ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ
ಬೆಂಗಳೂರು, ಜುಲೈ 3: ಕೊನೆಗೂ ಬೆಂಗಳೂರಿಗರ, ಅದರಲ್ಲೂ ಕನ್ನಡ ಪ್ರೇಮಿಗಳ ಹೋರಾಟಕ್ಕೆ ಜಯಲಭಿಸಿದೆ. 'ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬೇಡ' ಆಂದೋಲನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕ ಅಭೂತಪೂರ್ವ ಬೆಂಬಲ ಬಿಎಂಆರ್ ಸಿ ಎಲ್(ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಶನ್ ಲಿಮಿಟೆಡ್) ಅಧಿಕಾರಿಗಳನ್ನೂ ನಡುಗಿಸಿದೆ.
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಅದಕ್ಕೆ ಸಾಕ್ಷಿ ಎಂಬಂತೆ, ಕೆಂಪೇಗೌಡ ಇಂಟರ್ ಚೇಂಜ್ (ಮೆಜೆಸ್ಟಿಕ್) ಮೆಟ್ರೋ ಸ್ಟೇಶನ್ ಮತ್ತು ಗ್ರೀನ್ ಲೈನ್ ನ 'ಚಿಕ್ಕಪೇಟೆ ಮೆಟ್ರೋ ನಿಲ್ದಾಣ'ಗಳಲ್ಲಿ ಹಾಕಲಾಗಿದ್ದ ಬೋರ್ಡ್ ನಲ್ಲಿದ್ದ ಹಿಂದಿ ವಾಕ್ಯಗಳನ್ನು ಬಿಎಂಆರ್ ಸಿಎಲ್ ಅಳಿಸಿಹಾಕಿದೆ! ' ಈ ಬೋರ್ಡ್ ಗಳಲ್ಲಿ ಹಿಂದಿ ಅಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡಪರ ಹೋರಾಟಗಾರರು ಬೆದರಿಕೆ ಹಾಕಿದ್ದರ ಪರಿಣಾಮ ಇದು!
ಹಿಂದಿ ಹೇರಿಕೆ' ಬಿಎಂಆರ್ ಸಿಎಲ್ ನಮ್ಮ ಮೆಟ್ರೋಗೆ ನೋಟಿಸ್
ವಿವಿಧತೆಯಲ್ಲಿ ಏಕತೆ ಎನ್ನುವವರು ನಾವು, ಎಲ್ಲವನ್ನೂ ಸ್ವೀಕರಿಸಬೇಕು' ಎಂದು ಬೊಬ್ಬೆಯಿಡುತ್ತ, ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವುದಕ್ಕೆ, ಸಮರ್ಥಿಸಿಕೊಳ್ಳುವುದಕ್ಕೆ ಹೊರಟ ಹಲವರಿಗೆ ಬಿಎಂಆರ್ ಸಿಎಲ್ ನ ಈ ನಡೆ ಹಿನ್ನೆಡೆಯನ್ನುಂಟುಮಾಡಿದೆ.
Our campaign working on the ground. #NammaMetroHindiBeda pic.twitter.com/fgbHYquXxH
— Ganesh Chetan (@ganeshchetan) July 1, 2017
ಬೆಂಗಳೂರಿನ ಹೆಮ್ಮೆಯ 'ನಮ್ಮ ಮೆಟ್ರೋ' ಮೊದಲ ಹಂತ ಪೂರ್ಣಗೊಂಡು, ಜೂನ್ 19 ರಂದು ಸಾರ್ವಜನಿಕ ಅನುಕೂಲಕ್ಕೆ ದಕ್ಕುತ್ತಿದ್ದಂತೆಯೇ ಹೊಸ ವಿವಾದ ಹುಟ್ಟಿಕೊಂಡಿತ್ತು. ಅದು, ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿಚಾರ.
ದೇಶದ ವಿವಿಧೆಡೆಗಳಲ್ಲಿರುವ ಮೆಟ್ರೊಗಳಲ್ಲಿ ಇಂಗ್ಲಿಷ್ ಮತ್ತು ನಿರ್ದಿಷ್ಟ ಪ್ರದೇಶದ ಪ್ರಾದೇಶಿಕ ಭಾಷೆ ಮಾತ್ರ ಇದ್ದರೆ, ಬೆಂಗಳೂರಿನಲ್ಲಿ ಮಾತ್ರ ಸೈನ್ ಬೋರ್ಡ್ ಗಳಲ್ಲಿ, ಕನ್ನಡ, ಇಂಗ್ಲಿಷ್ ನೊಂದಿಗೆ, ಹಿಂದಿ ಸಹ ಹೇರಲಾಗಿತ್ತು. ಈ ಕುರಿತು ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಹಿಂದಿ ಹೇರಿಕೆಗೆ ಸಿದ್ದರಾಮಯ್ಯ ವಿರೋಧ
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ವಿರೋಧ ವ್ಯಕ್ತಪಡಿಸಿದ್ದರು. ಇದು ರಾಜ್ಯ ಸರ್ಕಾರದ ಯೋಜನೆ, ಕೇಂದ್ರ ಸರ್ಕಾರದ್ದಲ್ಲ. ಹೀಗಿರುವಾಗ ಮೆಟ್ರೋದಲ್ಲಿ ಹಿಂದಿ ಹೇರಿಕೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
|
ಬಿಎಂಆರ್ ಸಿಎಲ್ ಗೆ ನೋಟೀಸ್
ಅಲ್ಲದೆ ಬಿಎಂಆರ್ ಸಿಎಲ್ ನ ಈ ಕ್ರಮವನ್ನು ಖಂಡಿಸಿ, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ), ಬಿಎಂಆರ್ ಸಿಎಲ್ ಗೆ ನೋಟೀಸ್ ಸಹ ಜಾರಿಗೊಳಿಸಿತ್ತು. ಬಹುಸಂಖ್ಯಾತ ಕನ್ನಡಿಗರ ಭಾವನೆಗೆ ನೋವುಂಟು ಮಾಡುವ ಹಿಂದಿ ಹೇರಿಕೆಯ ಕ್ರಮವನ್ನು ಕೈಬಿಡುವಂತೆ ಹೇಳಿತ್ತು.
ರಾಷ್ಟ್ರೀಯ ಮಾಧ್ಯಮಗಳಲ್ಲೂ ಮೆಟ್ರೋ ಸದ್ದು
ಕೆಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಕುರಿತು ಪರ-ವಿರೋಧ ಚರ್ಚೆಯಾಗಿತ್ತು. ಉತ್ತರ ಭಾರತದ ಹಲವು ಮಾಧ್ಯಮಗಳು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡು, ಬೆಂಗಳೂರಿಗರು ಉದಾರಿಗಳಾಗಬೇಕು ಎಂಬೆಲ್ಲ ಸಲಹೆಯನ್ನೂ ನೀಡಿದ್ದರು. ಆದರೆ ಕನ್ನಡವನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ತಂತ್ರ ಇದು ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕೆಲ ಪ್ರಜ್ಞಾವಂತ ಕನ್ನಡಿಗರ ಕಾಳಜಿ ತುಂಬಿದ ಹೋರಾಟದಿಂದಾಗಿ ನಮ್ಮ ಮೆಟ್ರೋದಲ್ಲಿ 'ಹಿಂದಿ ಬೇಡ' ಹೋರಾಟ ಯಶಸ್ಸು ಕಾಣುತ್ತಿದೆ.
|
ಹೋರಾಟಕ್ಕೆ ಇಂಬು ನೀಡಿದ ಹ್ಯಾಶ್ ಟ್ಯಾಗ್ಸ್
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹಲವು ಕನ್ನಡ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಗಳನ್ನು ಸೃಷ್ಟಿಸಿ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಇಂಬುನೀಡಿದರು. #nammametrohindibeda ಹಾಗೂ #nammametrokannadasaaku ಎಂಬ ಎರಡು ಹ್ಯಾಶ್ ಟ್ಯಾಗ್ ಗಳು ಕನ್ನಡಿಗರ ಆಕ್ರೋಶ ಪ್ರಕಟಣೆಗೆ ಸಾಧನವಾದವು. ಅಷ್ಟೇ ಅಲ್ಲ, ಹಲವು ಪರಭಾಷಿಕರೂ(ತಮಿಳು, ತೆಲುಗು) ನಮ್ಮ ಮೆಟ್ರೋದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಯನ್ನು ಉಪಯೋಗಿಸಬೇಕು ಎಂಬುದನ್ನು ಬೆಂಬಲಿಸಿದ್ದು ಇಲ್ಲಿ ಉಲ್ಲೇಖನೀಯ.