ಜೈಲಿಗೆ ಕಳಿಸ್ತೀವಿ ಹುಷಾರ್... ಅಧಿಕಾರಿಗಳಿಗೆ ಹೈ ಎಚ್ಚರಿಕೆ
ಬೆಂಗಳೂರು, ಡಿ. 2: ನಗರದಲ್ಲಿ ಪರಿಸರ ಮಾಲಿನ್ಯ ಅತಿ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಆದರೆ, ಆಡಳಿತ ಯಂತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿಗಳು ಮಾತ್ರ ಯೋಜನೆ ಜಾರಿಗೆ ತರುವುದಿರಲಿ, ಮಾಲಿನ್ಯ ಉಂಟಾಗದಂತೆ ಕ್ರಮ ಕೈಗೊಳ್ಳಲು ಕೂಡ ಉದಾಸೀನ ತೋರುತ್ತಿದೆ.
ನಗರದ ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿರುವ ರೇಷ್ಮೆ ನೂಲು ಕೈಗಾರಿಕೆಗಳು ಮಾಲಿನ್ಯ ಉಂಟುಮಾಡುತ್ತಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. [ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್ ಸೈಟ್]
ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಹಾಗೂ ನ್ಯಾ. ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಅಧಿಕಾರಿಗಳ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ. [ಕೆಎಸ್ ಪಿಸಿಬಿ ಸೂಪರ್ ಸೀಡ್ ಮಾಡಬಹುದೇ?]
ಅಲ್ಲದೆ, ಆರೋಪ ಕುರಿತು ಸ್ಪಷ್ಟೀಕರಣ ನೀಡಲು ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಖುದ್ದು ಹಾಜರಾಗುವಂತೆ ಹೈಕೋರ್ಟ್ ಆದೇಶ ನೀಡಿದೆ. [ಬೆಂಗಳೂರಲ್ಲಿ ಶಬ್ದ ಮಾಲಿನ್ಯ, ಹೈ ಗರಂ]
ಪ್ರಕರಣವೇನು?: ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿರುವ ರೇಷ್ಮೆ ನೂಲು ಕೈಗಾರಿಕೆ ಘಟಕಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಸುತ್ತಲಿನ ಜನರಲ್ಲಿ ಅನಾರೋಗ್ಯ ಹೆಚ್ಚುತ್ತಿದೆ. ಆದ್ದರಿಂದ ಈ ಘಟಕಗಳನ್ನು ಬಂದ್ ಮಾಡಬೇಕೆಂದು ಕರ್ನಾಟಕ ಪರಿಸರ ಮಾಲಿನ್ಯ ಮಂಡಳಿ (ಕೆಎಸ್ಪಿಸಿಬಿ) ಆದೇಶ ನೀಡಿತ್ತು. ಆದರೆ, ಈ ಆದೇಶದ ಜಾರಿಗೆ ಘಟಕಗಳ ಮಾಲೀಕರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಆಸಕ್ತಿ ತೋರಿರಲಿಲ್ಲ. [ಶಬ್ದ ಮಾಲಿನ್ಯಕ್ಕೆ ಸದ್ಯದಲ್ಲೇ ಬೀಳಲಿದೆ ಕಡಿವಾಣ]
ಆಗ ಈ ಘಟಕಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಬಂದ್ ಮಾಡಬೇಕೆಂದು ಬಿಬಿಎಂಪಿ ಹಾಗೂ ಬೆಸ್ಕಾಂ ಇಲಾಖೆಗಳಿಗೆ ಕೆಎಸ್ಪಿಸಿಬಿ ಆದೇಶಿಸಿತ್ತು. ಈ ಅಧಿಕಾರಿಗಳೂ ಆದೇಶವನ್ನು ನಿರ್ಲಕ್ಷಿಸಿದ್ದರು.