ಅದೆಷ್ಟೇ ಹಣ ಕೊಟ್ಟರೂ ಭಾರತ ಬಿಟ್ಟು ಹೋಗಲ್ಲ: ಪ್ರೊ ಸಿಎನ್ ಆರ್ ರಾವ್
ಬೆಂಗಳೂರು, ಆಗಸ್ಟ್ 5: "ಅದೆಷ್ಟೇ ಹಣ ಕೊಟ್ಟರೂ ನಾನು ಭಾರತ ಬಿಟ್ಟು ಹೋಗಲ್ಲ. ನಾನು ಕರ್ನಾಟಕದವನು, ಕನ್ನಡಿಗ ಎಂಬ ಹೆಮ್ಮೆ ಇದೆ" ಎಂದು ವಿಜ್ಞಾನಿ, ಭಾರತ ರತ್ನ ಪ್ರೊ ಸಿಎನ್ ಆರ್ ರಾವ್ (ಚಿಂತಾಮಣಿ ನಾಗೇಶ ರಾಮಚಂದ್ರ ರಾವ್) ಹೇಳುತ್ತಿದ್ದಂತೆ ಭಾರೀ ಚಪ್ಪಾಳೆ ಕೇಳಿಬಂತು.
ಬೆಂಗಳೂರು ಪ್ರೆಸ್ ಕ್ಲಬ್ ಐವತ್ತು ವರ್ಷ ಪೂರೈಸಿದ ಸಂಭ್ರಮದ ಸ್ಮರಣೆಯಲ್ಲಿ ಪ್ರೊ ಸಿಎನ್ ಆರ್ ರಾವ್, ಡಾ ಕಸ್ತೂರಿ ರಂಗನ್ ಹಾಗೂ ಈ ಬಾರಿ ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಅತ್ಯುತ್ತಮ ಅಂಕ ಗಳಿಸಿದ ಕೋಲಾರದ ನಂದಿನಿ ಅವರಿಗೆ ಶನಿವಾರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಎನ್ಆರ್ ರಾವ್ ಮುಡಿಗೆ ಜಪಾನ್ ಅತ್ಯುನ್ನತ ನಾಗರೀಕ ಗೌರವ
ಇದೇ ಸಂದರ್ಭದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಅಭಿನಂದನೆ ಹಾಗೂ ಸಿಎನ್ ಆರ್ ರಾವ್ ಅವರೊಂದಿಗೆ ಸಂವಾದ ಕೂಡ ಆಯೋಜಿಸಲಾಗಿತ್ತು. ಇಡೀ ಜಗತ್ತನ್ನು ತಮ್ಮ ಮನೆಗೆ ಹುಡುಕಿಕೊಂಡು ಬರುವಂತೆ ಮಾಡಿದ ದೇಶದ ಹೆಮ್ಮೆಯ ರತ್ನ ರಾವ್ ಅವರಲ್ಲದೆ ಬೇರೆ ಯಾರಾದರೂ ಇಂದು ಅವರು ಮಾತನಾಡಿದ ವಿಚಾರಗಳನ್ನು ಮಾತನಾಡಿದ್ದರೆ ಆ ಪರಿಯ ಪರಿಣಾಮ ಬೀರುತ್ತಿತ್ತೇ ಎಂಬುದು ಸ್ವಲ್ಪ ಮಟ್ಟಿಗೆ ಅನುಮಾನ.
ಅವರು ಹೇಳಿದ ವಿಚಾರಗಳನ್ನು ಬಿಡಿಬಿಡಿಯಾಗಿ ಮುಂದೆ ಓದುತ್ತಾ ಹೋಗಿ.
ಸಿವಿ ರಾಮನ್ ಸ್ಫೂರ್ತಿ
ನಾನು ಓದಿದ್ದು ಬಸವನಗುಡಿಯ ಶಾಲೆಯಲ್ಲಿ. ಡಿಗ್ರಿ ಮುಗಿಸಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ಎಂಎಸ್ಸಿ ಬನಾರಸ್ ನಲ್ಲಿ. ಹದಿನೇಳು ವರ್ಷಕ್ಕೆ ನಾನು ಡಿಗ್ರಿ ಮುಗಿಸಿದ್ದೆ. ನನಗೆ ಸ್ಫೂರ್ತಿ ಸಿಕ್ಕಿದ್ದು ಹೈಸ್ಕೂಲಿನಲ್ಲಿ ಸಿವಿ ರಾಮನ್ ಅವರನ್ನು ನೋಡಿದಾಗ. ಅವರನ್ನು ಮೊದಲನೇ ಸಲ ನೋಡಿದಾಗಲೇ ಅವರಂತೆ ಆಗಬೇಕು ಅಂದುಕೊಂಡೆ.
ಹೃದಯ, ಆತ್ಮ ಅರ್ಪಿಸಿ
ಎಲ್ಲರೂ ಎಂಜಿನಿಯರ್, ಡಾಕ್ಟರ್, ವಿಜ್ಞಾನಿಯೇ ಏಕೆ ಆಗಬೇಕು? ನಿಮಗೇನು ಆಗಬೇಕು ಅನ್ನಿಸುತ್ತದೋ ಅದೇ ಆಗಿ. ಆದರೆ ಗುರಿಯ ಬಗ್ಗೆ ಮಾತ್ರ ಗಮನವಿರಲಿ. ಅದನ್ನು ಯಾವ ಕಾರಣಕ್ಕೂ ಕೈ ಚೆಲ್ಲಬೇಡಿ. ಗುರಿಯೆಡೆಗೆ ನಿಮ್ಮ ಹೃದಯ, ಆತ್ಮ ಎಲ್ಲವನ್ನು ಅರ್ಪಿಸಿಬಿಡಿ. ಸ್ಪರ್ಧೆ ಇದೆ ಎಂಬುದು ನಿಜ. ಅದೇ ಸಂದರ್ಭದಲ್ಲಿ ಅವಕಾಶವೂ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಭಾರತೀಯರು ತುಂಬ ಬೇಗ ತಮ್ಮ ಗುರಿಯನ್ನು ಕೈ ಬಿಡುತ್ತಾರೆ.
ಭರವಸೆಯೇ ಜೀವನ
ನಾನು ಇಪ್ಪತ್ತೊಂಬತ್ತನೆ ವಯಸ್ಸಿನಲ್ಲಿ ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್ ಆದೆ. ಮೊದಲು ನನ್ನ ಪ್ರತಿಭೆಯನ್ನು ಗುರುತಿಸಿದ್ದು ನನ್ನ ದೇಶ. ಸಿವಿ ರಾಮನ್ ಅವರು ನನಗೆ ಅಲ್ಲಿ ಕೆಲಸ ಆರಂಭಿಸಲು ಹೇಳಿದರು. ನೆನಪಡಿ, ಭರವಸೆಯೇ ಜೀವನ. ಅದು ಇಲ್ಲದ ದಿನ ಜೀವನವೇ ನಿಂತು ಹೋದಂತೆ. ಅದಕ್ಕೆ ಅವಕಾಶ ಕೊಡಬೇಡಿ.
ಭಾರತೀಯ ವಿಜ್ಞಾನಿಗಳ ಶ್ರಮ ಕಾಣ್ತಿಲ್ಲ
ಭಾರತೀಯ ವಿಜ್ಞಾನಿಗಳು ಬಹಳ ಶ್ರಮ ಹಾಕಿ ಕೆಲಸ ಮಾಡುವುದು ನನಗೆ ಕಾಣ್ತಿಲ್ಲ. ಅದೇ ಚೀನಾದವರು ಯಾಕೆ ಅಷ್ಟು ಮುಂದಿದ್ದಾರೆ ಅಂದರೆ ಅವರಿಗೆ ತಮ್ಮ ದೇಶದ ಬಗ್ಗೆ ಹೆಮ್ಮೆ ಇದೆ. ಜತೆಗೆ ಬಹಳ ಶ್ರಮ ವಹಿಸುತ್ತಾರೆ. ಅಂಕಗಳ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುವುದನ್ನು ಬಿಡಿ. ವಿಜ್ಞಾನ ಅಂದರೆ ಎಕ್ಸೈಟ್ ಮೆಂಟ್. ಆ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ. ದೇಶದ ಭವಿಷ್ಯದ ಜತೆಗೆ ನಿಮ್ಮ ಭವಿಷ್ಯವೂ ಬೆಳೆಯಲಿ ಅಂದುಕೊಳ್ಳಿ.
ದುಡ್ಡಿನ ಹಿಂದೆ ಓಡುತ್ತಿರುವ ಬೆಂಗಳೂರಿನ ಜನ
ನನ್ನ ಬಳಿ ಸಂಶೋಧನೆಗಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನರು ಬರ್ತಾರೆ. ಆದರೆ ಬೆಂಗಳೂರಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಾರೊಬ್ಬರೂ ಬಂದಿಲ್ಲ. ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಓಡುತ್ತಾ ಮೂವತ್ತು ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಾನು ನೋಡಿದ ಬೆಂಗಳೂರು ಬೇರೆ. ಆಗ ಮಾಸ್ತಿ, ಕೈಲಾಸಂ, ಗುಂಡಪ್ಪ ಅವರನ್ನೆಲ್ಲ ನೋಡುತ್ತಿದ್ದೆವು. ಈಗ ಬೆಂಗಳೂರಿನಲ್ಲಿ ಅಂಥ ವಾತಾವರಣ ಇಲ್ಲ.
ವಿಜ್ಞಾನದಲ್ಲಿ ಇರುವಷ್ಟು ಖುಷಿ ಹಣದಲ್ಲಿಲ್ಲ
ನಾನು ಅತ್ಯಂತ ಸಂತುಷ್ಟ ಮನುಷ್ಯ. ನನ್ನ ಜೀವನದಲ್ಲಿ ವಿಜ್ಞಾನದ ಸಂಶೋಧನೆ ತುಂಬ ಖುಷಿ ಕೊಟ್ಟಿದೆ. ನನಗೆ ಯಾವುದರ ಬಗ್ಗೆಯೂ ದೂರು-ಆಕ್ಷೇಪಗಳಿಲ್ಲ. ವಿಜ್ಞಾನ ಸಂಶೋಧನೆ ಕೊಡುವಂಥ ಖುಷಿಯನ್ನು ಯಾವ ಹಣವೂ ನೀಡುವುದಕ್ಕೆ ಸಾಧ್ಯವಿಲ್ಲ.
ಉಪಾಧ್ಯಾಯರಿಲ್ಲದ ವಿದ್ಯೆ ಕಷ್ಟ
ನನ್ನ ಹತ್ತಿರ ಮೊಬೈಲೇ ಇಲ್ಲ. ನಾನು ತಂತ್ರಜ್ಞಾನ ಬೇಡ ಅನ್ನೋದಿಲ್ಲ. ಆದರೆ ಉಪಾಧ್ಯಾಯರಿಲ್ಲದ ವಿದ್ಯೆ ಕಷ್ಟ. ನಮ್ಮ ಬಳಿ ತುಂಬ ಆಧುನಿಕವಾದ ಪ್ರಯೋಗ ಶಾಲೆ ಇದೆ. ಆದರೆ ಅದು ವಿದ್ಯೆ ಆಗುವುದಿಲ್ಲ. ನಾವು ಕಲಿತದ್ದನ್ನು ವಿಸ್ತರಿಸುವುದಕ್ಕೂ ಸಹಾಯವಾಗುತ್ತದೆ.
ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಹಣ ಮೀಸಲಿಡಲಿ
ಕೆಲವು ವಿಶ್ವವಿದ್ಯಾಲಯಗಳ ಲ್ಯಾಬೋರೇಟರಿ ನೋಡಿದರೆ ನಾಚಿಕೆ ಆಗುತ್ತದೆ. ನನ್ನ ಮನೆಯಲ್ಲಿರುವ ಪ್ರಯೋಗಾಲಯ ಎಷ್ಟೋ ಪಟ್ಟು ಅತ್ಯುತ್ತಮವಾಗಿದೆ. ಅಂಥವುಗಳ ಬಗ್ಗೆ ಗಮನಹರಿಸಬೇಕು. ಸರಕಾರಗಳು ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಹಣವನ್ನು ಮೀಸಲಿಡಬೇಕು.
ಶಿಕ್ಷಣಕ್ಕಿಂತ ಪರೀಕ್ಷಾ ವ್ಯವಸ್ಥೆಯೇ ಚೆನ್ನಾಗಿದೆ
ನಮ್ಮ ದೇಶದಲ್ಲಿ ಶಿಕ್ಷಣಕ್ಕಿಂತ ಪರೀಕ್ಷಾ ವ್ಯವಸ್ಥೆಯೇ ತುಂಬ ಚೆನ್ನಾಗಿದೆ. ಅದಕ್ಕೆ ಯುಜಿಸಿ, ಎನ್ ಇಟಿ ಅಂಥದ್ದನ್ನು ಯಾರು ಬೇಕಾದರೂ ಪಾಸು ಮಾಡಬಹುದಾಗಿದೆ. ಇಷ್ಟಾಗಿ ಜಗತ್ತಿನಲ್ಲೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಇರೋದು ಫಿನ್ ಲ್ಯಾಂಡ್ ಹಾಗೂ ಸ್ಕಾಟ್ಲೆಂಡ್ ಅಂತ ದೇಶದಲ್ಲಿ. ಅದರಲ್ಲಿ ಅಮೆರಿಕ ಇಲ್ಲ. ಆದರೂ ನಮಗೆ ವಿದೇಶದ್ದು ಅಂದರೆ ಪವಿತ್ರವಾದದ್ದು ಎಂಬ ಭ್ರಮೆ ಇದೆ.
ಬೆಳಗ್ಗೆ ಕಾಲೇಜಿನಲ್ಲಿ, ಮಧ್ಯಾಹ್ನ ಶಾಲೆಯಲ್ಲಿ ಪಾಠ
ಮೊದಲೆಲ್ಲ ಬೆಳಗ್ಗೆ ಹೊತ್ತು ಮಹಾರಾಜ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಉಪನ್ಯಾಸಕರು ಮಧ್ಯಾಹ್ನ ಶಾಲೆಗೆ ಬಂದು ಪಾಠ ಹೇಳುತ್ತಿದ್ದರು. ಅಂದರೆ ಪಿಜಿ ಮಾಡುವವರಿಗೂ ಹೈಸ್ಕೂಲ್ ಓದುವವರಿಗೂ ಒಬ್ಬರೇ ಉಪನ್ಯಾಸಕರು. ಈಗಿನ ಮೇಷ್ಟ್ರಿಗೇ ವಿಜ್ಞಾನ ಬರುವುದಿಲ್ಲ. ಇನ್ನವರು ಮಕ್ಕಳಿಗೆ ಏನು ಹೇಳಿಕೊಡ್ತಾರೆ?
ಸದಾಶಿವ ಶೆಣೈ, ಪ್ರೆಸ್ ಕ್ಲಬ್ ಅಧ್ಯಕ್ಷ
ನಾವು ಪ್ರತಿಭಾ ಪಲಾಯನದ ಬಗ್ಗೆ ಮಾತಾಡ್ತೀವಿ. ಆದರೆ ಸಿಎನ್ ಆರ್ ರಾವ್ ಅವರಿಗೆ ನಾನಾ ದೇಶಗಳಿಂದ ಆಹ್ವಾನ ಬಂದಿದ್ದರೂ ಅಲ್ಲಿನವರನ್ನೇ ಇಲ್ಲಿಗೆ ಬರುವಂತೆ ಹೇಳಿದ್ದಾರೆ. ರಾವ್ ಅವರು ಇಡೀ ಶಿಕ್ಷಣ ಒಂದು ಸಾವಿರ ರುಪಾಯಿಯಲ್ಲಿ ಮುಗಿದಿದೆ. ವಿಶ್ವದಾದ್ಯಂತ ಅವರಿಗೆ ಎಪ್ಪತ್ತೆಂಟು ಡಾಕ್ಟರೇಟ್ ಬಂದಿವೆ. ಇಂಥ ಅಸಾಧಾರಣ ಸಾಧಕರು ನಮ್ಮ ಕನ್ನಡಿಗರು ಎಂಬುದು ಹೆಮ್ಮೆ.