ಐಟಿ ಅಧಿಕಾರಿ ಪುತ್ರ ಶರತ್ ಹತ್ಯೆ ನಡೆದದ್ದು ಹೇಗೆ?
ಬೆಂಗಳೂರು, ಸೆಪ್ಟೆಂಬರ್ 25 : ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಪುತ್ರ ಶರತ್ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಆರೋಪಿಗಳನ್ನು ಬಂಧಿಸಲಾಗಿದೆ. ಸೆ.12ರಂದು ಶರತ್ ಅಪಹರಣ ಮಾಡಿದ್ದ ಆರೋಪಿಗಳು ಅಂದೇ ಹತ್ಯೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಐಟಿ ಅಧಿಕಾರಿ ಪುತ್ರ ಶರತ್ ಕೊಂದವರು ಸಿಕ್ಕಿಬಿದ್ದಿದ್ದು ಹೇಗೆ?
ಶರತ್ ಹತ್ಯೆ ಪ್ರಕರಣದ ಆರೋಪಿಗಳಾದ ವಿಶಾಲ್, ಕರಣ್, ವಿನಯ್, ವಿನೋದ್ ರನ್ನು 4 ದಿನಗಳ ಕಾಲ ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ. ಜ್ಞಾನಭಾರತಿ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಭಾನುವಾರ ನರಸಿಂಹಯ್ಯನ ಕೆರೆ, ಕುರುಬನಪಾಳ್ಯದ ಕಲ್ಲು ಕ್ವಾರಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಹಜರು ಪೂರ್ಣಗೊಳಿಸಿದ್ದಾರೆ.
ಸೆ.12ರಂದು ಶರತ್ ಅಪಹರಣ ಮಾಡಿದ್ದ ಆರೋಪಿಗಳು ಅಂದೇ ಶರತ್ ಪೋಷಕರಿಗೆ 50 ಲಕ್ಷ ಹಣ ನೀಡುವಂತೆ ಮತ್ತು ಪೊಲೀಸರಿಗೆ ದೂರು ನೀಡದಂತೆ ವಿಡಿಯೋ ಕಳಿಸಿದ್ದರು. ಆದರೆ, ಶರತ್ ತಂದೆ ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ತಕ್ಷಣ ಹತ್ಯೆ ಮಾಡಿದ್ದರು.
ವಿಶಾಲ್ ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಶರತ್ನನ್ನು ಅಪಹರಣ ಮಾಡಬಹುದು ಎಂದು ವಿನಯ್ ವಿಶಾಲ್ಗೆ ಹೇಳಿದ್ದ. ಆಗಸ್ಟ್ 25ರಂದು ದೊಡ್ಡ ಆಲದಮರದ ಸಮೀಪದ ಬಾರ್ನಲ್ಲಿ ಅಪಹರಣದ ಸಂಚು ರೂಪಿಸಲಾಗಿತ್ತು.
ಕುತ್ತಿಗೆಗೆ ಹಗ್ಗ ಬಿಗಿದು ಕೊಂದರು
ಸೆ.12ರಂದು ಶರತ್ ಅಪಹರಣ ಮಾಡಿದ್ದ ಆರೋಪಿಗಳು ಅಂದೇ ಶರತ್ ಪೋಷಕರಿಗೆ 50 ಲಕ್ಷ ಹಣ ನೀಡುವಂತೆ ಮತ್ತು ಪೊಲೀಸರಿಗೆ ದೂರು ನೀಡದಂತೆ ವಿಡಿಯೋ ಕಳಿಸಿದ್ದರು. ದೂರು ನೀಡಿದ್ದು ತಿಳಿದ ಬಳಿಕ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದರು. ನಂತರ ಶವವನ್ನು ನರಸಿಂಹಯ್ಯನ ಕೆರೆಗೆ ಎಸೆದಿದ್ದರು.
ತೇಲಿದ ಶವವನ್ನು ತಂದು ಹೂತು ಹಾಕಿದರು
ಕೆರೆಯ ಬಳಿ ದಿನಾಲೂ ಹೋಗಿ ಶವ ತೇಲುತ್ತಿದೆಯೇ? ಎಂದು ನೋಡಿಕೊಂಡು ಬರುತ್ತಿದ್ದರು. ಸೆ.20ರಂದು ಶವ ನೀರಿನಲ್ಲಿ ತೇಲಲು ಆರಂಭಿಸಿದಾಗ, ಅದನ್ನು ಚೀಲದಲ್ಲಿ ಹಾಕಿಕೊಂಡು ಬಂದು ಕುರುಬನಪಾಳ್ಯ ಸಮೀಪದ ಕಲ್ಲು ಕ್ವಾರಿಯಲ್ಲಿ ಹೂತಿದ್ದರು.
ಹೋಂಡಾ ಸಿಟಿ ಕಾರಿನ ಆಸೆ
ಈ ಪ್ರಕರಣದ ಪ್ರಮುಖ ಆರೋಪಿ ವಿಶಾಲ್. ನಿನ್ನ ಗೆಳೆಯರಲ್ಲಿ ಶ್ರೀಮಂತರು ಇದ್ದರೆ ಹೇಳು. ಅವರನ್ನು ಅಪಹರಣ ಮಾಡಿ ಹಣಗಳಿಸೋಣ. ಈ ಪ್ಲಾನ್ ಯಶಸ್ವಿಯಾದರೆ ನಿನಗೆ ಹೋಂಡಾ ಸಿಟಿ ಕಾರು ಕೊಡಿಸುತ್ತೇನೆ ಎಂದು ವಿಶಾಲ್ ವಿನಯ್ಗೆ ಆಮಿಷವೊಡ್ಡಿದ್ದ.
ತಪ್ಪೊಪ್ಪಿಕೊಂಡ ವಿನಯ್
'ಶರತ್ ಹೆಸರನ್ನು ವಿಶಾಲ್ಗೆ ನಾನೇ ಸೂಚಿಸಿದ್ದೆ. ಅಲ್ಲದೇ ಆತನ ಅಕ್ಕ ತನ್ನ ಗೆಳತಿ ಎಂದು ಸಹ ತಿಳಿಸಿದ್ದೆ' ಎಂದು ವಿನಯ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆಗಸ್ಟ್ 25ರಂದು ದೊಡ್ಡ ಆಲದಮರದ ಸಮೀಪದ ಬಾರ್ನಲ್ಲಿ ಅಪಹರಣ ಮಾಡುವ ಸಂಚು ರೂಪಿಸಲಾಗಿತ್ತು. (ಶರತ್ ಶವ ಸಿಕ್ಕ ಸ್ಥಳ)
ಕೊಮ್ಮಘಟ್ಟದಲ್ಲಿ ಚಾಕು ಖರೀದಿ
ಆರೋಪಿಗಳು ಶರತ್ ಬೆದರಿಸಲು ಹಗ್ಗ ಮತ್ತು ಚಾಕುವನ್ನು ಕೊಮ್ಮಘಟ್ಟದ ಅಂಗಡಿಯಲ್ಲಿ ಖರೀದಿ ಮಾಡಿದ್ದರು. ಅಂಗಡಿ ಮಾಲೀಕನ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.