80 ಲಕ್ಷ ಪೀಕಿದ್ದಾರೆ ಎಂದು 7 ಮಂದಿ ವಿರುದ್ಧ ದೂರಿತ್ತ ದಯಾನಂದ ಸ್ವಾಮಿ
ಬೆಂಗಳೂರು, ಫೆಬ್ರವರಿ 12 : ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ಎರಡು ದಿನದ ಹಿಂದೆ ಏಳು ಮಂದಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸ್ವಾಮೀಜಿ ಯಾರೆಂದರೆ ರಾಸಲೀಲೆ ಪ್ರಕರಣದಲ್ಲಿ ಹೆಸರು ಕೇಳಿಬಂದಿತ್ತಲ್ಲಾ, ಹ್ಞಾಂ, ಅವರೇ.
ಮದ್ದೇವಣಾಪುರ ಮಠದಲ್ಲಿ ರಾಸಲೀಲೆ, ಸ್ವಾಮೀಜಿ ನಾಪತ್ತೆ
ಫೆಬ್ರವರಿ ಹತ್ತನೇ ತಾರೀಕು ರಾತ್ರೋರಾತ್ರಿ ಚಿಕ್ಕಜಾಲ ಪೊಲೀಸ್ ಠಾಣೆಗೆ ತೆರಳಿದವರು ಸೂರ್ಯ, ಧರ್ಮೇಂದ್ರ, ಹಿಮಾಚಲಪತಿ, ಮಹೇಶ, ಪ್ರವೀಣ, ಬಸವರಾಜಪ್ಪ ಹಾಗೂ ಶಿವಕುಮಾರ್ ಎಂಬ ಎಳು ಮಂದಿ ವಿರುದ್ದ ದೂರು ದಾಖಲಿಸಿದ್ದಾರೆ. ತಮ್ಮನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂಬುದು ಮೇಲ್ನೋಟದ ಒಕ್ಕಣೆ.
ಪೂರ್ತಿಯಾಗಿ ಏನು ಕಥೆ ಎಂದು ಹೇಳಬೇಕು ಅಂದರೆ, ದಯಾನಂದ ಸ್ವಾಮಿಗಳು ನೀಡಿರುವ ದೂರು: ಸಿಡಿ ಇದೆ ಎಂದು ಹೇಳಿ ನನ್ನ ಬಳಿ ದುಡ್ಡು ಪಡೆದಿದ್ದರು. ಐದು ಕೋಟಿ ರುಪಾಯಿ ಮೊದಲಿಗೆ ಕೇಳಿದ್ದರು. ಆಗಾಗ ಸ್ವಲ್ಪ ಸ್ವಲ್ಪ ಹಣ ಪಡೆದ ಮೊತ್ತವೇ ಎಂಬತ್ತು ಲಕ್ಷ ರುಪಾಯಿಯಷ್ಟು ಆಗುತ್ತದೆ ಎಂದು ದೂರು ನೀಡಿದ್ದಾರೆ.