ಮಹದೇವ ಪ್ರಸಾದ್ ನಿಧನ: ಕಣ್ಣೀರಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಜನವರಿ 3: ಸಕ್ಕರೆ, ಸಹಕಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ನಿಧನ ಹೊಂದಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದು, ಮಂಗಳವಾರ ಸರಕಾರಿ ರಜೆ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವೈಯಕ್ತಿಕವಾಗಿ ನಮಗೆ ನಷ್ಟವಾಗಿದೆ, ಪಕ್ಷಕ್ಕೆ ನಷ್ಟವಾಗಿದೆ ಅವರೊಬ್ಬ ಸಜ್ಜನ ರಾಜಕಾರಣಿ ಎಂದು ಹನಿಗಣ್ಣಾದರು. ನಂತರ ಮೂರು ದಿನಗಳ ಕಾಲ ಶೋಕಾಚರಣೆ ಮತ್ತು ಮಂಗಳವಾರ ಸಾರ್ವತ್ರಿಕ ರಜಾ ಘೋಷಣೆ ಮಾಡಿದರು.[ಸಹಕಾರಿ ಸಚಿವ ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನ]
ಸಚಿವ ಮಹದೇವ ಪ್ರಸಾದ್ ಮಿತ ಬಾಷಿಯಾಗಿದ್ದು, ಸೌಮ್ಯ, ಸಜನ ರಾಜಕಾರಣಿಯಾಗಿದ್ದರು. ಅವರು ಡಿಸೆಂಬರ್ 31 ರೊಂದು ನನ್ನೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅವರದ್ದು ಮಾದರಿ ಕುಟುಂಬ ಒಬ್ಬನೇ ಮಗ, ಇತ್ತಿಚೆಗೆ ಮೊಮ್ಮೊಗ ಜನಿಸಿದ್ದ. ಪ್ರಸಾದ್ ಅವರು ಯಾರೋಂದಿಗೂ ಜಗಳವಾಡಿದ್ದೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]
ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಸಾವು ನನಗೆ ಆಘಾತವನ್ನುಂಟುಮಾಡಿದೆ. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
— CM of Karnataka (@CMofKarnataka) January 3, 2017
ಅವರ ಸಾವಿನ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ, ಮಹದೇವ ಪ್ರಸಾದ್ ಅವರಿಗೆ ದೇವರು ಚಿರಶಾಂತಿ ನೀಡಲಿ ಎಂದು ಹೇಳಿದರು.