ಕಾಂಗ್ರೆಸ್ ಸೇರಿರುವ ಸುದ್ದಿಗಳನ್ನು ತಳ್ಳಿ ಹಾಕಿದ : ಎನ್.ನಾಗರಾಜು
ಬೆಂಗಳೂರು, ಜೂನ್ 04 : 'ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತೇನೆ. ನಾನು ಕಾಂಗ್ರೆಸ್ ಪಕ್ಷವನ್ನು ಸೇರಿಲ್ಲ' ಎಂದು ಬಿಬಿಎಂಪಿ ಸದಸ್ಯ ಎನ್.ನಾಗರಾಜು ಅವರು ಸ್ಪಷ್ಟಪಡಿಸಿದರು.
ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಬೈರಸಂದ್ರ ವಾರ್ಡ್ ಬಿಬಿಎಂಪಿ ಸದಸ್ಯ ಎನ್.ನಾಗರಾಜು ಅವರು, 'ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರಿಂದ ಯಾವುದೇ ಅಸಮಾಧಾನವಿಲ್ಲ' ಎಂದು ಹೇಳಿದರು.
ಜಯನಗರದಲ್ಲಿ ಮಳೆಯ ಜೊತೆ ಬಲವಾಗಿ ಬೀಸಿರುವ ಗಾಳಿಸುದ್ದಿ
ಸೋಮವಾರ ಎನ್.ನಾಗರಾಜು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಅವರು, 'ಬಿಜೆಪಿಗಾಗಿಯೇ ಕೆಲಸ ಮಾಡುವೆ ನಾನು ಕಾಂಗ್ರೆಸ್ ಸೇರಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದೇನೆ' ಎಂದು ಹೇಳಿದರು.
ಫೋಟೋ ಬಗ್ಗೆ ಸ್ಪಷ್ಟನೆ : ಎನ್.ನಾಗರಾಜು ಅವರು ಮಾಜಿ ಸಚಿವ ಎಚ್.ಎಂ.ರೇವಣ್ಣ, ರಾಮಲಿಂಗಾ ರೆಡ್ಡಿ, ರಾಮಲಿಂಗಾ ರೆಡ್ಡಿ ಪುತ್ರಿ, ಜಯನಗರದ ಅಭ್ಯರ್ಥಿ ಸೌಮ್ಯಾ ರೆಡ್ಡಿ ಜೊತೆಯಾಗಿರುವ ಫೋಟೋವನ್ನು ಸೌಮ್ಯಾ ರೆಡ್ಡಿ ಅವರ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿತ್ತು. ಇದರಿಂದಾಗಿ ನಾಗರಾಜು ಕಾಂಗ್ರೆಸ್ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಜಯನಗರದ ಅಭ್ಯರ್ಥಿ ಘೋಷಣೆ : ಬಿಜೆಪಿಯಲ್ಲಿ ಅಸಮಾಧಾನ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್.ನಾಗರಾಜು ಅವರು, 'ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಭೇಟಿಯಾಗಿದ್ದೆವು. ನಾನು ಕಾಂಗ್ರೆಸ್ ಸೇರಿದ್ದೇನೆ ಎಂಬ ಸುದ್ದಿ ಸುಳ್ಳು' ಎಂದು ಸ್ಪಷ್ಟನೆ ನೀಡಿದರು.
ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ, ಬಿಜೆಪಿಯಿಂದ ಬಿ.ಎನ್.ಪ್ರಹ್ಲಾದ್, ಜೆಡಿಎಸ್ನಿಂದ ಕಾಳೇಗೌಡ ಅವರು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅವರು ಸ್ಪರ್ಧಿಸಿದ್ದಾರೆ.