ಕನ್ನಡದ ಮೇಲಿನ ಆಕ್ರಮಣ ಸಹಿಸೋಲ್ಲ: ಸಿದ್ದು ಖಡಕ್ ಸಂದೇಶ
ಬೆಂಗಳೂರು, ಜುಲೈ 31: "ಬೇರೆಡೆಯಿಂದ ಕರ್ನಾಟಕಕ್ಕೆ ಬರುವವರು ನಮ್ಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೇ ಹೊರತು, ಅದರ ಮೇಲೆ ದಾಳಿ ಮಾಡಬಾರದು. ಯಾರಾದರೂ ಹಾಗೆ ದಾಳಿ ಮಾಡಿದರೆ ಅಂಥವರಿಗೆ ಕಟ್ಟುನಿಟ್ಟಿನ ಸಂದೇಶ ನೀಡುವಲ್ಲಿ ಹಿಂಜರಿಯಬೇಡಿ" ಇದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು.
ಮೆಟ್ರೋದಲ್ಲಿ ಹಿಂದಿ ಬಳಸಲು ಸಾಧ್ಯವಿಲ್ಲ - ಕೇಂದ್ರಕ್ಕೆ ಸಿಎಂ ಪತ್ರ
ಮೆಟ್ರೋದಲ್ಲಿ ಹಿಂದಿ ಹೇರಿಕೆ ಸೇರಿದಂತೆ ಕನ್ನಡ ಭಾಷೆಯ ಮೇಲಾಗುತ್ತಿರುವ ದಾಳಿಯ ಕುರಿತು ಸಿದ್ದರಾಮಯ್ಯ ಅವರು ಮಾತನಾಡಿದ 14 ನಿಮಿಷಗಳ ವಿಡಿಯೋವನ್ನು ರಾಜ್ಯ ಸರ್ಕಾರ ಜುಲೈ 29 ರಂದು ಬಿಡುಗಡೆ ಮಾಡಿದೆ. ಕರ್ನಾಟಕ ನಮ್ಮ ಹೆಮ್ಮೆ ಎಂಬ ಈ ವಿಡಿಯೋದಲ್ಲಿ ಕರ್ನಾಟಕ ರಾಜ್ಯದ ಇತಿಹಾಸ, ಕನ್ನಡ ಭಾಷೆಯ ಹಿರಿಮೆ-ಗರಿಮೆಗಳನ್ನು ಹಾಡಿಹೊಗಳಲಾಗಿದೆ.
ನೆರೆರಾಜ್ಯದವರು ನಮ್ಮ ಸಹೋದರ-ಸಹೋದರಿಯರಿದ್ದಂತೆ, ನಾವು ಅವರನ್ನು ಪ್ರೀತಿಸಬೇಕು. ಆದರೆ ನಮ್ಮ ಭಾಷೆ, ನೆಲ, ಜಲದ ಮೇಲೆ ದಾಳಿ ನಡೆದಾಗಲೂ ನಾವು ಯಾವ ಖಡಕ್ ಸಂದೇಶ ನೀಡದೆ ಸುಮ್ಮನಿರುವುದು ತರವಲ್ಲ ಎಂದು ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
'ಕನ್ನಡ ಕವಲು ಸಮಿತಿ'ಯ(ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗುವ ಮೂಲಕವೇ ತಮ್ಮ ರಾಜಕೀಯ ಜೀವನ ಆರಂಭಿಸಿದ ಸಿದ್ದರಾಮಮಯ್ಯ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆ ಕರ್ನಾಟಕದಲ್ಲಿ ಬದುಕುತ್ತಿರುವ ಪ್ರತಿಯೊಬ್ಬನ ಆದ್ಯ ಜವಾಬ್ದಾರಿಯಾಗಬೇಕು ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.