'ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಆ ದೇವರಿಗೆ ಪತ್ರ ಬರೆದಿದ್ದೇನೆ'
Recommended Video
ಬೆಂಗಳೂರು, ಮಾರ್ಚ್ 9: "ಸರಕಾರದ ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಆ ದೇವರಿಗೆ ಪತ್ರ ಬರೆದಿದ್ದೇನೆ" ಎಂದು ಕಳೆದ ವರ್ಷದ ಜುಲೈನಲ್ಲಿ ತುಮಕೂರಿನ ಅಧಿಕಾರಿಯೊಬ್ಬರಿಗೆ ತೇಜ್ ರಾಜ್ ಶರ್ಮಾ ಪತ್ರ ಬರೆದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದಹಾಗೆ ಈತ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಾತ.
ತೇಜ್ ರಾಜ್ ಶರ್ಮಾ ಸರಕಾರಿ ಕಚೇರಿಗೆ ಮಾರಾಟ ಮಾಡಿದ್ದ ಕುರ್ಚಿಗಳು ಮೊದಲನೇ ದಿನವೇ ಮುರಿದಿದ್ದವು. ಆ ಕಾರಣಕ್ಕೆ ತುಮಕೂರಿನಲ್ಲಿ ಆತ ಅಧಿಕಾರಿಗಳ ಜತೆ ಭಿನ್ನಾಭಿಪ್ರಾಯ ಹೊಂದಿದ್ದ. "ಕುರ್ಚಿಯನ್ನು ಬದಲಾಯಿಸಿ ಕೊಡು" ಎನ್ನುವಂತೆ ತೇಜ್ ರಾಜ್ ಶರ್ಮನಿಗೆ ಸೂಚಿಸಲಾಗಿತ್ತು ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಕಚೇರಿ ಸುರಕ್ಷತೆ ಲೋಪ, ಡಿಸಿಪಿ ಯೋಗೇಶ್ ತಲೆದಂಡ
"ಆ ಕಚೇರಿಯಲ್ಲೊ ಹದಿನೈದು ಕುರ್ಚಿ, ಟೇಬಲ್ ನ ಟೆಂಡರ್ ಕೂಡ ನೀಡಿದರಷ್ಟೇ ಕುರ್ಚಿ ಬದಲಾಯಿಸಿಕೊಡುವುದಾಗಿ ಶರ್ಮಾ ತಿಳಿಸಿದ್ದ. ಆದರೆ ಸಿಬ್ಬಂದಿ ನಿರಾಕರಿಸಿದಾಗ ಆತ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದ" ಎಂದು ಮೂಲಗಳು ತಿಳಿಸಿವೆ.
ತುಮಕೂರು ನಗರದಲ್ಲಿ ತೇಜ್ ರಾಜ್ ಶರ್ಮ ವಾಸವಿದ್ದ ಮನೆಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗಿದ್ದರು. ಆ ಮನೆಯಲ್ಲಿ ಅಧ್ಯಾತ್ಮದ ಪುಸ್ತಕಗಳೇ ಹೆಚ್ಚಿದ್ದವು. ಮನೆ ಅಸ್ತವ್ಯಸ್ತವಾಗಿತ್ತು. ಪಾತ್ರೆಗಳು ಚೆಲ್ಲಾಪಿಲ್ಲಿ ಆಗಿದ್ದವು. ತೇಜ್ ರಾಜ್ ಶರ್ಮ ವಿಪರೀತ ಕೋಪಿಷ್ಠ ಆಗಿದ್ದರಿಂದ ನೆರೆಹೊರೆಯವರು ಆತನ ಜತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲ.
ತುಮಕೂರಿಗೆ ಕರೆದೊಯ್ಯುವ ಮಾರ್ಗದುದ್ದಕ್ಕೂ ಭಗವದ್ಗೀತೆಯ ಶ್ಲೋಕಗಳನ್ನು ತೇಜ್ ರಾಜ್ ಶರ್ಮ ಹೇಳಿದ್ದಾನೆ. "ಅವರ ತಪ್ಪುಗಳ ಫಲವನ್ನು ಅನುಭವಿಸಬೇಕು. ನನಗೆ ಅನ್ಯಾಯ ಮಾಡಿದ್ದಾರೆ. ಅದರ ಕರ್ಮವನ್ನು ಅನುಭವಿಸಬೇಕು" ಎಂದು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣ ಸಿಸಿಬಿ ತನಿಖೆಗೆ