ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ : ಜಮೀರ್ ಅಹ್ಮದ್
ಬೆಂಗಳೂರು, ಮೇ 24: 'ನನಗೆ ಸಚಿವ ಸ್ಥಾನ ನೀಡಬೇಕು ಎಂದು ನಾನು ಯಾರ ಬಳಿಯೂ ಕೇಳಿಕೊಂಡಿಲ್ಲ, ಕೇಳುವುದೂ ಇಲ್ಲ, ಇದಕ್ಕಾಗಿ ಯಾರ ಬಳಿ ಲಾಬಿ ಮಾಡಿಲ್ಲ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಿಧಾನಸೌಧದ ಪಡಸಾಲೆಯಲ್ಲಿ ರಾಜ್ಯದ ನೂತನ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರ ಜತೆ ನಿಂತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾತುಕತೆ ನಡೆಸುತ್ತಿರುವ ವಿಡಿಯೋ ಹೊರ ಬಂದ ಬಳಿಕ ಹರಡಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಬಂಡಾಯ ಶಾಸಕರನ್ನು ಕಾಯ್ದುಕೊಂಡು ಬಂದಿದ್ದ ಜಮೀರ್ ಖಾನ್ ಅವರು, ಕಾಂಗ್ರೆಸ್ ಸೇರ್ಪಡೆಗೊಂಡು ಈಗ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಚಾಮರಾಜಪೇಟೆ ಶಾಸಕರಾಗಿರುವ ಜಮೀರ್ ಅಹಮದ್ ರವರು ಚುನಾವಣಾ ಪೂರ್ವದಲ್ಲಿ ತಾವು ಸಚಿವರಾಗುವ ಆಸೆಯನ್ನು ಹೊತ್ತಿದ್ದರು. ಆದರೆ, ಈಗ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇಲ್ಲ.
ಗುರುವಾರದಂದು ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ನಂತರ ಮಾತನಾಡಿದ ಜಮೀರ್, 'ನಾನು ಸಚಿವ ಸ್ಥಾನ ಕೇಳಲು ಬಂದಿರಲಿಲ್ಲ. ಮಂತ್ರಿ ಪದವಿ ನೀಡಿರೆಂದು ನಾನು ಯಾರನ್ನೂ ಕೇಳುವುದಿಲ್ಲ. ನೂತನ ಡಿ.ಸಿ.ಎಂ. ಆಗಿ ಅಧಿಕಾರ ವಹಿಸಿಕೊಂಡ ಡಾ. ಜಿ. ಪರಮೇಶ್ವರ್ ಅವರನ್ನು ಅಭಿನಂದಿಸಲು ಬಂದಿದ್ದೆ ಅಷ್ಟೇ' ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿನಾಯಕರು ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸದಾ ಸಿದ್ಧ ಎಂದು ಹೇಳಿದ್ದಾರೆ. ಏಳು ಮಂದಿ ಜೆಡಿಎಸ್ ಬಂಡಾಯ ಶಾಸಕರ ಪೈಕಿ ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್, ಹಗರಿಬೊಮ್ಮನಹಳ್ಳಿಯಿಂದ ಭೀಮಾನಾಯ್ಕ್ ಹಾಗೂ ಪುಲಕೇಶಿ ನಗರದಿಂದ ಅಖಂಡ ಶ್ರೀನಿವಾಸ ಮೂರ್ತಿ ಮಾತ್ರ ಗೆಲುವು ಸಾಧಿಸಿದರು.