ಹೈಕೋರ್ಟ್ ನಿಂದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಮಾನತು
ಬೆಂಗಳೂರು, ನವೆಂಬರ್ 8: ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ತೇಜಸ್ ಕುಮಾರ್ ಅವರನ್ನು ಹೈಕೋರ್ಟ್ ಸೇವೆಯಿಂದ ಅಮಾನತುಗೊಳಿಸಿದೆ. ಜತೆಗೆ ಇಲಾಖಾ ವಿಚಾರಣೆ ನಡೆಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಗುಂಜೂರು ಗ್ರಾಮದ ಜಮೀನು ವ್ಯಾಜ್ಯ ಒಂದರಲ್ಲಿ ಈ ತೀರ್ಪು ನೀಡಿದೆ. ಇಲ್ಲಿನ ಸರ್ವೇ ನಂ.138ರಲ್ಲಿ 2 ಎಕರೆ ಜಮೀನನ್ನು ವೆಂಕಟಗಿರಿಯಪ್ಪ ಎಂಬವರಿಗೆ ಮಂಜೂರು ಮಾಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಮೂರು ತಿಂಗಳಿನಲ್ಲಿ ನಿಖರ ಅಭಿಪ್ರಾಯ ನೀಡುವಂತೆ ಹೈಕೋರ್ಟ್ ತಹಶೀಲ್ದಾರರಿಗೆ ಸೂಚಿಸಿತ್ತು.
ಆದರೆ ಈ ಸಂಬಂಧ ನಿಖರ ಅಭಿಪ್ರಾಯವನ್ನು ತಹಶೀಲ್ದಾರರು ನೀಡಿರಲಿಲ್ಲ. ಈ ಕಾರಣಕ್ಕೆ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ತಹಶೀಲ್ದಾರರನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಜತೆಗೆ ಏಕೆ ವಿಚಾರಣೆ ನಡೆಸಿಲ್ಲ ಎಂಬ ಬಗ್ಗೆ ಒಂದು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದೆ.
Comments
English summary
The Karnataka High Court has suspended Tahsildar Tejas Kumar of Bangalore East Taluk for not followed order of the court