ಕಡಲೆಕಾಯಿ ಪರಿಷೆ! ಶ್ರದ್ಧೆ ಸಂಭ್ರಮದ ಜಾತ್ರೆ
ಬೆಂಗಳೂರು, ನವೆಂಬರ್ 13 : ಐತಿಹಾಸಿಕ ಹಬ್ಬವೆಂದು ಪ್ರಸಿದ್ಧಿ ಪಡೆದಿರುವ ಬೆಂಗಳೂರು ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಇಂದು (ನ.13)ರಂದು ಅಧಿಕೃತ ಚಾಲನೆ ದೊರೆಯಿತು.
ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರಿನಲ್ಲಿ ಏಳು ನದಿಗಳಿದ್ದವು ಅದರಲ್ಲಿ ಪ್ರಮುಖವಾದ ನದಿ ವೃಷಭಾವತಿ ಆದರೆ ಇಂದು ವೃಷಭಾವತಿ ನದಿಯಾಗಿರದೆ ಚರಂಡಿಯಾಗಿ ಮಾರ್ಪಟ್ಟಿದೆ ಹಾಗಾಗಿ ನದಿಯ ಪುನರುತ್ಥಾನದ ಅಗತ್ಯವಿದೆ ಎಂದರು.
In Pics : ತಾಜಾತಾಜಾ ಕಳ್ಳೆಕಾಯ್, ಗರಮಾಗರಂ ಕಳ್ಳೆಕಾಯ್
ವೃಷಭಾವತಿ ನದಿ ಉಗಮ ಸ್ಥಾನ ದೊಡ್ಡ ಬಸವಣ್ಣನ ಅಡಿದಾವರಿಗಳಲ್ಲಿ ಎಂಬ ಪ್ರತೀತಿ ಇದೆ. ವೃಷಭಾವತಿಯ ಪುನರುತ್ಥಾನಕ್ಕೆ ಅವಶ್ಯವಾಗಿರುವ ಹಣವನ್ನು ಕೇಂದ್ರ ಸರ್ಕಾರದಿಂದ ಅನುದಾನವಾಗಿ ನೀಡಲು ಮನವಿ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಜತೆಗೂ ಕೂಡ ಅನುದಾನದ ಕುರಿತು ಮಾತನಾಡುತ್ತೇವೆ ಎಂದು ಹೇಳಿದರು.
ಮೇಯರ್ ಸಂಪತ್ ರಾಜ್ ಮಾತನಾಡಿ, ದೇವಾಲಯದಲ್ಲಿ ಕಡಲೆಕಾಯಿ ಅಭಿಷೇಕ ಮಾಡಲಾಗಿದೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ಕಡಲೆಕಾಯಿ ಮಿಠಾಯಿಯಿಂದ ಅಪೌಷ್ಠಿಕತೆಯನ್ನು ಹೋಗಲಾಡಸಬಹುದಾಗಿದೆ. ಬೆಂಗಳೂರು ಐಟಿ ಸಿಟಿಯಾದರೂ ಸಂಸ್ಕೃತಿ ಮರೆಯಾಗಿಲ್ಲ. ಮುಂಬರುವ ಪರಿಷೆಗೆ 198 ವಾರ್ಡ್ ಕಾರ್ಪೊರೇಟರ್ಗಳನ್ನು ಕರೆಸುವ ಆಲೋಚನೆ ಇದೆ ಎಂದು ನುಡಿದರು.
ಪರಿಷೆ ಸಂಭ್ರಮ: ಸಂಚಾರ ಬದಲಿ ಮಾರ್ಗ, ಪಾರ್ಕಿಂಗ್ ಎಲ್ಲಿ?
ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಪದ್ಮಾವತಿ ನರಸಿಂಹ ಉಪಸ್ಥಿತರಿದ್ದರು.
ಪರಿಷೆ ಮೊದಲ ದಿನ : ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವಣ್ಣನಿಗೆ ಹಾಲು, ಮೊಸರು ಅಭಿಷೇಕ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ದೊರೆತಿದೆ. ಮುಂಜಾನೆ 6 ಗಂಟೆಯಿಂದಲೇ ಪೂಜೆಗಳು ನಡೆಯುತ್ತಿದೆ. 200 ಲೀಟರ್ ಹಾಲು ಹಾಗೂ 100 ಲೀಟರ್ ಮೊಸರು, 70ಕೆಜಿ ಕಡಲೆಕಾಯಿಯ ಅಭಿಷೇಕ ಮಾಡಲಾಯಿತು.
ಕಡಲೆಗೆ ಹೆಚ್ಚಿದ ಬೇಡಿಕೆ: ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುವ ಕಡಲೆಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಹಸಿ, ಹುರಿದ, ಬೇಯಿಸಿದ ತರಹೇವಾರಿ ತಳಿಯ ಕಡಲೆಕಾಯಿಗಳು ಸೇರಿ 30 ರೂನಿಂದ 40 ರೂವರೆಗೆ ಮಾರಾಟಗೊಳ್ಳುತ್ತಿದೆ.
ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ
ಕಳೆದ ವರ್ಷ ನೆಲಕಚ್ಚಿದ್ದ ನೆಲಗಡಲೆ ಈ ವರ್ಷ ಮಳೆಯಿಂದಾಗಿ ಚೇತರಿಕೆ ಕಂಡಿದ್ದು ಉತ್ತಮ ಇಳುವರಿ ಬಂದಿದೆ. ಕಳೆದ ವರ್ಷ ಒಂದು ಚೀಲಕ್ಕೆ(40 ಕೆ.ಜಿ) ೫ಸಾವಿರದಿಂದ 6 ಸಾವಿರ ಇದ್ದ ಕಡಲೆಕಾಯಿ ಈ ವರ್ಷ ೩ಸಾವಿರದಿಂದ ನಾಲ್ಕೂವರೆ ಸಾವಿರಕ್ಕೆ ಇಳಿಕೆಯಾಗಿದೆ.
ಕಡಲೆಕಾಯಿ ಪರಿಷೆಗೆ ನಗರದ ರಾಮಕೃಷ್ಣ ಆಶ್ರಮದಿಂದ ಎಪಿಎಸ್ ಕಾಲೇಜು ರಸ್ತೆ, ಬ್ಯೂಗಲ್ ರಾಕ್ ರಸ್ತೆಯಿಂದ ಡಿವಿಜಿ ರಸ್ತೆ, ಗೋಕುಲ ಇನ್ಸ್ಸ್ಟಿಟ್ಯೂಟ್ ಸಮೀಪವಿರುವ ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆ, ಹನುಮಂತನಗರ 50 ಅಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಯ್ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಇಟ್ಟಿದ್ದಾರೆ.
ಕಡಲೆಕಾಯಿ ಮಾತ್ರವಲ್ಲದೇ ಗೃಹೋಪಯೋಗಿವಸ್ತುಗಳೂ ಇದ್ದವು: ರಸ್ತೆಯ ಇಕ್ಕೆಲಗಳಲ್ಲಿ ನಾನಾ ತಳಿಯ ಕಡಲೆಕಾಯಿಗಳು, ಹಣ್ಣಿನ ವ್ಯಾಪಾರ, ಮಹಿಳೆಯರ ಅಲಂಕಾರಿಕ ವಸ್ತುಗಳು,ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು, ಬಟ್ಟೆ ಮಳಿಗೆ, ಕಡಲೆಪುರಿ ಸೇರಿದಂತೆ ವಿವಿಧ ಸಣ್ಣಪುಟ್ಟ ಮಾರಾಟಗಾರರು ವ್ಯಾಪಾರದಲ್ಲಿ ನಿರತರಾಗಿದ್ದರು.
ಶಾಲೆ, ಕಾಲೇಜುಗಳಿಗೆ ಚಕ್ಕರ್ ಹೊಡೆದು ಪರಿಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು: ಬೆಳಗ್ಗೆ ಕಡಲೆಕಾಯಿ ಪರಿಷೆ ಉದ್ಘಾಟನೆಗೂ ಮುನ್ನವೇ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಪರಿಷೆಯಲ್ಲಿ ಪಾಲ್ಗೊಂಡಿದ್ದರು. ಕಡಲೆಕಾಯಿಗಳನ್ನು ಖರೀದಿ ಮಾಡುತ್ತಾ, ಸ್ನೇಹಿತರೊಂದಿಗೆ ಸಂತಸದಿಂದ ಕಳೆದ ದೃಶ್ಯಗಳು ವಿಶೇಷವಾಗಿತ್ತು.