ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಡಿಸೆಂಬರ್ 07 : ಭೂಪರಿವರ್ತನೆಯಲ್ಲಿ ಅನ್ಯಾಯ ನಡೆದಿರುವ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯಿತು.
ಕಂದಾಯ ಇಲಾಖೆ ಅಧಿಕಾರಿಗಳನ್ನು ಭಿಕ್ಷುಕರಿಗೆ ಹೋಲಿಸಿದ ನ್ಯಾಯಾಧೀಶರು, ಕಂದಾಯ ಅಧಿಕಾರಿಗಳಿಗೂ ದೇವಾಲಯದ ಮುಂದಿನ ಭಿಕ್ಷುಕರಿಗೂ ಏನು ವ್ಯತ್ಯಾಸ ಎಂದು ಕೇಳಿದರು.
ಭೂಪರಿವರ್ತನೆಯಲ್ಲಿ ಅನ್ಯಾಯ ಎಸಗಿದ್ದಾರೆಂದು ಆರೋಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಿ.ಸಿ.ಪಾಲಯ್ಯ ಅವರಿಗೆ ಸರಿಯಾಗಿ ಛೀಮಾರಿ ಹಾಕಿದ ಹೈಕೋರ್ಟ್ , ಕೆಎಟಿ ಆದೇಶ ಇದ್ದರೂ ಭೂ ಪರಿವರ್ತನೆ ಏಕೆ ಮಾಡಿಲ್ಲ?, ಶ್ರೀಮಂತರ ಜಮೀನನ್ನು ಮಾತ್ರ ಭೂಪರಿವರ್ತನೆ ಮಾಡಿಕೊಟ್ಟಿದ್ದೀರಾ ಬಡವರ ಜಮೀನನ್ನು ಮಾಡಿಕೊಟ್ಟಿಲ್ಲ ಏಕೆ ಎಂದು ಪ್ರಶ್ನಿಸಿತು. ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಸರಿಯಾಗಿ ತಪರಾಕಿ ಹಾಕಿತು.
ಪಾಲಯ್ಯ ಅವರನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಕಾಫಿ ಕುಡಿಯಲು ವಿಂಡ್ಸರ್ಮ್ಯಾನರ್ಗೆ ಹೋಗುತ್ತೀರಾ, ನಿಮ್ಮ ಮಕ್ಕಳೆಲ್ಲಾ ಐಶಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ, ಸರ್ಕಾರಿ ಸಂಬಳದಲ್ಲಿ ಇದನ್ನೆಲ್ಲಾ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಭೂಪರಿವರ್ತನೆ ಮಾಡಿಕೊಡಲು ಅಧಿಕಾರಿಗಳು ಪಾಲು ಕೇಳುತ್ತಾರಂತಲ್ಲಾ, ಅವರೆಲ್ಲಾ ಏನು ರೈತರ ಸಂಬಂಧಿಕರಾ ಎಂದು ಖಾರವಾಗಿ ನ್ಯಾಯಾಧೀಶರು ಪ್ರಶ್ನಿಸಿರು.