ಗೃಹ ನಿರ್ಮಾಣ ಸಂಘಕ್ಕೆ ನೇರ ಭೂ ಖರೀದಿ ಅವಕಾಶ
ಬೆಂಗಳೂರು, ಜ. 2: ಖಾಸಗಿ ಗೃಹ ನಿರ್ಮಾಣ ಸಂಘಗಳು ಈಗ ಡೆವಲಪರ್ ಮೂಲಕವೇ ಭೂಮಿ ಖರೀದಿಸಬೇಗಾಗಿದೆ. ಆದ್ದರಿಂದ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಸಂಘಗಳೇ ನೇರವಾಗಿ ಭೂಮಿ ಖರೀದಿಸಲು ಅವಕಾಶ ನೀಡಲಾಗುವುದು ಎಂದು ಸಹಕಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಮೂಲಕ ಸಂಘಗಳು ಒಂದೇ ವರ್ಷದಲ್ಲಿ ಮನೆ ಸೌಲಭ್ಯ ಕಲ್ಪಿಸಲು ಅನುಕೂಲ ಕಲ್ಪಿಸಲಾಗುವುದೆಂದು ತಿಳಿಸಿದರು.
ಗೃಹ ನಿರ್ಮಾಣ ಸಂಘಗಳು ತಮ್ಮ ಸದಸ್ಯರಿಗೆ ಸೌಲಭ್ಯ ಒದಗಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಇದಕ್ಕೆ ಕ್ಲಿಷ್ಟಕರ ನಿಯಮವೂ ಕಾರಣ. ಆದ್ದರಿಂದ ನಿಯಮಗಳನ್ನು ಸರಳಗೊಳಿಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು. [ಡಿಕೆಶಿ ಹಗರಣ ಬಿಚ್ಚಿಟ್ಟ ಹಿರೇಮಠ]
ಏಕ ಗವಾಕ್ಷಿ ಕೇಂದ್ರ : ಬಡಾವಣೆ ನಿರ್ಮಿಸಲು ಸುಮಾರು 10 ಏಜೆನ್ಸಿಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ. ಇದರಿಂದ ಉಂಟಾಗುವ ವಿಳಂಬ ತಪ್ಪಿಸಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.
ಕಾಯಿದೆಗೆ ತಿದ್ದುಪಡಿ ತರುವ ಕರಡನ್ನು ಶೀಘ್ರ ಸಲ್ಲಿಸಲಾಗುವುದು. ಮುಂದಿನ ಜಂಟಿ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಲಾಗುತ್ತದೆ ಎಂದು ಮಹದೇವ ಪ್ರಸಾದ್ ತಿಳಿಸಿದರು.