ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಮತ್ತೆ ಬಿತ್ತು ಮಸಿ!
ಬೆಂಗಳೂರು, ಜುಲೈ 20: ನಮ್ಮ ಮೆಟ್ರೋದಲ್ಲಿ ಹಿಂದಿ ಸೈನ್ ಬೋರ್ಡ್ ಗಳನ್ನು ಬಳಸುವ ಕುರಿತಂತೆ ವಿವಾದವೆದ್ದು, ಈ ಕುರಿತು ರಾಷ್ಟ್ರೀಯ ಮಾಧ್ಯಮಗಳೂ ಚರ್ಚೆ ನಡೆಸಿದ್ದು ಹಳೇ ವಿಷಯ. ಆದರೆ ನಿನ್ನೆ(ಜುಲೈ 19) ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೀಪಾಂಜಲಿ ನಗರ, ಇಂದಿರಾ ನಗರ ಮತ್ತು ಯಶವಂತಪುರ ಮೆಟ್ರೋ ನಿಲ್ದಾಣಗಳಲ್ಲಿದ್ದ ಹಿಂದಿ ಸೈನ್ ಬೋರ್ಡ್ ಗಳನ್ನು ಅಳಿಸಿ ಹಾಕಿ, ಈ ಹೋರಾಟ ನಿಂತುಹೋಗಿಲ್ಲ ಎಂಬುದನ್ನು ನೆನಪಿಸಿದರು!
ಇಂದಿರಾನಗರ ಮೆಟ್ರೋ ಸ್ಟೇಶನ್ ನ ಹಿಂದಿ ಬೋರ್ಡ್ ಮೇಲೆ "ಹಿಂದಿ ಬಳಕೆ ನಿಲ್ಲಿಸಿ" ಎಂಬ 'ಕರವೇ' ಪೋಸ್ಟರ್ ವೊಂದನ್ನು ಅಂಟಿಸಲಾಗಿದ್ದು, ಬೆಂಗಳೂರಿಗರು ಹಿಂದಿ ಹೇರಿಕೆಯನ್ನು ಸಹಿಸೋಲ್ಲ ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ.
ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ
ಇತ್ತೀಚೆಗಷ್ಟೇ 'ನಮ್ಮ ಮೆಟ್ರೋ ಹಿಂದಿ ಬೇಡ' ಎಂಬ ಆನ್ ಲೈನ್ ಅಭಿಯಾನದ ಫಲಶ್ರುತಿ ಎಂಬಂತೆ ಕೆಂಪೇಗೌಡ ಇಂಟರ್ ಚೇಂಜ್ (ಮೆಜೆಸ್ಟಿಕ್) ಮೆಟ್ರೋ ಸ್ಟೇಶನ್ ಮತ್ತು ಗ್ರೀನ್ ಲೈನ್ ನ 'ಚಿಕ್ಕಪೇಟೆ ಮೆಟ್ರೋ ನಿಲ್ದಾಣ'ಗಳಲ್ಲಿ ಹಾಕಲಾಗಿದ್ದ ಬೋರ್ಡ್ ನಲ್ಲಿದ್ದ ಹಿಂದಿ ವಾಕ್ಯಗಳನ್ನು ಬಿಎಂಆರ್ ಸಿಎಲ್ ಅಳಿಸಿಹಾಕಿತ್ತು!
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಒಟ್ಟಿನಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ, ಒಂದೆರಡು ಸ್ಟೇಷನ್ ಗಳಲ್ಲಿ ಹಿಂದಿ ಬೋರ್ಡ್ ಗೆ ಮಸಿಬಳಿದು ಸುಮ್ಮನಿದ್ದ ಬಿಎಂ ಆರ್ ಸಿಎಲ್ ಗೆ, ಮತ್ತಷ್ಟು ಸ್ಟೇಷನ್ ಗಳು ಬಾಕಿ ಇವೆ ಎಂಬುದನ್ನು ನೆನಪಿಸುವ ಉದ್ದೇಶ ಕರವೆ ಯ ಈ ಕೆಲಸದ ಹಿಂದಿರುವುದು ಸುಳ್ಳಲ್ಲ.
ಹೆಚ್ಚಾಯ್ತು ಉತ್ತರ ಭಾರತೀಯ ಉಪಟಳ!
ಉದಾರಿಗಳು ಎನ್ನುತ್ತಲೇ ಎಲ್ಲ ರಾಜ್ಯದ ಜನರನ್ನೂ ಮುಕ್ತ ಮನಸ್ಸಿನಿಂದಲೇ ಸ್ವಾಗತಿಸಿದ ಬೆಂಗಳೂರಿಗರಿಗೆ ಈಗೀಗ ಉತ್ತರ ಭಾರತೀಯರ ಉಪಟಳ ಹೆಚ್ಚುತ್ತಿದೆ ಅನ್ನಿಸಿರುವುದಂತೂ ಸುಳ್ಳಲ್ಲ. ಹೀಗಿರುವಾಗ ವಿವಿಧತೆಯಲ್ಲಿ ಏಕತೆ ಎಂಬ ಸಬೂಬು ನೀಡುತ್ತ ಎಲ್ಲೆಲ್ಲೂ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬೆಂಗಳೂರಿಗರು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ.
ಹೋರಾಟಕ್ಕೆ ಇಂಬು ನೀಡಿದ ಹ್ಯಾಶ್ ಟ್ಯಾಗ್ ಗಳು
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹಲವು ಕನ್ನಡ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಗಳನ್ನು ಸೃಷ್ಟಿಸಿ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಇಂಬುನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. #nammametrohindibeda, #nammametrokannadasaaku, #stopHindiImposition ಎಂಬ ಹ್ಯಾಶ್ ಟ್ಯಾಗ್ ಗಳ ಮೂಲಕ ಹಿಂದಿ ಹೇರಿಕೆ ನಿಲ್ಲಲಿ ಎಂಬ ದನಿ ಎಲ್ಲೆಡೆಯಿಂದ ಮೊಳಗಿತ್ತು.
ಬಿಎಂ ಆರ್ ಸಿಎಲ್ ಗೆ ನೋಟಿಸ್
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸುವ ಬಿಎಂಆರ್ ಸಿಎಲ್ ಕ್ರಮವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಖಂಡಿಸಿದ್ದರು. ಅಲ್ಲದೆ, ಈ ಕುರಿತಂತೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ), ಬಿಎಂಆರ್ ಸಿಎಲ್ ಗೆ ನೋಟೀಸ್ ಸಹ ಜಾರಿಗೊಳಿಸಿತ್ತು. ಬಹುಸಂಖ್ಯಾತ ಕನ್ನಡಿಗರ ಭಾವನೆಗೆ ನೋವುಂಟು ಮಾಡುವ ಹಿಂದಿ ಹೇರಿಕೆಯ ಕ್ರಮವನ್ನು ಕೈಬಿಡುವಂತೆ ಪ್ರಾಧಿಕಾರ ಹೇಳಿತ್ತು.
ಉತ್ತರ-ದಕ್ಷಿಣ ಬೆಸೆದ ನಮ್ಮ ಮೆಟ್ರೋ
ಬೆಂಗಳೂರಿಗರ ಮೆಚ್ಚಿನ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡು ಜೂನ್ 19 ರಂದು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿತ್ತು. ಈ ಮೂಲಕ ಮೊದಲ ಹಂತದ ನಾಗಸಂದ್ರದಿಂದ ಯಲಚೇನಹಳ್ಳಿ ಮತ್ತು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗಿನ 42 ಕಿ.ಮೀ.ಮಾರ್ಗ ಅಧಿಕೃತವಾಗಿ ತೆರೆದುಕೊಂಡು, ಬೆಂಗಳೂರು ಉತ್ತರ-ದಕ್ಷಿಣವನ್ನು ಬೆಸೆಯುವಲ್ಲಿ ನೆರವಾಗಿದೆ.