ನೋಟು ಹೊಡೆತ, ಬ್ರ್ಯಾಂಡ್ ಮಳಿಗೆಗಳಿಂದ ಮಾಲ್ ಗಳಲ್ಲಿ ಬಾಡಿಗೆ ಚೌಕಾಶಿ
ಐಷಾರಾಮಿ ಬ್ರ್ಯಾಂಡ್ ವಸ್ತುಗಳ ಮಾರಾಟ ಮಳಿಗೆಗಳು ಇರುವ ಮಾಲ್ ಗಳ ಮಾಲೀಕರ ಬಳಿ ಬಾಡಿಗೆ ಚೌಕಾಶಿ ಆರಂಭವಾಗಿದೆ. ಅಪನಗದೀಕರಣದ ಹೊಡೆತಕ್ಕೆ ಸಿಲುಕಿ ದೆಹಲಿಯಿಂದ ಬೆಂಗಳೂರುವರೆಗಿನ ಮಾಲ್ ಗಳಲ್ಲಿ ಬಾಡಿಗೆ ಕಡಿಮೆ ಮಾಡಿ ಎಂದು ಮನವಿ ಮಾಡುತ್ತಿದ್ದಾರಂತೆ
ನವದೆಹಲಿ, ಜನವರಿ 25: ನವದೆಹಲಿಯ ಎಂಪೋರಿಯೋದಿಂದ ಬೆಂಗಳೂರಿನ ಯುಬಿ ಸಿಟಿವರೆಗೆ ಇರುವ ಐಷಾರಾಮಿ ಬ್ರ್ಯಾಂಡ್ ವಸ್ತುಗಳ ಮಾರಾಟಗಾರರು ಮಳಿಗೆಗಳ ಬಾಡಿಗೆ ಕಡಿಮೆ ಮಾಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಅಪಗದೀಕರಣದ ನಂತರ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಆದ್ದರಿಂದ ಬಾಡಿಗೆ ಕಡಿಮೆ ಮಾಡಿ ಎಂಬ ಮನವಿ ಅವರದು.
ಹೌದು, ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವವರು ಶೇ 25ರಷ್ಟು ಬಾಡಿಗೆ ಕಡಿಮೆ ಮಾಡಿಕೊಳ್ಳುವಂತೆ ಕೇಳಿರುವುದು ಹೌದು ಎಂಬುದನ್ನು ಮಾಲ್ ಗಳ ಮಾಲೀಕರು ಖಚಿತಪಡಿಸಿದ್ದಾರೆ. ಬ್ರಿಟನ್ ನ ಬರ್ ಬರ್ರಿ-ಅರ್ಮಾನಿ ಜೀನ್ಸ್, ಜೆನಿಸಿಸ್ ಲಕ್ಷುರಿ, ಜಿಮ್ಮಿ ಚೂ, ಕೆನಾಲಿ ಮತ್ತು ಜಿಯಾರ್ಜಿಯಾ ಅರ್ಮಾನಿ ವಸ್ತುಗಳ ಮಾರಾಟಗಾರರು ಬಾಡಿಗೆ ಕಡಿಮೆ ಮಾಡುವಂತೆ ಮಾಲೀಕರ ಬಳಿ ಮನವಿ ಮಾಡಿರುವುದಾಗಿ ಮೂಲಗಳು ಖಾತ್ರಿ ಪಡಿಸಿವೆ.[ಕೇಂದ್ರ ಬಜೆಟ್ ನ 7 ಇಂಟರೆಸ್ಟಿಂಗ್ ಸಂಗತಿಗಳು]
ಅದೇ ರೀತಿ ಜಾಗತಿಕ ಮಟ್ಟದ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ರಿಲಯನ್ಸ್ ಬ್ರ್ಯಾಂಡ್ಸ್ ಬಾಡಿಗೆ ಕಡಿತ ಮನವಿ ಮಾಡಿರುವುದಾಗಿ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಬ್ರ್ಯಾಂಡ್ ನ ಮುಖ್ಯಾಧಿಕಾರಿ ದರ್ಶನ್ ಮೆಹ್ತಾ, ಬಾಡಿಗೆ ಚೌಕಾಶಿ ಎಂಬುದು ಆಗಾಗ ಆಗುತ್ತಲೇ ಇರುತ್ತದೆ. ಅಪನಗದೀಕರಣಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
ಆದರೆ, ಯಾವುದೇ ಬ್ರ್ಯಾಂಡ್ ನ ಸಂಬಧಪಟ್ಟ ಅಧಿಕಾರಿಗಳು ಹಾಗೂ ಮಾಲ್ ಗಳ ಮಾಲೀಕರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. "ಅಪನಗದೀಕರಣದ ನಂತರ ಮಾರಾಟ ಶೇ 50ರಷ್ಟು ಕುಸಿದಿದೆ. ಜನ ತಮ್ಮ ತಾಪತ್ರಯಗಳನ್ನು ಸರಿ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ" ಎಂದು ಮಾರಾಟ ವಿಭಾಗದಲ್ಲೇ ಕೆಲಸ ಮಾಡುವ, ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.[ಪೇಪರ್ ಬೋಟ್ ಕಂಪನಿಯಿಂದ ಚಿಕ್ಕಿ ಮಾರಾಟ]
ಲಕ್ಷುರಿ ವಸ್ತುಗಳ ಮಾರಾಟ ಮಳಿಗೆಗಳ ಬಾಡಿಗೆ ಭಾರತದಲ್ಲಿ ವಿಪರೀತ ಹೆಚ್ಚಿದೆ. ಕಳೆದ ಕೆಲ ತಿಂಗಳಿಂದ ವ್ಯಾಪಾರವೂ ಕುಸಿದಿರುವುದರಿಂದ ಬಾಡಿಗೆ ಹೊರೆಯಾಗಿ ಪರಿಣಮಿಸಿದೆ ಎಂಬುದನ್ನು ಅಸೋಚಾಂನ ಪ್ರತೀಕ್ ದಾಲ್ಮಿಯಾ ಸ್ಪಷ್ಟಪಡಿಸಿದ್ದಾರೆ. ಚಿನ್ನ, ವಜ್ರದ ಮೇಲಿನ ಅಬಕಾರಿ ತೆರಿಗೆ, ಎರಡು ಲಕ್ಷದ ಮೇಲಿನ ವಸ್ತುಗಳಿಗೆ ಶೇ 1ರಷ್ಟು ಲಕ್ಷುರಿ ತೆರಿಗೆ, ಹಲವು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದು ಸಹ ಮಾರಾಟದ ಮೇಲೆ ಪರಿಣಾಮ ಬೀರಿದೆ.