ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ ಜಿಎಸ್ ಟಿ ಯುಗಾರಂಭ
ಬೆಂಗಳೂರು, ಜುಲೈ 1: ಇಂದು ರಸ್ತೆಯಲ್ಲಿ, ಮನೆಯಲ್ಲಿ, ಬಸ್ಸಿನಲ್ಲಿ, ಆಫೀಸಿನಲ್ಲಿ ಎಲ್ಲಿ ನೋಡಿದರಲ್ಲಿ ಜಿಎಸ್ ಟಿಯದೇ ಸುದ್ದಿ. ಪುಟ್ಟ ಮಗುವಿಗೂ ರಾಷ್ಟ್ರದಲ್ಲೇನೋ ತನಗೆ ಗೊತ್ತಿಲ್ಲದ ಮಹತ್ವದ ಸಂಗತಿ ಸಂಭವಿಸುತ್ತಿದೆ ಎಂದು ಅನುಮಾನ ಹುಟ್ಟುವ ಮಟ್ಟಿಗೆ ಜಿಎಸ್ ಟಿ ಹವಾ ಹಬ್ಬಿದೆ.
ಒಂದು ರಾಷ್ಟ್ರ, ಒಂದು ತೆರಿಗೆ: ಟ್ವಿಟ್ಟರ್ ನಲ್ಲೂ ಜಿಎಸ್ ಟಿ ಜಪ
ಯಾವುದೋ ಸಿನೆಮಾ ನೋಡುತ್ತಲೋ, ಪುಸ್ತಕ ಓದುತ್ತಲೋ, ಆಫೀಸ್ ಕೆಲಸ ಮಾಡುತ್ತಲೋ ಮಧ್ಯರಾತ್ರಿ ಎಚ್ಚರದಿಂದಿರುತ್ತಿದ್ದ ಜನರು ನಿನ್ನೆ (ಜೂನ್ 30) ಜಿಎಸ್ ಟಿ ಯುಗಾರಂಭಕ್ಕೆ ಸಾಕ್ಷಿಯಾಗುವುದಕ್ಕಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕುಳಿತಿದ್ದರು. ಎಲ್ಲವೂ ಅಂದುಕೊಂಡಂತೇ ಆಗಿ, ಮಧ್ಯರಾತ್ರಿಯಿಂದ ಜಿಎಸ್ ಟಿ ಸಾ ಮ್ರಾಜ್ಯ ಆರಂಭವಾಗಿದೆ. ಇನ್ನೇನಿದ್ದರು ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆ!
ಜಿಎಸ್ ಟಿ ಹುಟ್ಟಿದ್ದು ಯಾವಾಗ ಗೊತ್ತಾ?
ರಾತ್ರಿಯೆಲ್ಲ ನಿದ್ದೆಗೆಟ್ಟು ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕಿವಿತುಂಬಿಸಿಕೊಂಡವರೂ ಬೆಳಗ್ಗೆ ಕಾಯುತ್ತಿದ್ದುದು ದಿನಪತ್ರಿಕೆಗಾಗಿಯೇ. ಇಂದು (ಜುಲೈ 1) ದಿನಕ್ಕಿಂತ ಸ್ವಲ್ಪ ಬೇಗನೇ ಎದ್ದು, ದಿನಪತ್ರಿಕೆಗಳಲ್ಲಿ ಜಿಎಸ್ಟಿ ಕವರೇಜ್ ಹೇಗಿದೆ ಎಂದು ಕುತೂಹಲದಿಂದ ಕಾದವರಿಗೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳು ಜಿಎಸ್ ಟಿ ಕುರಿತು ಹೇಗೆ ಕವರೇಜ್ ನೀಡಿವೆ ಎಂಬ ಕುತೂಹಲವನ್ನು ತಣಿಸಲು 'ಒನ್ ಇಂಡಿಯಾ ಕನ್ನಡ' ಪ್ರಯತ್ನಿಸಿದೆ. ಮಧ್ಯರಾತ್ರಿ 12 ಗಂಟೆಯ ನಂತರ ಎಂದರೆ ಬಹುಪಾಲು ಎಲ್ಲ ದಿನಪತ್ರಿಕೆಗಳೂ ಮುದ್ರಣಕ್ಕೆ ಹೋಗುವ ಸಮಯ.
ಆದರೂ ಅತ್ಯಂತ ಮಹತ್ವದ ಸಂದರ್ಭವಾಗಿದ್ದರಿಂದ ಬಹುಪಾಲು ಎಲ್ಲ ಪತ್ರಿಕೆಗಳೂ ಕಡಿಮೆ ಅವಧಿಯಲ್ಲೇ ಹೆಚ್ಚಿನ ಕವರೇಜ್ ನೀಡಲು ಯಶಸ್ವೀ ಪ್ರಯತ್ನ ಮಾಡಿವೆ.
ಮಧ್ಯರಾತ್ರಿ ತೆರಿಗೆ ಕ್ರಾಂತಿ
ಹಾಗೆ ನೋಡೋದಕ್ಕೆ ಹೋದ್ರೆ, ಇಂದಿನ ಹೆಡ್ ಲೈನ್ ಆಫ್ ದಿ ಡೆ ವಿಜಯ ಕರ್ನಾಟಕಕ್ಕೇ ಸಲ್ಲಬೇಕು! 'ಮಧ್ಯರಾತ್ರಿ ತೆರಿಗೆ ಕ್ರಾಂತಿ' ಎಂಬ ಅರ್ಥವತ್ತಾದ ಪುಟ್ಟ ಶೀರ್ಷಿಕೆಯಲ್ಲಿ 'ಕ್ರಾಂತಿ' ಯಲ್ಲಿರುವ ಪೂಜ್ಯವನ್ನು ಗಡಿಯಾರದಂತೆ ಬಿಂಬಿಸಿ, ಅದರಲ್ಲಿ '12 ಗಂಟೆ'ಯನ್ನು ಮೂಡಿಸಿರುವ ಕೌಶಲ ಅಭಿನಂದನೀಯ.
ನಡುರಾತ್ರಿ ಒಂದಾದ ಕರಭಾರತ
ನಡುರಾತ್ರಿ ಒಂದಾದ ಕರಭಾರತ ಎಂಬ ಬ ಸರಳ ಆದರೆ ಅರ್ಥವತ್ತಾದ ಶೀರ್ಷಿಕೆಯನ್ನು ಉದಯವಾಣಿ ನೀಡಿದೆ. ಸುಮಾರು ಅರ್ಧ ಪುಟಗಳಲ್ಲಿ ಜಿಎಸ್ ಟಿಯನ್ನು ಸರಳವಾಗಿ ವಿವರಿಸಿ, ಸರಕು ಮತ್ತು ಸೇವಾ ತೆರಿಗೆಯ ಅಗ್ಗ, ತುಟ್ಟಿಯ ಪಟ್ಟಿಯನ್ನು ನೀಡುವ ಪ್ರಯತ್ನ ಮಾಡಿದೆ.
ಭಾರತಕ್ಕೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್
ಭಾರತಕ್ಕೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂಬ ಶೀರ್ಷಿಕೆ ನೀಡುವುದರೊಂದಿಗೆ 'ವಿಜಯವಾಣಿ' ಪತ್ರಿಕೆ, ನಿನ್ನೆ (ಜೂನ್ 30) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ವಾಕ್ಯವನ್ನೇ ಪುನರುಚ್ಚರಿಸಿದೆ. ಮಧ್ಯರಾತ್ರಿ ಮಹಾಪರ್ವ, ಜಿಎಸ್ ಟಿಯಿಂದ ಆರ್ಥಿಕ ಏಕೀಕರಣ, ಮೋದಿ ವ್ಯಾಖ್ಯಾನ ಎಂಬಿತ್ಯಾದಿ ಕಿಕ್ಕರ್ ಗಳೊಂದಿಗೆ ಅರ್ಧ ಪುಟದ ವಿಸ್ತೃತ ಸುದ್ದಿ ನೀಡಿದೆ.
ದೇಶಕ್ಕೊಂದೇ ತೆರಿಗೆ ನೀತಿ ಜಾರಿ
ದೇಶಕ್ಕೊಂದೇ ತೆರಿಗೆ ನೀತಿ ಜಾರಿ ಎಂದು ಪ್ರಜಾವಾಣಿ ಎಂದಿನಂತೆ ಸರಳ ಶೀರ್ಷಿಕೆ ನೀಡಿದೆ. ಜಿಎಸ್ ಟಿ ಕುರಿತು ವಿಸ್ತೃತ ಮಾಹಿತಿಯನ್ನೂ ಪ್ರಜಾವಾಣಿ ನೀಡಿದೆ.
ದೇಶದಲ್ಲಿನ್ನು ಜಿಎಸ್ ಟಿ ಪರ್ವ
ಸದಾ ಒಂದಿಲ್ಲೊಂದು ವಿಭಿನ್ನ, ಆಕರ್ಷಕ ಶೀರ್ಷಿಕೆ ನೀಡುವಲ್ಲಿ ಮುಂದಿರುವ ವಿಶ್ವವಾಣಿ, ಜಿಎಸ್ ಟಿ ಕುರಿತು ಮತ್ತಷ್ಟು ಆಕರ್ಷಕ ಶೀರ್ಷಿಕೆ ನೀಡಬಹುದು ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. 'ದೇಶದಲ್ಲಿನ್ನು ಜಿಎಸ್ ಟಿ ಪರ್ವ' ಎಂಬ ಸರಳ ಶೀರ್ಷಿಕೆ ನೀಡಿರುವ 'ವಿಶ್ವವಾಣಿ', ಮೊದಲ ಪುಟದ ಫ್ಲೈಯರ್ ನಲ್ಲಿ ಚಿಕ್ಕ ಸುದ್ದಿಯನ್ನಷ್ಟೇ ನೀಡಿದೆ.
ಜಿಎಸ್ ಟಿ ಯುಗ ಆರಂಭ
ಕನ್ನಡ ಪ್ರಭ ಪತ್ರಿಕೆ 'ಜಿಎಸ್ ಟಿ ಯುಗ ಆರಂಭ' ಎಂಬ ಸರಳ ಶೀರ್ಷಿಕೆ ನೀಡಿ, ಸದನದ ವೇದಿಕೆಯಲ್ಲಿ ಕುಳಿತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮಿದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿದ್ದ ಚಿತ್ರವನ್ನು ಪ್ರಕಟಿಸಿದೆ.
ಹೊಸ ಕರ ಸೇವೆ ಶುರು
ಅರ್ಥವತ್ತಾದ ವ್ಯಂಗ್ಯಚಿತ್ರದೊಂದಿಗೆ ಸಂಯುಕ್ತ ಕರ್ನಾಟಕ, 'ಹೊಸ ಕರ ಸೇವೆ ಶುರು' ಎಂಬ ತಲೆಬರಹದಲ್ಲಿ, ಜಿಎಸ್ ಟಿಗೆ ಸುಮಾರು ಮುಕ್ಕಾಲು ಪುಟಗಳ ಕವರೇಜ್ ನೀಡಿದೆ. ಪ್ರತಿಪಕ್ಷಗಳ ಬಹಿಷ್ಕಾರದ ನಡುವೆ ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿ ಎಂಬ ಕಿಕ್ಕರ್ ಕೂಡ ಆಕರ್ಷಕವಾಗಿದೆ.
ಜಿಎಸ್ ಟಿ ಯುಗ ಆರಂಭ
ಮಧ್ಯರಾತ್ರಿಯ ವಿಶೇಷ ಅಧಿವೇಶನದಲ್ಲಿ ಏಕ ತೆರಿಗೆ ವ್ಯವಸ್ಥೆಗೆ ಐತಿಹಾಸಿಕ ಚಾಲನೆ ಎಂಬ ಕಿನ್ನರ್ ನಲ್ಲಿ, 'ಜಿಎಸ್ ಟಿ ಯುಗ ಆರಂಭ' ಎಂಬ ಶೀರ್ಷಿಕೆಯನ್ನು ವಾರ್ತಾ ಭಾರತಿ ನೀಡಿದೆ. ಮುಖಪುಟದ ಸುಮಾರು ಅರ್ಧ ಭಾಗವನ್ನು ಜಿಎಸ್ ಟಿ ಗೆಂದೇ ಮೀಸಲಿಟ್ಟಿದೆ.