ಚೆಲುವ ಬರುತ್ತಿದ್ದಂತೆ ಜಾಗ ಖಾಲಿ ಮಾಡಿದ ಗೌಡರು
ಬೆಂಗಳೂರು, ಅಕ್ಟೋಬರ್ 01 : ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ನಿಂದ ಅನ್ಯಾಯ ಆಗುತ್ತಲೇ ಇರುವುದನ್ನು ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡ ಅವರು ನಡೆಸುತ್ತಿರುವ ಧರಣಿಯ ಸಮಯದಲ್ಲಿ ಗೌಡರಿಗೆ ಇರುಸುಮುರುಸುವಾಗುವಂಥ ಘಟನೆ ನಡೆದಿದೆ.
ಗಾಂಧಿ ಪ್ರತಿಮೆಯ ಎದಿರು ಧರಣಿ ಕುಳಿತಿರುವ ದೇವೇಗೌಡರೆದಿರು, ಭಿನ್ನಮತದ ಬಾವುಟ ಹಾರಿಸಿರುವ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್ ಮತ್ತು ಅಖಂಡ ಶ್ರೀನಿವಾಸಮೂರ್ತಿ ಬರುತ್ತಿದ್ದಂತೆ, ಅವರ ಮುಖವನ್ನು ಕೂಡ ನೋಡದೆ ಗೌಡರು ಕುರ್ಚಿಯಿಂದ ಎದ್ದು ಹೊರಟರು.
ಇದರಿಂದ ಸಹಜವಾಗಿ ಮೂವರಿಗೂ ಮುಜುಗರವಾಗಿದೆ. ಪ್ರಕೃತಿಯ ಕರೆಗೆ ಹೋಗುತ್ತಿದ್ದೇನೆಂಬ ನೆಪ ಅವರು ಹೇಳಿದರೂ, ಜನತಾದಳದಲ್ಲಿ ಇತ್ತೀಚೆಗೆ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ, ದೇವೇಗೌಡರು ಮಾಡಿದ್ದು ಯಾರಿಗಾದರೂ ಅರ್ಥವಾಗುವಂಥದ್ದು. [ದೇವೇಗೌಡರಿಂದ ಕಾವೇರಿಗಾಗಿ ಉಪವಾಸ ಸತ್ಯಾಗ್ರಹ]
ಇದರಿಂದ ಭಿನ್ನಮತೀಯರಿಗೆ ಅಚ್ಚರಿ ಮತ್ತು ಆಘಾತವಾದದ್ದು ಸಹಜ. ಆದರೆ, ಕೆಲ ಸಮಯದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ದೇವೇಗೌಡರು ಚೆಲುವರಾಯಸ್ವಾಮಿ ಮತ್ತು ಜಮೀರ್ ಅಹ್ಮದ್ ಅವರಿಗೆ ಹಸ್ತಲಾಘವ ಮಾಡಿ ಕೆಳಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ಪಕ್ಷಭೇದ ಮರೆತು ಹಲವಾರು ಶಾಸಕರು ಈ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಕ್ಟೋಬರ್ 1ರಿಂದ 6ರವರೆಗೆ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿರುವುದು, ಬರಗಾಲದಲ್ಲಿಯೂ ರಾಜ್ಯದ ಮೇಲೆ ಬರಸಿಡಿಲು ಬಡಿದಂತಾಗಿದೆ. ರಾಜ್ಯದ ಕಾವೇರಿ ಕೊಳ್ಳದ ಅಣೆಕಟ್ಟುಗಳು ಒಣಗಿಹೋಗಿವೆ. ಇರುವ ನೀರು ಕುಡಿಯಲು ಕೂಡ ಸಾಲುವುದಿಲ್ಲ. [ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]
ಅಲ್ಲದೆ, ಅಕ್ಟೋಬರ್ 3ರೊಳಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ, ಅಕ್ಟೋಬರ್ 4 ಮತ್ತು 5ರಂದು ಕರ್ನಾಟಕ ಮತ್ತು ತಮಿಳುನಾಡಿನ ಅಣೆಕಟ್ಟುಗಳ ವಸ್ತುಸ್ಥಿತಿಯನ್ನು ಅರಿತು, ಅಕ್ಟೋಬರ್ 6ರಂದು ವರದಿ ಸಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.