿಯಲ್ಲಿ ಕಾಂಗ್ರೆಸ್:
ರಾಜ್ಯ ಕಾಂಗ್ರೆಸ್ 6 ಮಂದಿಯ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಅವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ರಂಥವರ ಕಪಿಮುಷ್ಠಿಗೆ ಸಿಲುಕಿ ಕಾಂಗ್ರೆಸ್ ಒದ್ದಾಡುತ್ತಿದೆ. ಹೈಕಮಾಂಡ್ ಅಸಹಾಯಕ ಸ್ಥಿತಿಯಲ್ಲಿದೆ ಎಂದು ಎಂದು ಅವರು ವಾಕ್ ಪ್ರಹಾರ ನಡೆಸಿದರು.
ಪರಿಣಾಮಕಾರಿ ಸಚಿವ ಸಂಪುಟ ರಚನೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಪ್ರಥಮ ಬಾರಿ ಶಾಸಕಾರಾಗಿ ಆಯ್ಕೆಯಾಗಿರುವ ಪ್ರಿಯಾಂಕ್ ಖರ್ಗೆರಂಥ ಅನುನಭವಿಗಳನ್ನು ಸಂಪುಟಕ್ಕೆ ಯಾವ ಮಾನದಂಡದಲ್ಲಿ ಸೇರ್ಪಡಿಸಿಕೊಂಡರು ಎಂದು ಪ್ರಶ್ನಿಸಿದರು.
ನನ್ನನ್ನು ಸಚಿವ ಸಂಪುಟದಿಂದ ಏಕೆ ಕೈಬಿಡಲಾಯಿತು ಎಂದು ಇದುವರೆಗೆ ಒಂದೇ ಒಂದು ಕಾರಣವನ್ನು ಸಹ ಅವರು ತಿಳಿಸಿಲ್ಲ. ಪ್ರಮೋದ್ ಮಧ್ವರಾಜ್, ಪ್ರಿಯಾಂಕ್ ಖರ್ಗೆ ಅವರಿಂದ ಪೇಮೆಂಟ್ ಪಡೆದು ಸೀಟ್ ನೀಡಿದ್ದಾರೆ ಎಂದು ಆರೋಪಿಸಿದರು.
ಸೋಲುವ ಭೀತಿಯಲ್ಲಿದ್ದ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ವಿಧನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವೆಲ್ಲ ಸೇರಿಕೊಂಡು ಗೆಲವು ತಂದುಕೊಟ್ಟೆವು. ಆದರೆ ಅವರು ಉಂಡ ಮನೆಗೆ ಕನ್ನ ಹಾಕಬೇಕೆಂಬ ಸಂಸ್ಕೃತಿಯನ್ನು ಕೆಲವೇ ದಿನಗಳಲ್ಲಿ ತೋರಿಸಿಕೊಟ್ಟರು ಎಂದು ಹೇಳಿದರು.
ಪಕ್ಷ ನಿಮಗೆ ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಿತು. ಆದರೂ ನೀವು ಪಕ್ಷದಲ್ಲಿ ಉನ್ನತ ಸ್ಥಾನಮಾನ ದೊರಯಲಿಲ್ಲ ಎಂದು ವಿಶ್ರಾಂತಿ ಪಡೆಯಲು ವಿದೇಶಕ್ಕೆ ಹಾರಿದ್ದನ್ನು ಏಕೆ ಮರೆತಿರಿ? ನೀವು ಪಕ್ಷಕ್ಕೆ ಸೇರ್ಪಡೆಯಾದ ನಂತರ 2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗಳಿಸಿದ್ದು ಕೇವಲ 80 ಸ್ಥಾನವಷ್ಟೇ ಎಂದು ಹೇಳಿದರು.
ಖರ್ಗೆ ಲೋಕಸಭೆ ಪ್ರವೇಶಿಸಿದ ನಂತರ ನಿಮಗೆ ವಿಪಕ್ಷ ನಾಯಕನ ಪಟ್ಟ ನೀಡುತ್ತೇವೆ ಎಂದು ಹೇಳಿದ ಮೇಲೆ ಸೇರ್ಪಡೆಯಾದ ನೀವು, ಹುದ್ದೆ ಇದ್ದರೆ ಪಕ್ಷ, ಇಲ್ಲದಿದ್ದರೆ ವಿದೇಶ ಎಂಬ ಧೋರಣೆ ಪ್ರಕಟಿಸಿದ್ದೀರಿ. ಇದು ನಿಮ್ಮ ಬದ್ಧತೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
'ನಾನು ಸಚಿವನಾಗಿ ಅಸಮರ್ಥ ಎಂದು ನಿರ್ಧರಿಸಿರುವ ನೀವು ಮೂರು ವರ್ಷ ನನ್ನನ್ನು ಸಚಿವ ಹುದ್ದೆಯಲ್ಲಿ ಏತಕ್ಕಾಗಿ ಇರಿಸಿಕೊಂಡಿದ್ದಿರಿ' ಎಂದು ಕುಟುಕಿದರು.
'ಮಂತ್ರಿ ಪರಿಷತ್ ನಲ್ಲಿ ನಿಮ್ಮ ಹೊಗಳುಭಟ್ಟರಾಗಿ ಇರುವವರನ್ನು ಮಾತ್ರ ನೀವು ಇಟ್ಟುಕೊಂಡಿದ್ದೀರಿ. ನಾನು ಆ ಕೆಲಸ ಮಾಡಲಿಲ್ಲ ಆದ್ದರಿಂದಲೇ ನನ್ನ ಕೈಬಿಟ್ಟೀದ್ದೀರಿ' ಎಂದು ಹೇಳಿದರು.
'ಗೌರವಯುತವಾಗಿ ರಾಜಕೀಯ ನಿವೃತ್ತಿ ಬಯಸಿದ್ದ ನನಗೆ ಮರೆಯಲಾಗದ ಪೆಟ್ಟು ನೀಡಿದ್ದೀರಿ. ಇದು ನಿಮಗೆ ತರವೇ ಎಂದು ವಾಗ್ದಾಳಿ ನಡೆಸಿದರು.
ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.