ಔತಣಕೂಟಕ್ಕೆ ಬೇಕೆಂದು ಹೋಗಿರಲಿಲ್ಲ, ಪಕ್ಷ ಬಿಡಲ್ಲ: ಗೂಳಿಹಟ್ಟಿ ಶೇಖರ್
ಬೆಂಗಳೂರು, ಜುಲೈ 11: ಡಿಕೆ.ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರು, ಮೈತ್ರಿ ಸರ್ಕಾರದ ಸಚಿವರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಕಾಣಿಸಿಕೊಂಡು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ಔತಣಕೂಟವಿದ್ದುದ್ದು ನನಗೆ ಗೊತ್ತೇ ಇರಲಿಲ್ಲ, ಮಾಜಿ ಶಾಸಕ ಸುಧಾಕರ್ ಅವರನ್ನು ಹೊಟೆಲ್ಗೆ ಹೋದಾಗಲೇ ಅಲ್ಲಿ ಔತಣಕೂಟ ಇರುವ ಬಗ್ಗೆ ಗೊತ್ತಾದದ್ದು ಎಂದಿದ್ದಾರೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ಗೆ?
ನಾನು ಉದ್ದೇಶಪೂರ್ವಕವಾಗಿ ಅಲ್ಲಿಗೆ ಹೋಗಿಲ್ಲ ಎಂದಿರುವ ಅವರು, ನಾನು ಅಲ್ಲಿ ಕೇವಲ 20 ನಿಮಿಷವಷ್ಟೆ ಇದ್ದೆ, ಯಾವ ನಾಯಕರ ಜೊತೆಯಲ್ಲಿಯೂ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ಕ್ಷೇತ್ರದ ಜನ 10-10 ರೂಪಾಯಿ ಒಗ್ಗೂಡಿಸಿ ಅವರೇ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಅಂತಹುದರಲ್ಲಿ ಅವರಿಗೆ ನಾನು ಮೋಸ ಮಾಡಿ ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಲಾರೆ ಎಂದ್ದಿದ್ದಾರೆ.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಅವರ ನೇತೃತ್ವದಲ್ಲಿಯೇ ರಾಜಕೀಯದಲ್ಲಿ ಮುಂದುವರೆಯುತ್ತೇನೆ, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆದು ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಕಾಂಗ್ರೆಸ್ ಶಾಸಕರೂ ಹಾಗೂ ಮೈತ್ರಿ ಸರ್ಕಾರದ ಸಚಿವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಭಾಗವಹಿಸಿದ್ದರು. ಹಾಗಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹ ಹರಿದಾಡಿತ್ತು.