ಕಳೆದ ಮೂರು ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತಗಳು
ಕಳೆದ ಮೂರು ವರ್ಷಗಳಲ್ಲಿ ಭಾರತೀಯ ರೈಲ್ವೆ ಘೋರ ರೈಲು ಅಪಘಾತಗಳನ್ನು ಎದುರಿಸಿದೆ. ಅವುಗಳಲ್ಲಿ ಹಲವು ಹಳಿತಪ್ಪಿ ದುರಂತ ಸಂಭವಿಸಿದ ಘಟನೆಗಳೇ ಹೆಚ್ಚಾಗಿವೆ.
ಬೆಂಗಳೂರು, ನವೆಂಬರ್, 20: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಲೆಟ್ ಟ್ರೈನ್ ಸಂಚಾರ ಆರಂಭಿಸುವ ಕುರಿತು ಯೋಚಿಸುತ್ತಿದ್ದಾರೆ. ಆದರೆ ನಮ್ಮ ದೇಶದ ರೈಲ್ವೇ ಹಳಿಗಳೇ ಇನ್ನೂ ಸಂಪೂರ್ಣ ಸುರಕ್ಷಿತವಾಗಿಲ್ಲ.
ದೇಶದ ರೈಲ್ವೆ ಹಳಿಗಳು ಎಷ್ಟು ಸುರಕ್ಷಿತವಾಗಿವೆ ಎಂಬುದಕ್ಕೆ ಭಾನುವಾರ ನಡೆದ ಇಂದೋರ್-ಪಾಟ್ನಾ ಭೀಕರ ರೈಲು ಅಪಘಾತವೇ ಸಾಕ್ಷಿ. ಇಂತಹ ಹಲವು ರೈಲು ದುರಂತಗಳನ್ನು ದೇಶ ಕಂಡಿದೆ. ಅವುಗಳಲ್ಲಿ ಪ್ರಮುಖ ಅಪಘಾತಗಳ ಮಾಹಿತಿ ಇಲ್ಲಿದೆ.[ ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]
ಭುವನೇಶ್ವರ ರೈಲು ದುರಂತ: ಸೆಪ್ಟೆಂಬರ್, 30, 2016 ರಂದು ಭುವನೇಶ್ವರದಿಂದ ಭದ್ರಕ್ ಪ್ಯಾಸೆಂಜರ್ ರೈಲು ಗೂಡ್ಸ್ ಕಟಕ್ ನಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಸಿಕಿಂದರಾಬಾದ್, ಮುಂಬೈ ದುರಂತೋ ರೈಲು ಅಪಘಾತ: ಸೆಪ್ಟೆಂಬರ್, 12, 2015ರಂದು ನಡೆದ ಸಿಕಿಂದರಾಬಾದ್- ಮುಂಬೈ ಲೋಕಮಾನ್ಯ ತಿಲಕ್ ದುರಂತೋ ಎಕ್ಸ್ ಪ್ರೆಸ್ ಕಲಬುರ್ಗಿಯಿಂದ 20 ಕಿ.ಮೀ. ದೂರದಲ್ಲಿರುವ ಮರ್ಟೂರು ರೈಲ್ವೇ ನಿಲ್ದಾಣದಲ್ಲಿ ಹಳಿ ತಪ್ಪಿ ಘೋರ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. 7ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಡೆಹ್ರಾಡೂನ್- ವಾರಣಾಸಿ ಜನತಾ ಎಕ್ಸ್ ಪ್ರೆಸ್ ದುರಂತ: ಮಾರ್ಚ್, 20 2015ರಂದು ಉತ್ತರ ಪ್ರದೇಶದ ರಾಯಲ್ ಬರೇಲಿಯಲ್ಲಿ ನಡೆದ ಡೆಹ್ರಾಡೂನ್ ವಾರಣಾಸಿ ರೈಲು ಅಫಘಾತದಲ್ಲಿ 39 ಮಂದಿ ಸಾವನ್ನಪ್ಪಿದ್ದರು. 150ಕ್ಕೂ ಅದಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಬೆಂಗಳೂರು- ಎರ್ನಾಕುಲಂ ಇಂಟರ್ ಸಿಟಿ ಎಕ್ಸ ಪ್ರೆಸ್: ಫೆಬ್ರುವರಿ, 13, 2015ರಂದು ಬೆಂಗಳೂರಿನಿಂದ ಎರ್ನಾಕುಲಂ ಎಕ್ಸ್ ಪ್ರೆಸ್ ಗಾಡಿಯು ಬೆಂಗಳೂರಿನ ಆನೇಕಲ್ ಬಳಿ ಹಳಿತಪ್ಪಿ ಬೋಗಿಗಳು ಉರುಳಿ ಬಿದ್ದಿದ್ದವು. ಪರಿಣಾಮ ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ದಿಬ್ರುಘಡ ರಾಜಧಾನಿ ಎಕ್ಸ್ ಪ್ರೆಸ್ ದುರಂತ: ಜೂನ್ 25 2014ರಂದು ದಿಬ್ರುಘಡ ರಾಜಧಾನಿ ಎಕ್ಸ್ ಪ್ರೆಸ್ ರೈಲು ಗಾಡಿಯು ಬಿಹಾರದ ಚಪ್ರ ಪಟ್ಟಣದಲ್ಲಿ ಹಳಿ ತಪ್ಪಿದ ಪರಿಣಾಮ 4 ಜನ ಮೃತಪಟ್ಟು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಗೋರ್ಖಾಧಾಮ್ ಎಕ್ಸ್ ಪ್ರೆಸ್ ರೈಲು ದುರಂತ: ಮೇ, 26, 2014ರಂದು ಉತ್ತರ ಪ್ರದೇಶದ ಸಂತ ಕಬೀರ ನಗರ ಜಿಲ್ಲೆಯಲ್ಲಿ ಗೋರ್ಖಾಧಾಮ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದಿವಾ ಜಂಕ್ಷನ್- ಸವಂತ್ ವಾಡಿ ಪ್ಯಾಸೆಂಜರ್ ರೈಲು ಅಪಘಾತ: ಮೇ 4, 2014ರಂದು ನಾಗತೊಣೆ ಮತ್ತು ರೋಹ ರೈಲ್ವೆ ನಿಲ್ದಾಣಗಳ ಮಧ್ಯೆ ಹಳಿ ತಪ್ಪಿದ್ದ ಈ ರೈಲು 20ಜನರನ್ನು ಬಲಿತೆಗೆದುಕೊಂಡಿತ್ತು. 100ಕ್ಕೂ ಅಧಿಕಮಂದಿ ಗಾಯಗೊಂಡಿದ್ದರು.