ಬಂದ್ ದಿನವು ಇಂದಿರಾ ಕ್ಯಾಂಟೀನ್ ಗೆ 1 ಲಕ್ಷ ಜನ ಬಂದರಾ?
Recommended Video
ಬೆಂಗಳೂರು, ಜುಲೈ 27: ಬಿಬಿಎಂಪಿ ವ್ಯಾಪ್ತಿಯೊಳಗೆ ಇರುವ 152 ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಬಿಬಿಎಂಪಿಯ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪ ಮಾಡಿದ್ದು, ಅದಕ್ಕೆ ಕೆಲವು ತರ್ಕಗಳನ್ನು ಸಹ ಗುರುವಾರ ಮುಂದೆ ಇಟ್ಟಿದ್ದಾರೆ.
ಅವರ ತಕರಾರು ಇರುವುದು ಇಂದಿರಾ ಕ್ಯಾಂಟೀನ್ ಗೆ ಬಂದಿರುವ ಗ್ರಾಹಕರ ಸಂಖ್ಯೆ ಮತ್ತು ಅದರ ಆಧಾರದಲ್ಲಿ ರಾಜ್ಯ ಪಾವತಿಸಿರುವ ಬಿಲ್ ಬಗ್ಗೆ. ಪದ್ಮನಾಭ ರೆಡ್ಡಿ ಅವರು ಹೇಳುವಂತೆ, ಬೆಂಗಳೂರಿನ 152 ಇಂದಿರಾ ಕ್ಯಾಂಟೀನ್ ಗಳಿಗೆ ಪ್ರತಿ ದಿನವೂ 1,97,575 ಗ್ರಾಹಕರು ಬರುತ್ತಾರೆ ಎಂದು ತೋರಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿ ರು. 63,32,400 ಪಾವತಿಸಿದೆ.
ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಿಗೇಕೆ ಬಂತು ಇಂಥ ದುಸ್ಥಿತಿ?
ಅದೇ ರೀತಿಯ ಒಂದು ಬಿಲ್ 2018ರ ಜನವರಿಯದು ಉಲ್ಲೇಖ ಮಾಡಿದ್ದು, ಆ ತಿಂಗಳು 25ನೇ ತಾರೀಕು ಮಹಾದಾಯಿ ವಿಚಾರವಾಗಿ ಬಂದ್ ಇತ್ತು. "ಬಂದ್ ದಿನವೂ ಅದೇ ಸಂಖ್ಯೆಯ ಜನರು ಬರಲು ಸಾಧ್ಯವಾ? ಅದರ ಜತೆಗೆ ಆಗ ಭಾರೀ ಮಳೆ ಆಗ್ತಿತ್ತು. ಅದು ಹೇಗೆ ಆ ದಿನಗಳದು ಸಹ ಒಂದೇ ಬಿಲ್ ಬರಲು ಸಾಧ್ಯ?" ಎಂದು ಕೇಳಿದ್ದಾರೆ.
ಅದರ ಜತೆಗೆ ವಸಂತ್ ನಗರ, ಸಂಪಂಗಿ ನಗರ, ಬಾಣಸವಾಡಿಯ ಕ್ಯಾಂಟೀನ್ ಗಳು ಮುಚ್ಚಿದ್ದವು. ಆದ್ದರಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಉದ್ದೇಶವೇ ಪ್ರಶ್ನಾರ್ಹವಾಗಿದೆ ಎಂದು ಪದ್ಮನಾಭ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಗರ ಪ್ರದೇಶದ ಬಡವರಿಗಾಗಿ ಕಡಿಮೆ ದರದಲ್ಲಿ ಆಹಾರ ಪದಾರ್ಥ ನೀಡಲು ಆರಂಭವಾಗಿದ್ದು ಇಂದಿರಾ ಕ್ಯಾಂಟೀನ್. ಆ ಯೋಜನೆಯನ್ನು ಸದ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಕೂಡ ಮುಂದುವರಿಸಿದೆ. ಆದರೆ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.